ರಾಜ್ಯದಲ್ಲಿ ಜನಿವಾರದ ಮೇಲೆ ಎಂದಿಗೂ ಅಧಿಕೃತ ನಿಷೇಧವಿರಲಿಲ್ಲ, ಅದಕ್ಕೆ ಅವಕಾಶ ಕೊಡುವ ಪ್ರಶ್ನೆಯೆಲ್ಲಿ?

 ಸಮಾನತೆಯ ಮರೀಚಿಕೆ: ಕರ್ನಾಟಕ 

ಸರ್ಕಾರದ ಸಮತೋಲನದ 'ತಂತ್ರ'

ಅಧಿಕಾರಿಗಳ ಉದ್ಧಟತನವನ್ನು ಶಿಕ್ಷಿಸುವ ಧೈರ್ಯ ತೋರದ ಸರ್ಕಾರ, ಈಗ ಸುಳ್ಳು ನಿರೂಪಣೆಗಳ ಮೂಲಕ ಜನರನ್ನು ದಾರಿ ತಪ್ಪಿಸಲು ಯತ್ನಿಸುತ್ತಿದೆ

..................

ಖರೇ ಹೇಳಬೇಕಂದ್ರ * ಬಿವಿಸೀ

ಬ್ರಹ್ಮಚಾರಿಗಳ ಜನಿವಾರ ಮತ್ತು ಶಾಲಾ ವಿದ್ಯಾರ್ಥಿನಿಯರ ಹಿಜಾಬ್ ಎರಡನ್ನೂ ಒಂದೇ ಉಸಿರಿನಲ್ಲಿ ಪ್ರಸ್ತಾಪಿಸಿ, ಅವುಗಳ ಮೇಲಿನ 'ನಿಷೇಧ'ವನ್ನು ಹಿಂಪಡೆಯುವುದಾಗಿ ಘೋಷಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರವು ರಾಜಕೀಯ ಚಾಣಾಕ್ಷತನದ ಪರಮಾವಧಿಯಂತೆ ಕಾಣುತ್ತಿದೆ. ಮೇಲ್ನೋಟಕ್ಕೆ ಇದು `ಸರ್ವಧರ್ಮ ಸಮಭಾವ'ದ ಉನ್ನತ ನಡೆ ಎಂಬಂತೆ ಬಿಂಬಿತವಾಗುತ್ತಿದ್ದರೂ, ಇದರ ಆಳದಲ್ಲಿ ಅಡಗಿರುವುದು ಕೇವಲ ಮತಬ್ಯಾಂಕ್ ರಾಜಕಾರಣದ ಲೆಕ್ಕಾಚಾರ ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿ ಹಾಕುವ ತಂತ್ರವಷ್ಟೇ. ಸುದೀರ್ಘ ಚರ್ಚೆಗೆ ಗ್ರಾಸವಾಗಿರುವ ಈ ಬೆಳವಣಿಗೆಯು ಆಡಳಿತದ ನೈಜ ಮುಖಕ್ಕೆ ಕನ್ನಡಿ ಹಿಡಿಯುವಂತಿದೆ.

ಇಲ್ಲಿನ ಅತ್ಯಂತ ದೊಡ್ಡ ವಂಚನೆಯೆಂದರೆ, ಕರ್ನಾಟಕದಲ್ಲಿ ಜನಿವಾರದ ಮೇಲೆ ಎಂದಿಗೂ ಅಧಿಕೃತ ನಿಷೇಧವಿರಲಿಲ್ಲ. ಹಿಜಾಬ್ ವಿಚಾರವು ನ್ಯಾಯಾಲಯದ ಮೆಟ್ಟಿಲೇರಿ, ಸರ್ಕಾರದ ಆದೇಶಗಳ ಮೂಲಕ ಸಮವಸ್ತ್ರ ಸಂಹಿತೆಯ ಭಾಗವಾಗಿ ವಿವಾದಕ್ಕೀಡಾಗಿತ್ತು. ಆದರೆ ಜನಿವಾರವು ವ್ಯಕ್ತಿಯ ನಂಬಿಕೆಯ ಖಾಸಗಿ ಸಂಕೇತವಾಗಿ ಬಟ್ಟೆಯ ಒಳಗೆ ಧರಿಸುವಂಥದ್ದು. ಅಸ್ತಿತ್ವದಲ್ಲೇ ಇಲ್ಲದ ನಿಷೇಧವನ್ನು 'ತೆಗೆದುಹಾಕಿದ್ದೇವೆ' ಎಂದು ಹೇಳುವುದು ಜನಸಾಮಾನ್ಯರ ಕಣ್ಣಿಗೆ ಮಣ್ಣೆರಚುವ ತಂತ್ರವಲ್ಲದೆ ಮತ್ತೇನು? ಇಲ್ಲದ ಹಕ್ಕನ್ನು ಮರಳಿ ನೀಡಿದ್ದೇವೆ ಎಂದು ಹೇಳಿಕೊಳ್ಳುವುದು ಸರ್ಕಾರದ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ.

ಕಳೆದ ಕೆಲವು ಪರೀಕ್ಷೆಗಳ ಸಂದರ್ಭದಲ್ಲಿ ಪರೀಕ್ಷಾ ಮೇಲ್ವಿಚಾರಕರು ವಿದ್ಯಾರ್ಥಿಗಳ ಜನಿವಾರವನ್ನು ಕತ್ತರಿಸಿದ ಅಥವಾ ಬಲವಂತವಾಗಿ ತೆಗೆಸಿದ ಘಟನೆಗಳು ವರದಿಯಾಗಿದ್ದವು. ಇದು ಕೇವಲ ಆಡಳಿತಾತ್ಮಕ ಲೋಪವಲ್ಲ, ಬದಲಾಗಿ ಒಂದು ಧರ್ಮದ ಭಾವನೆಗಳಿಗೆ ಮಾಡಿದ ಅಪಚಾರವಾಗಿತ್ತು. ಸರ್ಕಾರವು ನಿಜವಾಗಿಯೂ ಜಾತ್ಯತೀತ ಮೌಲ್ಯಗಳಲ್ಲಿ ನಂಬಿಕೆ ಹೊಂದಿದ್ದರೆ, ಅಂದು ಮಿತಿಮೀರಿ ವರ್ತಿಸಿದ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕಿತ್ತು ಅಥವಾ ಅವರ ವಿರುದ್ಧ ಮೊಕದ್ದಮೆ ಹೂಡಬೇಕಿತ್ತು. ಆದರೆ ಅದನ್ನು ಮಾಡುವ ಬದಲು, ಇಂದು `ಅವಕಾಶ ನೀಡಿದ್ದೇವೆ' ಎನ್ನುವ ಮೂಲಕ ಸರ್ಕಾರವು ತಪ್ಪು ಮಾಡಿದ ಅಧಿಕಾರಿಗಳನ್ನು ಪರೋಕ್ಷವಾಗಿ ರಕ್ಷಿಸುತ್ತಿದೆ.

ಹಿಜಾಬ್ ಮೇಲಿನ ನಿಷೇಧವನ್ನು ಹಿಂಪಡೆಯುವಾಗ ಎದುರಾಗಬಹುದಾದ `ಒಂದು ವರ್ಗದ ಓಲೈಕೆ' ಎಂಬ ಟೀಕೆಯಿಂದ ತಪ್ಪಿಸಿಕೊಳ್ಳಲು ಜನಿವಾರವನ್ನು ಗುರಾಣಿಯಾಗಿ ಬಳಸಿಕೊಳ್ಳಲಾಗಿದೆ. ಇದು ಸಮುದಾಯಗಳ ನಡುವೆ `ಸಮಾನತೆ' ತರುವ ಪ್ರಯತ್ನಕ್ಕಿಂತ ಹೆಚ್ಚಾಗಿ, ಒಂದು ವರ್ಗದ ಹಕ್ಕನ್ನು ಮರಳಿಸುವಾಗ ಮತ್ತೊಂದು ವರ್ಗವನ್ನು ಸಮಾಧಾನಪಡಿಸಲು ಹೂಡಿದ ರಾಜಕೀಯ ದಾಳವಾಗಿದೆ. ಸಂವಿಧಾನಬದ್ಧ ಹಕ್ಕುಗಳನ್ನು ಸರ್ಕಾರದ `ಉಡುಗೊರೆ' ಎಂಬಂತೆ ಬಿಂಬಿಸುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ.

ಒಟ್ಟಾರೆಯಾಗಿ, ಈ `ಉದಾರತೆ'ಯ ಹಿಂದೆ ಪಾರದರ್ಶಕತೆಯ ಕೊರತೆಯಿದೆ. ಅಧಿಕಾರಿಗಳ ಉದ್ಧಟತನವನ್ನು ಶಿಕ್ಷಿಸುವ ಧೈರ್ಯ ತೋರದ ಸರ್ಕಾರ, ಈಗ ಸುಳ್ಳು ನಿರೂಪಣೆಗಳ ಮೂಲಕ ಜನರನ್ನು ದಾರಿ ತಪ್ಪಿಸಲು ಯತ್ನಿಸುತ್ತಿದೆ. ನಿಜವಾದ ಜಾತ್ಯತೀತತೆ ಇರುವುದು ಹಕ್ಕುಗಳ ಉಲ್ಲಂಘನೆಯಾದಾಗ ತಪ್ಪಿತಸ್ಥರನ್ನು ಶಿಕ್ಷಿಸುವುದರಲ್ಲೇ ಹೊರತು, ಅಸ್ತಿತ್ವದಲ್ಲೇ ಇಲ್ಲದ ನಿಷೇಧಗಳನ್ನು ತೆಗೆದುಹಾಕುವ 'ನಾಟಕ'ವಾಡುವುದರಲ್ಲಲ್ಲ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again