ಹೊಣೆಗಾರಿಕೆ ಕಣ್ಮರೆಯಾದರೆ ಪ್ರಜಾಪ್ರಭುತ್ವವೂ ದುರ್ಬಲ

 ಆತ್ಮಸಾಕ್ಷಿ * ಬಿವಿಸೀ


ಸಮಾಜದಲ್ಲಿ ದೊಡ್ಡ ದುರಂತಗಳು ಸಂಭವಿಸಿದಾಗ ಸಾಮಾನ್ಯವಾಗಿ ಕೇಳಿಬರುವ ಮಾತೊಂದು ಇದೆ - `ಹೀಗಾಯಿತು', `ಇದು ಆಗಿಬಿಟ್ಟಿತು', `ಇದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ'. ಯುದ್ಧವಾಗಲಿ, ಪರಿಸರ ಮಾಲಿನ್ಯವಾಗಲಿ, ಪರೀಕ್ಷಾ ಅಕ್ರಮವಾಗಲಿ ಅಥವಾ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಲಿ, ಘಟನೆಗಳ ಕುರಿತು ಮಾತನಾಡುವಾಗ ಅವುಗಳಿಗೆ ಕಾರಣರಾದ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗಿಂತ ಘಟನೆಗಳನ್ನೇ ಹೆಚ್ಚು ಪ್ರಸ್ತಾಪಿಸಲಾಗುತ್ತದೆ. ಈ ರೀತಿಯ ಭಾಷೆಯ ಬಳಕೆ ನಿಧಾನವಾಗಿ ಹೊಣೆಗಾರಿಕೆಯನ್ನು ಮಸುಕಾಗಿಸುತ್ತದೆ. ಪರಿಣಾಮವಾಗಿ ತಪ್ಪು ಯಾರದ್ದು ಎಂಬ ಮೂಲ ಪ್ರಶ್ನೆಯೇ ಸಾರ್ವಜನಿಕ ಚರ್ಚೆಯಿಂದ ಮಾಯವಾಗುತ್ತದೆ.

ಯಾವುದೇ ಅನಾಹುತ ತನ್ನಷ್ಟಕ್ಕೆ ತಾನೇ ಸಂಭವಿಸುವುದಿಲ್ಲ. ಪ್ರತಿಯೊಂದು ಘಟನೆಯ ಹಿಂದೆಯೂ ಒಂದು ನಿರ್ಧಾರ, ಒಂದು ನಿರ್ಲಕ್ಷ್ಯ, ಒಂದು ತಪ್ಪು ಯೋಜನೆ ಅಥವಾ ಜವಾಬ್ದಾರಿಯ ಕೊರತೆ ಇರುತ್ತದೆ. ಆದರೆ ಅಧಿಕಾರದ ವಲಯದಲ್ಲಿ ಹೊಣೆಗಾರಿಕೆಯನ್ನು ನೇರವಾಗಿ ಒಪ್ಪಿಕೊಳ್ಳುವ ಸಂಸ್ಕøತಿ ಕ್ಷೀಣಿಸಿದಂತೆ, ತಪ್ಪುಗಳಿಗೂ ವ್ಯಕ್ತಿಗಳಿಗೂ ನಡುವಿನ ಸಂಬಂಧವನ್ನು ಬೇರ್ಪಡಿಸುವ ಪ್ರಯತ್ನಗಳು ಹೆಚ್ಚುತ್ತಿವೆ. ಇದರಿಂದ ಘಟನೆಗಳ ಬಗ್ಗೆ ವಿಷಾದ ವ್ಯಕ್ತವಾಗುತ್ತದೆ; ಆದರೆ ಹೊಣೆ ಹೊರುವವರು ಮಾತ್ರ ಕಾಣಿಸುವುದಿಲ್ಲ.

ಪರಿಸರ ಮಾಲಿನ್ಯವನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ನದಿಗಳು ಕಲುಷಿತವಾಗುತ್ತವೆ, ಗಾಳಿ ವಿಷಮಯವಾಗುತ್ತದೆ, ಅರಣ್ಯಗಳು ನಾಶವಾಗುತ್ತವೆ. ಆದರೆ ಇದಕ್ಕೆ ಕಾರಣವಾದ ನೀತಿಗಳು ಯಾವುವು, ನಿಯಮಗಳನ್ನು ಉಲ್ಲಂಘಿಸಿದವರು ಯಾರು, ಮೇಲ್ವಿಚಾರಣೆಯಲ್ಲಿ ವಿಫಲರಾದವರು ಯಾರು ಎಂಬ ಪ್ರಶ್ನೆಗಳು ಬಹಳ ವಿರಳವಾಗಿ ಚರ್ಚೆಯಾಗುತ್ತವೆ. ಪರೀಕ್ಷಾ ಅಕ್ರಮಗಳ ಸಂದರ್ಭದಲ್ಲಿಯೂ ಇದೇ ಸ್ಥಿತಿ. ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತದೆ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ. ಆದರೆ ವ್ಯವಸ್ಥೆಯ ವೈಫಲ್ಯಕ್ಕೆ ಯಾರು ಉತ್ತರಿಸಬೇಕು ಎಂಬ ವಿಚಾರಕ್ಕಿಂತ ಪರೀಕ್ಷೆಯನ್ನು ಮರುನಡೆಸುವ ಚರ್ಚೆಯೇ ಹೆಚ್ಚು ನಡೆಯುತ್ತದೆ.

ಯುದ್ಧದ ಸಂದರ್ಭದಲ್ಲಿಯೂ ಇದೇ ಮನೋಭಾವ ಗೋಚರಿಸುತ್ತದೆ. ಸಾವಿರಾರು ಜೀವಗಳು ಕಳೆದುಹೋಗುತ್ತವೆ, ಅಪಾರ ಆರ್ಥಿಕ ನಷ್ಟ ಉಂಟಾಗುತ್ತದೆ. ಆದರೂ ಯುದ್ಧಕ್ಕೆ ಕಾರಣವಾದ ರಾಜಕೀಯ ನಿರ್ಧಾರಗಳು, ರಾಜತಾಂತ್ರಿಕ ವೈಫಲ್ಯಗಳು ಮತ್ತು ನಾಯಕತ್ವದ ಹೊಣೆಗಾರಿಕೆಯ ಬಗ್ಗೆ ಸಮಗ್ರ ಚರ್ಚೆ ನಡೆಯುವುದು ವಿರಳ. ಘಟನೆ ನಡೆದ ಬಳಿಕ ಅದರ ಪರಿಣಾಮಗಳನ್ನು ನಿರ್ವಹಿಸುವತ್ತ ಹೆಚ್ಚು ಗಮನ ಹರಿಯುತ್ತದೆ; ಆದರೆ ಅದು ಸಂಭವಿಸಲು ಕಾರಣವಾದ ನಿರ್ಧಾರಗಳನ್ನು ವಿಮರ್ಶಿಸುವ ಮನೋಭಾವ ಕಡಿಮೆಯಾಗುತ್ತಿದೆ.

ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಅಧಿಕಾರದ ಜೊತೆಗೆ ಹೊಣೆಗಾರಿಕೆಯೂ ಇರಬೇಕು. ಅಧಿಕಾರವನ್ನು ಬಳಸುವ ಪ್ರತಿಯೊಬ್ಬರೂ ತಮ್ಮ ನಿರ್ಧಾರಗಳಿಗೆ ಸಾರ್ವಜನಿಕವಾಗಿ ಉತ್ತರಿಸಬೇಕಾದ ವ್ಯವಸ್ಥೆಯೇ ಜನತಂತ್ರದ ಜೀವಾಳ. ಮಾಧ್ಯಮಗಳು, ನ್ಯಾಯಾಂಗ, ತನಿಖಾ ಸಂಸ್ಥೆಗಳು ಮತ್ತು ನಾಗರಿಕ ಸಮಾಜ ಈ ಹೊಣೆಗಾರಿಕೆಯನ್ನು ನೆನಪಿಸುವ ಕೆಲಸವನ್ನು ನಿರಂತರವಾಗಿ ಮಾಡಬೇಕು. ಘಟನೆಗಳ ಬಗ್ಗೆ ಕೇವಲ ವಿಷಾದ ವ್ಯಕ್ತಪಡಿಸುವುದರಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ತಪ್ಪು ಎಲ್ಲಿಯಾಯಿತು, ಯಾರು ಮಾಡಿದರು, ಮುಂದಿನ ದಿನಗಳಲ್ಲಿ ಅದನ್ನು ಹೇಗೆ ತಡೆಯಬೇಕು ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುವವರೆಗೆ ಜವಾಬ್ದಾರಿಯುತ ಆಡಳಿತ ಸಾಧ್ಯವಿಲ್ಲ. ಹೊಣೆಗಾರಿಕೆಯ ಸಂಸ್ಕೃತಿ ದುರ್ಬಲವಾದರೆ ಪ್ರಜಾಪ್ರಭುತ್ವವೂ ನಿಧಾನವಾಗಿ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ

WHEN COMMUNAL POLITICS POISONS TRADITION: A WARNING FROM UDUPI