ಮಂಗಳೂರಿನಲ್ಲಿ 8 ಬಾಂಗ್ಲಾದೇಶಿಯರ ಬಂಧನವು ಭಾರತದ ನುಸುಳುವಿಕೆ ಬಿಕ್ಕಟ್ಟನ್ನು ಅಣಕಿಸುವಂತಿದೆ

 ಪ್ರಚಲಿತ * ಬಿವಿಸೀ

ಸುರತ್ಕಲ್ ಆರಕ್ಷಕರು ಮುಕ್ಕಾ ಬಳಿಯ ನಿರ್ಮಾಣ ಪ್ರದೇಶವೊಂದರಲ್ಲಿ ಎಂಟು ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿರುವುದನ್ನು ದೊಡ್ಡ ಯಶಸ್ಸು ಎಂದು ಬಿಂಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಇದು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಮುರ್ಷಿದಾಬಾದ್ ಮೂಲಕ ಭಾರತದೊಳಗೆ ನುಸುಳಿ, ಪಶ್ಚಿಮ ಬಂಗಾಳದ ನಕಲಿ ಆಧಾರ್ ಪತ್ರಗಳನ್ನು ಸೃಷ್ಟಿಸಿ, ಇಲ್ಲಿನ ಕಾರ್ಮಿಕ ವಲಯದಲ್ಲಿ ಸೇರಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಭೂತಪೂರ್ವ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿರುವ ಕರಾವಳಿ ನಗರಿ ಮಂಗಳೂರಿನಲ್ಲಿ ಕೇವಲ ಎಂಟು ಮಂದಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿರುವುದು ಕಣ್ಣೊರೆಸುವ ತಂತ್ರದಂತೆ ಕಾಣುತ್ತದೆ. ಕರಾವಳಿ ಕರ್ನಾಟಕದ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಸಾವಿರಾರು ಅಕ್ರಮ ಕಾರ್ಮಿಕರು ಕೆಲಸ ಮಾಡುತ್ತಿರುವುದು ಬಹಿರಂಗ ಸತ್ಯವಾಗಿದ್ದು, ಇದು ನಮ್ಮ ಸಾರ್ವಭೌಮ ಗಡಿಗಳ ಭದ್ರತೆಯನ್ನು ಅಣಕಿಸುವಂತಿದೆ. ಮಂಗಳೂರಿನಲ್ಲೊಂದರಲ್ಲಿಯೇ ಮತ್ತು ಅವಳಿ ಜಿಲ್ಲೆಗಳ ಪಟ್ಟಣಗಳಲ್ಲಿ ಇಂಥ ನುಸುಳುಕೋರ ಬಾಂಗ್ಲಾದೇಶಿಯರು ಸಾವಿರಗಟ್ಟಲೆ ಸಂಖ್ಯೆಯಲ್ಲಿ ಇದ್ದಾರೆ ಎನ್ನುವುದು ನಂಬಲರ್ಹ ಮಾತು. 

ಅಕ್ರಮ ವಲಸೆಯ ನಿರಂತರ ಹರಿವಿಗೆ ರಾಜಕೀಯ ಉದಾಸೀನತೆ ಮತ್ತು ಆಡಳಿತಾತ್ಮಕ ದುರಾಸೆಯೇ ಪ್ರಮುಖ ಕಾರಣವಾಗಿದೆ. ಪಶ್ಚಿಮ ಬಂಗಾಳದಂತಹ ಗಡಿ ರಾಜ್ಯಗಳಲ್ಲಿನ ನಿರ್ಬಂಧವಿಲ್ಲದ ಗಡಿಗಳನ್ನು ದಶಕಗಳಿಂದ ರಾಜಕೀಯ ಲಾಭಕ್ಕಾಗಿ ನಿರ್ಲಕ್ಷಿಸಲಾಗಿದೆ. ಇಂದು ದೇಶದಲ್ಲಿ ಮೂರು ಕೋಟಿಗೂ ಹೆಚ್ಚು ಅನಧಿಕೃತ ಬಾಂಗ್ಲಾದೇಶಿ ಪ್ರಜೆಗಳು ವಾಸಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಮೂಲಸೌಕರ್ಯ, ವಸತಿ ಉದ್ಯಮ ಮತ್ತು ಕೃಷಿ ವಲಯದಲ್ಲಿ ಇವರಿಗೆ ಸುಲಭವಾಗಿ ಉದ್ಯೋಗ ಸಿಗುತ್ತಿದೆ. ಭ್ರಷ್ಟ ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ಇವರು ನಕಲಿ ಗುರುತಿನ ಚೀಟಿಗಳನ್ನು ಪಡೆದುಕೊಳ್ಳುತ್ತಿರುವುದು ನಮ್ಮ ರಾಷ್ಟ್ರೀಯ ಭದ್ರತೆಗೆ ಆತಂಕಕಾರಿಯಾಗಿದೆ. ಇದರಿಂದಾಗಿ ದೇಶದ ಅತ್ಯುನ್ನತ ವಿದ್ಯುನ್ಮಾನ ಗುರುತಿನ ಚೌಕಟ್ಟು ನುಸುಳುಕೋರರ ಮುಂದೆ ನಿಷ್ಪ್ರಯೋಜಕವಾಗುತ್ತಿದೆ.

ವಿರೋಧ ಪಕ್ಷದಲ್ಲಿದ್ದಾಗ ಅಕ್ರಮ ವಲಸೆಯ ವಿರುದ್ಧ ಭಾಷಣ ಬಿಗಿಯುತ್ತಿದ್ದ  ಬಿಜೆಪಿ ಮತ್ತು ಕುಟುಂಬ ಸಂಘಟನೆಗಳು ಅಧಿಕಾರಕ್ಕೆ ಬಂದ ನಂತರ ಜಾಣ ಮೌನಕ್ಕೆ ಶರಣಾಗಿವೆ. ಢಾಕಾದಲ್ಲಿ ಆಡಳಿತ ಬದಲಾವಣೆಯ ನಂತರ ಉಂಟಾಗಿರುವ ಭೌಗೋಳಿಕ ರಾಜಕೀಯ ಅಸ್ಥಿರತೆಯ ಹಿನ್ನೆಲೆಯಲ್ಲಿ ಭದ್ರತೆಯ ವಿಷಯದಲ್ಲಿ ಇಂತಹ ನಿರ್ಲಕ್ಷ್ಯ ವಹಿಸುವುದು ಅಪಾಯಕಾರಿ. ಯಾವುದೇ ಸಾರ್ವಭೌಮ ರಾಷ್ಟ್ರವು ತನ್ನ ನೆರೆಯ ಪ್ರತಿಕೂಲ ದೇಶದಿಂದ ಇಂತಹ ಮುಕ್ತ ನುಸುಳುವಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಅಗ್ಗದ ಕಾರ್ಮಿಕರ ಅಗತ್ಯವು ರಾಷ್ಟ್ರೀಯ ಭದ್ರತೆಯನ್ನು ಮೂಲೆಗುಂಪು ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವರನ್ನು ಪತ್ತೆ ಹಚ್ಚಿ ಗಡೀಪಾರು ಮಾಡುವ ಶಾಶ್ವತ ವ್ಯವಸ್ಥೆಯನ್ನು ರೂಪಿಸುವಲ್ಲಿ ಗಂಭೀರತೆ ತೋರುತ್ತಿಲ್ಲ.

ಸಾಂಸ್ಕøತಿಕ ಮತ್ತು ಭಾಷಿಕ ಸಾಮ್ಯತೆಗಳಿಂದಾಗಿ ಅಕ್ರಮ ವಲಸಿಗರನ್ನು ಗುರುತಿಸುವುದು ಕಷ್ಟಕರವಾದರೂ, ಅದು ಅಸಾಧ್ಯವೇನಲ್ಲ. ರಕ್ಷಣಾ ಇಲಾಖೆಯು ದೃಢ ಸಂಕಲ್ಪದೊಂದಿಗೆ ಕೆಲಸ ಮಾಡಿದರೆ ಈ ಜಾಲವನ್ನು ಧ್ವಂಸಗೊಳಿಸಬಹುದು. ಗೃಹ ಇಲಾಖೆಯು ಎಲ್ಲಾ ಪ್ರಮುಖ ನಿರ್ಮಾಣ ಪ್ರದೇಶಗಳು, ಬಂದರುಗಳು ಮತ್ತು ತೋಟಗಳಲ್ಲಿ ಕಡ್ಡಾಯವಾಗಿ ಜೈವಿಕ ಗುರುತಿನ ತಪಾಸಣೆ ನಡೆಸಬೇಕು. ಕೇಂದ್ರ ಸರ್ಕಾರವು ಪ್ರತಿ ತಿಂಗಳು ರಾಜ್ಯ ಸರ್ಕಾರಗಳಿಂದ ಅಕ್ರಮ ವಲಸಿಗರ ಪತ್ತೆಯ ಕುರಿತು ಕಡ್ಡಾಯ ಪ್ರಗತಿ ವರದಿಯನ್ನು ಪಡೆಯಬೇಕು. ರಾಜ್ಯಗಳು ಜಿಲ್ಲಾಡಳಿತಗಳಿಂದ ಮಾಸಿಕ ವರದಿಗಳನ್ನು ಕಡ್ಡಾಯಗೊಳಿಸಬೇಕು. ವಾಣಿಜ್ಯ ಲಾಭಕ್ಕಾಗಿ ಅಥವಾ ಆಡಳಿತಾತ್ಮಕ ಸೋಮಾರಿತನಕ್ಕಾಗಿ ರಾಷ್ಟ್ರೀಯ ಭದ್ರತೆಯನ್ನು ಪಣಕ್ಕಿಡಬಾರದು. ದೇಶದ ಆಂತರಿಕ ಸ್ಥಿರತೆಯನ್ನು ಕಾಪಾಡಲು ನಿರಂತರ ಮತ್ತು ಕಟ್ಟುನಿಟ್ಟಾದ ಸಾಂಸ್ಥಿಕ ಕ್ರಮ ಅನಿವಾರ್ಯವಾಗಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ