ಸತ್ಲುಜ್ ವಿವಾದ: ಚಿತ್ರವನ್ನು ತಡೆಯುವುದೇ ಪರಿಹಾರವೇ?

 25,000 ಜನರ ಹತ್ಯೆ ಏನೂ ಅಲ್ಲವೇ? ಅದು ಇತಿಹಾಸದಲ್ಲಿ ಕರಗಿ ಹೋಗಬೇಕೇ?

ಸತ್ಯಕ್ಕೆ ಅಪಚಾರ * ಬಿವಿಸೀ

ಒಂದು ಸಿನಿಮಾ ಬಿಡುಗಡೆಯಾಗುವ ಮುನ್ನವೇ ವಿವಾದಕ್ಕೆ ಸಿಲುಕುವುದು ಹೊಸ ಸಂಗತಿಯಲ್ಲ. ಆದರೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅದನ್ನು ಒಟಿಟಿ ವೇದಿಕೆಯಿಂದ ತೆಗೆದುಹಾಕುವುದು ಅಪರೂಪದ ಬೆಳವಣಿಗೆ. ದಿಲ್ಜಿತ್ ದೋಸಾಂಜ್ ಅಭಿನಯದ `ಸತ್ಲಜ್' ಚಿತ್ರಕ್ಕೆ ಸಂಭವಿಸಿರುವುದು ಇದೇ. ಇದರೊಂದಿಗೆ ಮತ್ತೊಮ್ಮೆ ಒಂದು ಮೂಲಭೂತ ಪ್ರಶ್ನೆ ಮುನ್ನೆಲೆಗೆ ಬಂದಿದೆ - ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಕರ್ತವ್ಯ ಇತಿಹಾಸದ ಕಹಿ ಅಧ್ಯಾಯಗಳನ್ನು ಮುಚ್ಚಿಡುವುದೇ, ಅಥವಾ ಅವುಗಳ ಕುರಿತು ಸಮಾಜದಲ್ಲಿ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸುವುದೇ?

ಈ ಚಿತ್ರವು ಪಂಜಾಬ್ ಉಗ್ರವಾದದ ಅವಧಿಯಲ್ಲಿ ನಡೆದಿರುವುದಾಗಿ ಆರೋಪಿಸಲಾದ ಮಾನವ ಹಕ್ಕು ಉಲ್ಲಂಘನೆಗಳು ಮತ್ತು ಅವುಗಳನ್ನು ಬಹಿರಂಗಪಡಿಸಿದ ಜಸ್ವಂತ್ ಸಿಂಗ್ ಖಾಲ್ರಾ ಅವರ ಬದುಕನ್ನು ಆಧರಿಸಿದೆ. ಈ ಕಥನವನ್ನು ಪ್ರತಿಯೊಬ್ಬರೂ ಒಪ್ಪಲೇಬೇಕು ಎಂಬ ಪ್ರಶ್ನೆಯೇ ಇಲ್ಲ. ಆದರೆ ಭಿನ್ನ ದೃಷ್ಟಿಕೋನವನ್ನು ಹೊಂದಿರುವ ಕೃತಿಯೇ ಸಾರ್ವಜನಿಕ ವೀಕ್ಷಣೆಗೆ ಅನರ್ಹ ಎಂಬ ತೀರ್ಮಾನ ಪ್ರಜಾಪ್ರಭುತ್ವದ ಆತ್ಮಕ್ಕೆ ಹೊಂದಿಕೆಯಾಗುವುದಿಲ್ಲ. ಕಲಾಕೃತಿಯ ಸತ್ಯಾಸತ್ಯತೆಯನ್ನು ಅಂತಿಮವಾಗಿ ನಿರ್ಧರಿಸುವುದು ಸರ್ಕಾರವಲ್ಲ; ಮಾಹಿತಿ ಪಡೆದ ಸಮಾಜ ಮತ್ತು ಇತಿಹಾಸದ ಪರಿಶೀಲನೆಯೇ.

ಸರ್ಕಾರ ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಯ ಕಾರಣವನ್ನು ಮುಂದಿಟ್ಟಿದೆ. ಯಾವುದೇ ಸರ್ಕಾರಕ್ಕೂ ಇಂತಹ ಹೊಣೆಗಾರಿಕೆ ಇದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ರಾಷ್ಟ್ರೀಯ ಭದ್ರತೆ ಎಂಬ ಪರಿಕಲ್ಪನೆ ಅಸ್ಪಷ್ಟವಾಗಿದ್ದರೆ, ಅದು ಅನೇಕ ಪ್ರಶ್ನೆಗಳಿಗೆ ದಾರಿ ಮಾಡಿಕೊಡುತ್ತದೆ. ಯಾವ ದೃಶ್ಯ ಅಥವಾ ಸಂಭಾಷಣೆ ನಿಜವಾಗಿಯೂ ಹಿಂಸೆಯನ್ನು ಪ್ರಚೋದಿಸುವ ಸಾಧ್ಯತೆ ಹೊಂದಿದೆ? ಯಾವ ಅಂಶ ದೇಶದ ಭದ್ರತೆಗೆ ಅಪಾಯವೆಂದು ಪರಿಗಣಿಸಲಾಯಿತು? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳು ದೊರಕದಿದ್ದರೆ, ನಿಷೇಧವು ತಾತ್ಕಾಲಿಕ ಪರಿಹಾರವಾಗಿ ಕಾಣಬಹುದಾದರೂ, ಅದು ಸಾರ್ವಜನಿಕ ಅನುಮಾನವನ್ನಷ್ಟೇ ಹೆಚ್ಚಿಸುತ್ತದೆ.

ಇಲ್ಲಿ ಮತ್ತೊಂದು ಅಂಶವೂ ಗಮನಾರ್ಹ. ತುರ್ತು ಪರಿಸ್ಥಿತಿ, ಕಾಶ್ಮೀರಿ ಪಂಡಿತರ ವಲಸೆ, 1984ರ ಸಿಖ್ ವಿರೋಧಿ ಹಿಂಸಾಚಾರ, ನಕ್ಸಲ್ ಚಳವಳಿ ಅಥವಾ ಇತರ ವಿವಾದಾತ್ಮಕ ಐತಿಹಾಸಿಕ ಘಟನೆಗಳನ್ನು ಆಧರಿಸಿದ ಚಿತ್ರಗಳಿಗೆ ಅವಕಾಶ ನೀಡಲಾಗಿದೆ. ಅವುಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಸಾರ್ವಜನಿಕ ಚರ್ಚೆಗೆ ಅವಕಾಶ ನಿರಾಕರಿಸಲಾಗಿಲ್ಲ. ಹಾಗಿದ್ದರೆ ಪಂಜಾಬಿನ 25,000 ಸಿಖ್ಖರ ಹತ್ಯೆಯ ಮತ್ತೊಂದು ನೋವಿನ ಅಧ್ಯಾಯದ ಕುರಿತ ಚಿತ್ರಕ್ಕೆ ಮಾತ್ರ ವಿಭಿನ್ನ ಮಾನದಂಡ ಏಕೆ? ಕಾನೂನಿನ ಅನ್ವಯದಲ್ಲಿ ಸಮಾನತೆ ಎಂಬ ತತ್ವಕ್ಕೆ ಈ ಪ್ರಶ್ನೆಗೆ ಉತ್ತರ ಬೇಕಾಗಿದೆ.

ವಿವಾದಾತ್ಮಕ ಅಭಿಪ್ರಾಯಗಳಿಗೆ ಉತ್ತರ ನಿಷೇಧವಲ್ಲ; ಪ್ರತಿವಾದ. ತಪ್ಪು ಮಾಹಿತಿಗೆ ಪರಿಹಾರ ಮೌನವಲ್ಲ; ಹೆಚ್ಚಿನ ಮಾಹಿತಿ. ಚಿತ್ರದಲ್ಲಿ ವಾಸ್ತವ ದೋಷಗಳಿದ್ದರೆ ಅವನ್ನು ಇತಿಹಾಸಕಾರರು, ಸಂಶೋಧಕರು ಮತ್ತು ಸಾರ್ವಜನಿಕ ಚರ್ಚೆಯ ಮೂಲಕ ಸವಾಲು ಮಾಡಬಹುದು. ಆದರೆ ಚಿತ್ರವನ್ನು ಜನರ ಕಣ್ಣಿನಿಂದಲೇ ದೂರವಿಡುವುದು, ಅದರ ಬಗ್ಗೆ ಕುತೂಹಲವನ್ನೂ ಅನುಮಾನವನ್ನೂ ಇನ್ನಷ್ಟು ಹೆಚ್ಚಿಸುತ್ತದೆ.

ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಟೀಕೆಯನ್ನು ಸಹಿಸಿಕೊಳ್ಳುವ ಸಾಮಥ್ರ್ಯದಲ್ಲಿದೆ. ಭದ್ರತೆಯನ್ನು ಕಾಪಾಡುವುದೂ ಸರ್ಕಾರದ ಕರ್ತವ್ಯವೇ; ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದೂ ಅದಕ್ಕಿಂತ ಕಡಿಮೆ ಮಹತ್ವದ ಜವಾಬ್ದಾರಿಯಲ್ಲ. ಈ ಎರಡರ ನಡುವೆ ಸಮತೋಲನ ಸಾಧಿಸುವುದೇ ಪ್ರಬುದ್ಧ ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆಯಾಗಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ