ರಾಜ್ಯದಲ್ಲಿ ಪ್ರಕರಣ ಹಿಂಪಡೆಯುವ ರಾಜಕಾರಣ: ನ್ಯಾಯದ ತಕ್ಕಡಿ ಅಧಿಕಾರದ ಕಡೆ ವಾಲಿದಾಗ

 * ಬಿವಿಸೀ


ರಾಜ್ಯ ಸರ್ಕಾರಗಳು ಕೆಲವೊಮ್ಮೆ ರಾಜಕೀಯ ಹೋರಾಟಗಳು, ಪ್ರತಿಭಟನೆಗಳು ಅಥವಾ ಸಾರ್ವಜನಿಕ ಚಳವಳಿಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳನ್ನು ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳುತ್ತವೆ. ಮೇಲ್ನೋಟಕ್ಕೆ ಇದು ರಾಜಕೀಯ ಪ್ರತೀಕಾರದಿಂದ ದಾಖಲಾದ ಪ್ರಕರಣಗಳನ್ನು ರದ್ದುಪಡಿಸುವ ಪ್ರಯತ್ನದಂತೆ ಕಾಣಬಹುದು. ಆದರೆ ಇಂತಹ ನಿರ್ಧಾರಗಳು ಗಂಭೀರ ಅಪರಾಧಗಳನ್ನೂ ಒಳಗೊಂಡಾಗ, ಅದು ನ್ಯಾಯಾಂಗ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವ ಪರಿಸ್ಥಿತಿ ಉಂಟಾಗುತ್ತದೆ. ಕರ್ನಾಟಕದಲ್ಲಿ ಇತ್ತೀಚೆಗೆ ಇದೇ ವಿಷಯ ಮತ್ತೊಮ್ಮೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಕಾನೂನಿನ ಪ್ರಕಾರ ಅಪರಾಧ ಪ್ರಕರಣವನ್ನು ಹಿಂಪಡೆಯುವ ಅಧಿಕಾರ ಸರ್ಕಾರಕ್ಕೆ ಸಂಪೂರ್ಣವಾಗಿ ನಿರಂಕುಶವಾಗಿ ಇರುವುದಿಲ್ಲ. ಸಾರ್ವಜನಿಕ ಅಭಿಯೋಜಕರು ನ್ಯಾಯಾಲಯದ ಅನುಮತಿ ಪಡೆದು ಮಾತ್ರ ಪ್ರಕರಣ ಹಿಂಪಡೆಯಲು ಮುಂದಾಗಬಹುದು. ಸರ್ಕಾರದ ಇಚ್ಛೆಯೇ ಅಂತಿಮ ತೀರ್ಮಾನವಾಗಬಾರದು ಎಂಬ ಉದ್ದೇಶದಿಂದಲೇ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿ, ನ್ಯಾಯದ ಅಗತ್ಯ ಮತ್ತು ಸಾಕ್ಷ್ಯಾಧಾರಗಳ ಸ್ಥಿತಿಯನ್ನು ಪರಿಗಣಿಸಿದ ಬಳಿಕವೇ ನ್ಯಾಯಾಲಯ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ.

ಆದರೆ ರಾಜಕೀಯದಲ್ಲಿ ಈ ಅಧಿಕಾರವನ್ನು ಹಲವಾರು ಬಾರಿ ಬಹುಮಾನ ಅಥವಾ ಪ್ರತಿಫಲದ ಸಾಧನವಾಗಿ ಬಳಸುವ ಆರೋಪಗಳು ಕೇಳಿಬರುತ್ತವೆ. ಆಡಳಿತಕ್ಕೆ ಬೆಂಬಲ ನೀಡಿದವರು, ಪಕ್ಷದ ಕಾರ್ಯಕರ್ತರು ಅಥವಾ ನಿರ್ದಿಷ್ಟ ರಾಜಕೀಯ ಗುಂಪುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಮಾತ್ರ ಹಿಂಪಡೆಯುವ ಪ್ರಯತ್ನ ನಡೆದರೆ, ಸಾಮಾನ್ಯ ನಾಗರಿಕರಲ್ಲಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ನಂಬಿಕೆ ಕುಸಿಯುತ್ತದೆ. ಒಂದು ಸರ್ಕಾರ ಮಾಡಿದುದನ್ನು ಮತ್ತೊಂದು ಸರ್ಕಾರ ವಿರೋಧಿಸುತ್ತದೆ; ಅಧಿಕಾರ ಬದಲಾದಾಗ ಅದೇ ಪದ್ಧತಿಯನ್ನು ಹೊಸ ಸರ್ಕಾರವೂ ಅನುಸರಿಸುತ್ತದೆ. ಹೀಗೆ ಪ್ರಕರಣ ಹಿಂಪಡೆಯುವ ಪ್ರಕ್ರಿಯೆ ನ್ಯಾಯದ ವಿಷಯಕ್ಕಿಂತ ರಾಜಕೀಯದ ವಿಷಯವಾಗಿ ಮಾರ್ಪಡುತ್ತದೆ.

ಕರ್ನಾಟಕ ಸರ್ಕಾರವು 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಮುಂದಾದ ಕ್ರಮವನ್ನು ಹೈಕೋರ್ಟ್ ತಾತ್ಕಾಲಿಕವಾಗಿ ತಡೆಹಿಡಿದಿರುವುದು ಈ ಚರ್ಚೆಗೆ ಹೊಸ ತಿರುವು ನೀಡಿದೆ. ಗಲಭೆಗಳು, ಸರ್ಕಾರಿ ಆಸ್ತಿಗೆ ಹಾನಿ, ಪೆÇಲೀಸರ ಮೇಲೆ ಹಲ್ಲೆ ಹಾಗೂ ಕೋಮು ಉದ್ವಿಗ್ನತೆಗೆ ಸಂಬಂಧಿಸಿದ ಕೆಲವು ಪ್ರಕರಣಗಳನ್ನೂ ಹಿಂಪಡೆಯಲು ಮುಂದಾಗಿರುವುದರ ಬಗ್ಗೆ ನ್ಯಾಯಾಂಗ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಪ್ರಕರಣಗಳ ಹಿಂಪಡೆಯುವಿಕೆ ಕಾನೂನುಬದ್ಧ ಮಾನದಂಡಗಳನ್ನು ಪೂರೈಸಿದೆಯೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸುತ್ತಿದೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ಹಕ್ಕು ಅತ್ಯಂತ ಮಹತ್ವದ್ದು. ಶಾಂತಿಯುತ ಪ್ರತಿಭಟನೆಗಳಲ್ಲಿ ಭಾಗವಹಿಸಿದವರ ವಿರುದ್ಧ ರಾಜಕೀಯ ಕಾರಣಗಳಿಂದ ದಾಖಲಾದ ಪ್ರಕರಣಗಳನ್ನು ಮರುಪರಿಶೀಲಿಸುವ ಅಗತ್ಯವಿರಬಹುದು. ಆದರೆ ಕೊಲೆ, ಗಲಭೆ, ಸಾರ್ವಜನಿಕ ಆಸ್ತಿಯ ನಾಶ, ಪೆÇಲೀಸರ ಮೇಲೆ ಹಲ್ಲೆ ಅಥವಾ ಕೋಮು ಹಿಂಸಾಚಾರದಂತಹ ಗಂಭೀರ ಆರೋಪಗಳನ್ನು ರಾಜಕೀಯ ಲೆಕ್ಕಾಚಾರದ ಆಧಾರದ ಮೇಲೆ ಕೈಬಿಡುವುದು ನ್ಯಾಯದ ತತ್ವಗಳಿಗೆ ವಿರುದ್ಧವಾಗುತ್ತದೆ. ಇದರಿಂದ ಅಪರಾಧಿಗಳಿಗೆ ತಪ್ಪು ಸಂದೇಶ ಹೋಗುವುದಷ್ಟೇ ಅಲ್ಲ, ಕಾನೂನು ಪಾಲನೆಗಾಗಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಪೆÇಲೀಸ್ ಸಿಬ್ಬಂದಿಯ ಮನೋಬಲಕ್ಕೂ ಧಕ್ಕೆಯಾಗುತ್ತದೆ.

ಸರ್ಕಾರಗಳು ಬದಲಾಗಬಹುದು, ಆದರೆ ಕಾನೂನಿನ ಆಡಳಿತ ಬದಲಾಗಬಾರದು. ಅಪರಾಧ ಪ್ರಕರಣಗಳ ಭವಿಷ್ಯವನ್ನು ಸಚಿವ ಸಂಪುಟದ ನಿರ್ಧಾರಗಳು ಅಲ್ಲ, ನ್ಯಾಯಾಂಗದ ಪರಿಶೀಲನೆ ಮತ್ತು ಕಾನೂನಿನ ತತ್ವಗಳು ನಿರ್ಧರಿಸಬೇಕು. ಇಲ್ಲವಾದರೆ ನ್ಯಾಯವು ರಾಜಕೀಯದ ಅನುಕೂಲಕ್ಕೆ ತಕ್ಕಂತೆ ತಿರುಗುವ ಸಾಧನವಾಗುವ ಅಪಾಯವಿದೆ. ಪ್ರಕರಣ ಹಿಂಪಡೆಯುವ ಅಧಿಕಾರವನ್ನು ಅಪರೂಪದ ಮತ್ತು ಸಮರ್ಥನೀಯ ಸಂದರ್ಭಗಳಲ್ಲಿ ಮಾತ್ರ ಬಳಸಬೇಕು; ಇಲ್ಲದಿದ್ದರೆ ಪ್ರಜಾಪ್ರಭುತ್ವದ ಮೂಲವಾದ ಕಾನೂನಿನ ಮುಂದೆ ಸಮಾನತೆ ಎಂಬ ತತ್ವವೇ ಪ್ರಶ್ನಾರ್ಥಕವಾಗುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ