ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸಿ: ಬಿಟ್ಟೀ ಹಂಚುವುದು ಸಾಕಿನ್ನು, ಕಟ್ಟುವ ಕೆಲಸ ಮಾಡಿ
ಗ್ಯಾರಂಟಿ ಯೋಜನೆಗಳ ದುರ್ಬಳಕೆಗೆ ಕನ್ನಡಿ ಹಿಡಿದ ಸಿಎಜಿ ಇರೋದು ಇದ್ದಹಾಗೆ * ಬಿವಿಸೀ ಯಾವುದೇ ಚುನಾಯಿತ ಸರ್ಕಾರದ ಮೊದಲ ಜವಾಬ್ದಾರಿ ತೆರಿಗೆದಾರರ ಹಣವನ್ನು ಜವಾಬ್ದಾರಿಯಿಂದ ಬಳಸಿ ಶಾಶ್ವತ ಸಾರ್ವಜನಿಕ ಸಂಪತ್ತನ್ನು ನಿರ್ಮಿಸುವುದು. ಅಭಿವೃದ್ಧಿ ಬಿಟ್ಟು ಜನಪ್ರಿಯ ಉಚಿತ ಕೊಡುಗೆಗಳಿಗೆ ಆದ್ಯತೆ ನೀಡಿದಾಗ ರಾಜ್ಯದ ಆರ್ಥಿಕ ಅಡಿಪಾಯ ಕುಸಿಯುತ್ತದೆ. ಕರ್ನಾಟಕ ಇಂದು ಅದೇ ಸಂಕಷ್ಟದಲ್ಲಿದೆ. ಬೃಹತ್ ಸಾರ್ವತ್ರಿಕ ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಿ, ಪ್ರಮುಖ ಅಭಿವೃದ್ಧಿ ಕ್ಷೇತ್ರಗಳು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿವೆ. ಶಾಶ್ವತ ಆರ್ಥಿಕ ಸ್ಥಗಿತ ತಪ್ಪಿಸಲು, ಈ ಅಸಮರ್ಥ ಉಚಿತ ಯೋಜನೆಗಳನ್ನು ರದ್ದುಪಡಿಸಿ ಹಣವನ್ನು ನಿಜವಾದ ಸಾರ್ವಜನಿಕ ಕಾಮಗಾರಿಗಳಿಗೆ ತಿರುಗಿಸುವುದು ಅನಿವಾರ್ಯ. ಗ್ಯಾರಂಟಿ ಯೋಜನೆಗಳ ಪರಿಣಾಮ ನೆಲಮಟ್ಟದಲ್ಲಿ ಕಾಣುತ್ತಿದೆ. ನಗರ-ಗ್ರಾಮೀಣ ರಸ್ತೆಗಳು ಹದಗೆಟ್ಟಿವೆ. ಸಾರಿಗೆ ಸಂಸ್ಥೆಗಳು ಬಸ್ ಓಡಿಸಲು ಪರದಾಡುತ್ತಿವೆ. ನೀರಾವರಿ ಯೋಜನೆಗಳು ಅರ್ಧಕ್ಕೆ ನಿಂತು ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಶಿಕ್ಷಕರು, ಮೂಲಸೌಕರ್ಯಗಳ ಕೊರತೆ ಇದೆ. ಆಸ್ಪತ್ರೆಗಳಲ್ಲಿ ಔಷಧ, ವೈದ್ಯರ ಕೊರತೆಯಿಂದ ಬಡವರು ಖಾಸಗಿ ಆಸ್ಪತ್ರೆ ಮೊರೆ ಹೋಗಬೇಕಾಗಿದೆ. ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇರುವುದರಿಂದ ಆಡಳಿತ ಕುಂಠಿತವಾಗಿದೆ, ಜನಸಾಮಾನ್ಯರ ಕೆಲಸಗಳು ವಿಳಂಬವಾಗುತ್ತಿವೆ. ರಾಜ್ಯ ಪ್ರತಿ ವರ್ಷ ಸುಮಾರು ಒಂದ...