ಕಳಂಕ ಹೊತ್ತ ಪ್ರಜ್ವಲ್, ಡಮ್ಮಿ ಆಗಿರುವ ನಿಖಿಲ್

 


ಕುಸಿಯುತ್ತಿರುವ ಗೌಡರ ಕುಟುಂಬದ ವಿಶ್ವಾಸಾರ್ಹತೆ

ಮಾಜಿ ಪ್ರಧಾನಿ ದೇವೇಗೌಡ ಮತ್ತವರ ಮಗ ಕುಮಾರಸ್ವಾಮಿ ಕುಟುಂಬದಲ್ಲಿ ಚಿಕ್ಕವರಾದ ನಿಖಿಲ್ ಕುಮಾರ ಸ್ವಾಮಿಯನ್ನು, ಬಿಜೆಪಿಯೊಂದಿಗೆ ಕೈಜೋಡಿಸಲು ಧರ್ಮಸ್ಥಳದಲ್ಲಿ ನಡೆದ ಜೆಡಿಎಸ್‍ನ ಸಮಾವೇಶದ ಮುಂದಾಳತ್ವ ವಹಿಸಲು ಕಳಿಸಿರುವುದು ಕರ್ನಾಟಕದಾದ್ಯಂತ ನಾಟಕ ಪ್ರಹಸನ ಎಂದೇ ಪರಿಗಣಿಸಲಾಗುತ್ತಿದೆ. ನಗೆಪಾಟಲಿಗೀಡಾಗಿರುವ ಜೆಡಿಎಸ್ ನಡೆಯನ್ನು ಎರಡು ಸತ್ಯಗಳು ಹೊರಗೆಡಹುತ್ತವೆ. ಗೌಡರ ಕುಟುಂಬದಲ್ಲಿ ಕುಸಿದಿರುವ ವಿಶ್ವಾಸಾರ್ಹತೆ ಮತ್ತು ನಿಖಿಲ್ ಸೋದರ ಸಂಬಂಧಿ ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಇಡೀ ಕುಟುಂಬವನ್ನು ಆವರಿಸಿರುವ ಅವಮಾನಕರ ಸನ್ನಿವೇಶ.

ಮೊದಲನೆಯದಾಗಿ, ನಿಖಿಲ್ ಅವರನ್ನು ಆಯ್ಕೆ ಮಾಡಿರುವುದೇ ಜೆಡಿಎಸ್‍ನಲ್ಲಿ ನಾಯಕತ್ವದ ದೀವಾಳಿತನಕ್ಕೆ ಸಾಕ್ಷಿಯಾಗಿ ಕಾಣುತ್ತದೆ. ನಿಖಿಲ್ ಮತದಾರರಿಗೆ ಹೊಸಬರೇನೂ ಅಲ್ಲ, ಆದರೆ ಮತದಾರರಿಂದ ಸತತವಾಗಿ ತಿರಸ್ಕರಿಸಲ್ಪಟ್ಟವರಾಗಿ ದಾಖಲೆ ಮಾಡಿದ್ದಾರೆ. ಮೂರು ಚುನಾವಣೆಗಳಲ್ಲಿ ಸೋಲು ಅವರ ಹಿಂದಿದೆ. ಈ ರೀತಿಯ ರಾಜಕೀಯ ಅನನುಭವಿ ವ್ಯಕ್ತಿಗೆ ಧರ್ಮಸ್ಥಳದ ತಂಡದ ನೇತೃತ್ವವನ್ನು ನೀಡಿರುವುದು, ಅದೂ ಸಹ ಕುಟುಂಬದ ಮೇಲೆ ಸಾರ್ವಜನಿಕರ ಆಕ್ರೋಶ ಇನ್ನೂ ಹಸಿಯಾಗಿರುವಾಗಲೇ ಹೀಗೆ ಮಾಡಿರುವುದು ಕುಟುಂಬದ ಹತಾಶೆ ಮತ್ತು ಕಿವುಡುತನವನ್ನು ಎತ್ತಿತೋರಿಸುತ್ತದೆ. ಈ ದೃಶ್ಯಗಳು ಆಘಾತಕಾರಿಯಾಗಿದ್ದು, ಹೆಗ್ಗಡೆಯವರೊಡನೆ ನಿಖಿಲ್ ನಿಂತಿರುವ ಭಾವಚಿತ್ರವು ದೇವಸ್ಥಾನದ ಆಡಳಿತಗಾರರಿಗಾಗಲೀ, ಜೆಡಿಎಸ್‍ನ ವಿಶ್ವಾಸಾರ್ಹತೆಗಾಗಲೀ ಶೋಭೆ ತರುವುದಿಲ್ಲ.

ಇಲ್ಲಿ ಉದ್ಭವಿಸುವ ಪ್ರಶ್ನೆ ಎಂದರೆ, ಎಚ್ ಡಿ ಕುಮಾರಸ್ವಾಮಿ ಅವರೇ, ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದುಕೊಂಡು, ಖುದ್ದಾಗಿ ಉಸ್ತುವಾರಿ ಏಕೆ ವಹಿಸಿಕೊಳ್ಳಲಿಲ್ಲ? ಅವರ ಗೈರು ಎದ್ದು ಕಾಣುವಂತಿದೆ. ಧರ್ಮಸ್ಥಳದ ಬಗ್ಗೆ ಅಪಾರ ಶ್ರದ್ಧೆ ನಂಬಿಕೆಗೆ ಹೆಸರಾಗಿರುವ ಕುಮಾರಸ್ವಾಮಿ ಅನೇಕ ಬಾರಿ ಇಲ್ಲಿ ಪ್ರಮಾಣ ಮಾಡುವ ಮೂಲಕ, ಆಚರಣೆಗಳನ್ನು ನಡೆಸುವ ಮೂಲಕ ತಮ್ಮ ಭಕ್ತಿ ಪ್ರದರ್ಶನ ಮಾಡಿದ್ದಾರೆ. ಹೆಗ್ಗಡೆ ಕುಟುಂಬದೊಡನೆ ಅವರ ವೈಯುಕ್ತಿಕ ಸಂಬಂಧಗಳು ಎಲ್ಲರಿಗೂ ತಿಳಿದಿರುವಂತಹುದೇ ಆಗಿದೆ. ಆದರೂ ನಿರ್ಣಾಯಕ ಗಳಿಗೆಯಲ್ಲಿ ಅವರು ಕಾಣದೆ ಇರುವುದು, ತಮ್ಮ ಅನುಪಸ್ಥಿತಿಗಾಗಿ ಯಾವುದೇ ವಿವರಣೆ ನೀಡದಿರುವುದು ಸೋಜಿಗ ಮೂಡಿಸುತ್ತದೆ. ಕುಮಾರಸ್ವಾಮಿ ಅವರ ಈ ಮೌನ ಕುಟುಂಬಕ್ಕೆ ಈಗಾಗಲೇ ತಿಳಿದಿರುವ ವಿಷಯವನ್ನು ಸ್ಪಷ್ಟಪಡಿಸುತ್ತದೆ. ಕುಮಾರಸ್ವಾಮಿ ಆಗಲೀ, ದೇವೇಗೌಡ ಆಗಲಿ ಸಾರ್ವಜನಿಕರನ್ನು ಎದುರಿಸುವ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ನಿಖಿಲ್‍ನನ್ನು ಕಳಿಸುವ ಮೂಲಕ ಇನ್ನೂ ಅಪಹಾಸ್ಯಕ್ಕೀಡಾಗಿದ್ದು, ಉತ್ತರದಾಯಿತ್ವ ನಿರೀಕ್ಷಿಸುವ ಜಾಗದಲ್ಲಿ ಡಮ್ಮಿಯನ್ನು ನಿಲ್ಲಿಸಿದ್ದಾರೆ.

ಇನ್ನೂ ಆಘಾತಕಾರಿ ಸಂಗತಿ ಎಂದರೆ ದೇವೇಗೌಡರ ಕುಟುಂಬದ ಪ್ರಜ್ವಲ್ ರೇವಣ್ಣ, ಎರಡು ಬಾರಿ ಹಾಸನದ ಸಂಸದರಾಗಿದ್ದ ಪ್ರಜ್ವಲ್ ಈಗ ಸರಣಿ ಅತ್ಯಾಚಾರದ ಆರೋಪ ಹೊತ್ತು ಜೈಲು ವಾಸ ಎದುರಿಸುತ್ತಿರುವುದು. ಈ ಬದಲಾವಣೆಗಳು ಕೇವಲ ರಾಜಕೀಯ ಆಪಾದನೆಗಳಲ್ಲ. ಸಾರ್ವಜನಿಕರಿಗೆ ತಿಳಿದಿರುವಂತೆಯೇ ನಡೆದಿರುವ ಅಪರಾಧಗಳು. ಧರ್ಮಸ್ಥಳದಲ್ಲಿ ಚುನಾವಣಾ ಘೋಷಣೆಗಳಿಗಿಂತಲೂ ಹೆಚ್ಚಾಗಿ ನ್ಯಾಯಕ್ಕಾಗಿ ಆಗ್ರಹವೇ ವಾತಾವರಣವನ್ನು ತುಂಬಿದೆ. ಹಲವು ವರ್ಷಗಳಿಂದ ಅತ್ಯಾಚಾರ, ಹತ್ಯೆಗಳಲ್ಲಿ ಭಾಗಿಯಾಗಿರುವ ಡಿ ಗ್ಯಾಂಗ್ ವಿರುದ್ಧ ಸಾಮೂಹಿಕ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿವೆ. ಗೌಡರ ಕುಟುಂಬವು ಈ ಗ್ಯಾಂಗನ್ನು ಸಮರ್ಥಿಸುವವರನ್ನು ರಕ್ಷಿಸುತ್ತಿರುವ ಭಾವನೆ ಜನರಲ್ಲಿ ದಟ್ಟವಾಗಿದ್ದು, ಇದು ಸಾರ್ವಜನಿಕರ ಜಿಗುಪ್ಸೆಯನ್ನು ಇನ್ನೂ ಹೆಚ್ಚಿಸಿದೆ.

ಕರ್ನಾಟಕದ ಜನತೆಯನ್ನು ವಂಶಾಡಳಿತದ ನಾಟಕದಿಂದ ಮೂರ್ಖರನ್ನಾಗಿ ಮಾಡಲಾಗುವುದಿಲ್ಲ. ಜೆಡಿಎಸ್ ಒಂದು ಕಾಲದಲ್ಲಿ ಪರ್ಯಾಯ ಪ್ರಾದೇಶಿಕ ಪಕ್ಷವಾಗಿದ್ದು ಈಗ ಕೇವಲ ಅಪ್ಪಮಕ್ಕಳ ಪಕ್ಷವಾಗಿದೆ. ಪಕ್ಷದ ಹೆಸರಿನಲ್ಲಿರುವ ಕುಟುಂಬದ ಸಂಸ್ಥೆಯಾಗಿದೆ. ಪ್ರತಿಯೊಂದು ಚುನಾವಣೆಯಲ್ಲೂ ಪಕ್ಷದ ಸ್ಥಾನಗಳು ಕಡಿಮೆಯಾಗುತ್ತಲೇ ಇವೆ. ಈ ಪತನದ ನಡುವೆ ವಿಶ್ವಾಸಾರ್ಹವಾದ ಯಾವುದೇ ನಾಯಕ ಇಲ್ಲಿ ಕಂಡುಬಂದಿಲ್ಲ. ಈ ಬಿಕ್ಕಟ್ಟನ್ನು ಪ್ರಾಮಾಣಿಕವಾಗಿ ಎದುರಿಸುವ ಬದಲು, ಕುಟುಂಬವು ಅಧಿಕಾರಕ್ಕಾಗಿ ಹಾತೊರೆಯುತ್ತಿರುವುದು ದುರಂತ.

ಈ ದುರಂತದ ಬೆಳವಣಿಗೆ ಗೌಡರ ಕುಟುಂಬವನ್ನೂ ದಾಟಿ ಹೋಗುತ್ತದೆ. ಯಾವುದೇ ಇತರ ಪ್ರಜಾಪ್ರಭುತ್ವದಲ್ಲಿ ಆಳುವ ವರ್ಗಗಳ ವ್ಯಕ್ತಿಗಳನ್ನೊಳಗೊಂಡ ಈ ಮಟ್ಟದ ಅಪರಾಧಗಳು ಸರ್ಕಾರವನ್ನು ಪತನಗೊಳಿಸುತ್ತಿತ್ತು ಅಥವಾ ನಾಯಕರನ್ನು ಜೈಲಿಗೆ ಕಳಿಸಲಾಗುತ್ತಿತ್ತು. ಭಾರತದಲ್ಲಿ ರಾಜಕೀಯವಾಗಿ ಉಳಿಯುವ ಕಾರಣಕ್ಕಾಗಿ ಸತ್ಯವನ್ನು ಕೊಲ್ಲಲಾಗುತ್ತದೆ. ಪಕ್ಷಗಳು ನೈತಿಕತೆಯನ್ನು ಮರೆತು, ಕಳಂಕಮಯ ವ್ಯಕ್ತಿಗಳೊಡನೆ ಕೈಜೋಡಿಸಿ, ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುತ್ತವೆ. ಇದು ನಮ್ಮ ರಾಜಕೀಯ ವಲಯಕ್ಕೆ ಅಪಮಾನಕರ ಸಂಗತಿ.

ಧರ್ಮಸ್ಥಳ ಭಕ್ತಿಯ ಆಗರ. ಆದರೆ ಈಗ ಅದು ರಾಜಕೀಯದಿಂದ ಹೇಗೆ ಕಲುಷಿತವಾಗುತ್ತಿದೆ ಎನ್ನುವುದು ಸಾಬೀತಾಗುತ್ತಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again