ಬಿಜೆಪಿಗೂ ತಗುಲಿದ ತೃಣಮೂಲದ 'ಸಂಸ್ಕøತಿ'
* ಬಿವಿಸೀ
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ನ ದೀರ್ಘಕಾಲದ ಆಡಳಿತವನ್ನು ಭ್ರಷ್ಟಾಚಾರ, ಸುಲಿಗೆ, ದಬ್ಬಾಳಿಕೆ ಮತ್ತು ರಾಜಕೀಯ ಆಶ್ರಿತ ವ್ಯವಸ್ಥೆಯ ಕಾರಣಕ್ಕೆ ಕಟುವಾಗಿ ಟೀಕಿಸುತ್ತ ಬಂದಿರುವ ಭಾರತೀಯ ಜನತಾ ಪಕ್ಷ ಈಗ ತನ್ನದೇ ಮನೆಯೊಳಗೆ ಅದೇ ಆರೋಪಗಳನ್ನು ಎದುರಿಸುತ್ತಿರುವುದು ವ್ಯಂಗ್ಯವೂ ಆತಂಕಕಾರಿಯೂ ಆಗಿದೆ. ಸುಲಿಗೆ, ಭ್ರಷ್ಟಾಚಾರ ಮತ್ತು ಅಕ್ರಮ ವಸೂಲಿಯ ಆರೋಪಗಳ ಹಿನ್ನೆಲೆಯಲ್ಲಿ 325ಕ್ಕೂ ಹೆಚ್ಚು ಕಾರ್ಯಕರ್ತರ ವಿರುದ್ಧ ಪಕ್ಷ ಶಿಸ್ತು ಕ್ರಮಕ್ಕೆ ಮುಂದಾಗಿರುವುದು ಸಂಘಟನೆಯೊಳಗೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಹಿರಂಗಪಡಿಸಿದೆ.
ತೃಣಮೂಲ ಕಾಂಗ್ರೆಸ್ನ ರಾಜಕೀಯ ಸಂಸ್ಕೃತಿ ಬಿಜೆಪಿಯೊಳಗೆ ನುಸುಳುತ್ತಿದೆ ಎಂಬ ಮಾತು ಕೇಳಿಬರುತ್ತಿರುವುದು ಇನ್ನಷ್ಟು ಗಂಭೀರ. ಏಕೆಂದರೆ ಅಧಿಕಾರದಲ್ಲಿರುವ ಪಕ್ಷವೊಂದರ ಕಾರ್ಯಕರ್ತರು ಸ್ಥಳೀಯ ಮಟ್ಟದಲ್ಲಿ ಪ್ರಭಾವ, ಭಯ ಮತ್ತು ರಾಜಕೀಯ ಸಂಪರ್ಕವನ್ನು ಬಳಸಿಕೊಂಡು ಹಣ ಸಂಪಾದಿಸುವ ಪ್ರವೃತ್ತಿ ಬೆಳೆಸಿಕೊಂಡರೆ, ಅದು ಕೇವಲ ವ್ಯಕ್ತಿಗಳ ತಪ್ಪಾಗಿ ಉಳಿಯುವುದಿಲ್ಲ. ಕ್ರಮೇಣ ಅದು ಪಕ್ಷದ ರಾಜಕೀಯ ಸಂಸ್ಕೃತಿಯ ಭಾಗವಾಗುತ್ತದೆ.
ಬಿಜೆಪಿ ಈಗ ತೆಗೆದುಕೊಂಡಿರುವ ಕ್ರಮ ಸ್ವಾಗತಾರ್ಹ. ಆದರೆ ಅಮಾನತು, ಕಾರಣ ಕೇಳುವ ನೋಟಿಸ್ ಮತ್ತು ಸಂಘಟನಾ ಕ್ರಮಗಳು ಮಾತ್ರ ಸಾಕಾಗುವುದಿಲ್ಲ. ಆರೋಪಗಳ ಬಗ್ಗೆ ಪಾರದರ್ಶಕ ತನಿಖೆ ನಡೆಯಬೇಕು. ತಪ್ಪಿತಸ್ಥರೆಂದು ಸಾಬೀತಾದವರ ವಿರುದ್ಧ ಕಠಿಣ ಕ್ರಮ ಜರುಗಬೇಕು. ಪಕ್ಷದ ಪ್ರಭಾವಿ ವ್ಯಕ್ತಿಗಳಾಗಿದ್ದರೂ ಅವರಿಗೆ ವಿನಾಯಿತಿ ಸಿಗಬಾರದು. ಇಲ್ಲವಾದರೆ ಈ ಕ್ರಮವೂ ರಾಜಕೀಯವಾಗಿ ಹಾನಿಗೊಳಗಾದ ಪಕ್ಷದ ಮುಖ ಉಳಿಸಿಕೊಳ್ಳುವ ತಾತ್ಕಾಲಿಕ ಪ್ರಯತ್ನವೆಂಬ ಅನುಮಾನ ಮೂಡುತ್ತದೆ.
ಇಲ್ಲಿ ಬಿಜೆಪಿಗೆ ಒಂದು ದೊಡ್ಡ ರಾಜಕೀಯ ಪಾಠವಿದೆ. ಭ್ರಷ್ಟಾಚಾರ ಯಾವುದೇ ಒಂದು ಪಕ್ಷದ ಸ್ವತ್ತಲ್ಲ. ಅಧಿಕಾರ, ಹಣ ಮತ್ತು ರಾಜಕೀಯ ಪ್ರಭಾವ ಒಂದೆಡೆ ಸೇರಿದಾಗ ಯಾವುದೇ ಪಕ್ಷದಲ್ಲೂ ಇದೇ ಅಪಾಯ ಹುಟ್ಟಬಹುದು. ವಿರೋಧ ಪಕ್ಷದಲ್ಲಿದ್ದಾಗ ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗುವುದು ಸುಲಭ. ಆದರೆ ಅಧಿಕಾರದ ಬಾಗಿಲು ತೆರೆದಾಗ ತಮ್ಮದೇ ಕಾರ್ಯಕರ್ತರ ವಿರುದ್ಧ ಕಠಿಣ ನಿಲುವು ತಾಳುವುದು ನಿಜವಾದ ಪರೀಕ್ಷೆ.
ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಬದಲಾವಣೆಯ ಕನಸು ಕಾಣುತ್ತಿರುವ ಬಿಜೆಪಿ ಮೊದಲು ತನ್ನ ಸಂಘಟನೆಯೊಳಗಿನ ಈ ಕೊಳೆಯನ್ನು ಸ್ವಚ್ಛಗೊಳಿಸಬೇಕು. ತೃಣಮೂಲದ ವಿರುದ್ಧದ ಹೋರಾಟ ಕೇವಲ ಚುನಾವಣಾ ಘೋಷಣೆಗಳ ಮೂಲಕ ಗೆಲ್ಲಲಾಗುವುದಿಲ್ಲ. ಜನರಿಗೆ ಪರ್ಯಾಯ ರಾಜಕೀಯ ಸಂಸ್ಕೃತಿಯನ್ನು ನೀಡುವ ಮೂಲಕವೇ ಗೆಲ್ಲಬೇಕು. ಇಲ್ಲವಾದರೆ ತೃಣಮೂಲವನ್ನು ಬದಲಾಯಿಸುವ ಭರವಸೆ ನೀಡಿದ ಬಿಜೆಪಿ, ಕೊನೆಗೆ ತೃಣಮೂಲದಂತೆಯೇ ವರ್ತಿಸುವ ಮತ್ತೊಂದು ಪಕ್ಷ ಎಂಬ ಅಪಾಯಕಾರಿ ಭಾವನೆ ಜನರಲ್ಲಿ ಮೂಡಬಹುದು.
Comments
Post a Comment