ಕೆಲವೆಡೆ ಮಾತ್ರ ಹೋಟೆಲ್‍ಗಳ ಮೇಲೆ ದಾಳಿ ನಡೆಯುತ್ತಿದೆ, ಆಹಾರ ಸುರಕ್ಷತೆ ಮಾತ್ರ ಎಲ್ಲಿದೆ?

 


ಪ್ರಚಲಿತ * ಬಿವಿಸೀ

ಬೆಂಗಳೂರಿನ ಹೋಟೆಲ್‍ಗಳ ಮೇಲೆ ನಡೆಯುತ್ತಿರುವ ದಾಳಿಗಳು ಕೆಲವೇ ಕೆಲವು ಅಡುಗೆಮನೆಗಳ ಅಶುಚಿತ್ವವನ್ನು ಬಯಲಿಗೆಳೆಯುವ ಕಸರತ್ತಾಗಿ ಮಾತ್ರ ಉಳಿದರೆ ಅದರ ಅರ್ಥವೇನು? ತಪಾಸಣೆ ನಡೆಸುವುದು, ದೋಷ ಪತ್ತೆಹಚ್ಚುವುದು, ಕೆಲವು ಪದಾರ್ಥಗಳನ್ನು ವಶಪಡಿಸಿಕೊಳ್ಳುವುದು ಮತ್ತು ದಂಡ ವಿಧಿಸುವುದು - ಇಷ್ಟಕ್ಕೇ ಆಹಾರ ಸುರಕ್ಷತೆಯ ಜವಾಬ್ದಾರಿ ಮುಗಿಯುತ್ತದೆಯೇ? ಜನರ ಪ್ಲೇಟಿಗೆ ಪ್ರತಿದಿನ ತಲುಪುವ ಆಹಾರ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವ ಶಾಶ್ವತ ವ್ಯವಸ್ಥೆ ಎಲ್ಲಿದೆ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕಿದೆ.

ನಮ್ಮ ನಗರಗಳಲ್ಲಿ ಸಾವಿರಾರು ಹೋಟೆಲ್‍ಗಳು, ಉಪಾಹಾರಗೃಹಗಳು, ಬೇಕರಿಗಳು ಮತ್ತು ಆಹಾರ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಪ್ರತಿಯೊಂದರಲ್ಲೂ ಸ್ವಚ್ಛತೆ, ಆಹಾರ ಸಂಗ್ರಹಣೆ, ನೀರಿನ ಗುಣಮಟ್ಟ, ಅಡುಗೆಮನೆಯ ನಿರ್ವಹಣೆ ಮತ್ತು ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಆದರೆ ತಪಾಸಣೆ ನಡೆದಾಗ ಮಾತ್ರ ಅವಧಿ ಮೀರಿದ ಪದಾರ್ಥಗಳು, ಅಸಮರ್ಪಕ ಸಂಗ್ರಹಣೆ ಮತ್ತು ಕೊಳಕು ಪರಿಸರ ಪತ್ತೆಯಾಗುವುದಾದರೆ, ಇಷ್ಟು ದಿನ ಮೇಲ್ವಿಚಾರಣೆ ಎಲ್ಲಿತ್ತು?

ಇದು ಕೇವಲ ಹೋಟೆಲ್ ಮಾಲೀಕರ ನಿರ್ಲಕ್ಷ್ಯದ ಪ್ರಶ್ನೆಯಲ್ಲ. ಮೇಲ್ವಿಚಾರಣಾ ವ್ಯವಸ್ಥೆಯ ವೈಫಲ್ಯದ ಪ್ರಶ್ನೆಯೂ ಹೌದು. ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸುತ್ತಿದ್ದರೆ, ನಿಯಮ ಉಲ್ಲಂಘನೆಗಳು ಮರುಮರು ನಡೆಯಲು ಹೇಗೆ ಸಾಧ್ಯ? ದೂರು ಬಂದ ನಂತರ ಮಾತ್ರ ಅಧಿಕಾರಿಗಳು ಚಲಿಸುವ ವ್ಯವಸ್ಥೆ ಆಹಾರ ಸುರಕ್ಷತೆಯಂತಹ ವಿಷಯದಲ್ಲಿ ಸ್ವೀಕಾರಾರ್ಹವಲ್ಲ.

ಸಿಬ್ಬಂದಿ ಕೊರತೆಯನ್ನು ನೆಪವಾಗಿ ಹೇಳಬಹುದು. ಆದರೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿಷಯದಲ್ಲಿ ಸಿಬ್ಬಂದಿ ಕೊರತೆಯನ್ನು ಶಾಶ್ವತ ಕಾರಣವನ್ನಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಮ್ಮ ನಗರಗಳಿಗೆ ಅಗತ್ಯವಿರುವಷ್ಟು ಆಹಾರ ಸುರಕ್ಷತಾ ಸಿಬ್ಬಂದಿಯನ್ನು ನೇಮಿಸುವುದು ಸರ್ಕಾರದ ಕರ್ತವ್ಯ. ಪರೀಕ್ಷಾ ಪ್ರಯೋಗಾಲಯಗಳ ಸಾಮಥ್ರ್ಯ ಹೆಚ್ಚಿಸುವುದು, ತಪಾಸಣೆಗಳನ್ನು ನಿಯಮಿತಗೊಳಿಸುವುದು ಮತ್ತು ಉಲ್ಲಂಘನೆಗಳ ದಾಖಲೆಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡುವುದು ಕೂಡ ಅಗತ್ಯ.

ಇನ್ನೊಂದು ಮುಖ್ಯ ಪ್ರಶ್ನೆಯೆಂದರೆ, ನಿಯಮ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತಿದೆಯೇ? ಸಣ್ಣ ಹೋಟೆಲ್‍ಗಳ ಮೇಲೆ ಮಾತ್ರ ಕಠಿಣ ಕ್ರಮ ಕೈಗೊಂಡು, ದೊಡ್ಡ ಮತ್ತು ಜನಪ್ರಿಯ ಆಹಾರ ಮಳಿಗೆಗಳನ್ನು ಸಡಿಲವಾಗಿ ನೋಡಿದರೆ ಅದು ಆಹಾರ ಸುರಕ್ಷತಾ ನೀತಿಯಲ್ಲ; ಅದು ತಾರತಮ್ಯ. ಗ್ರಾಹಕನ ಹಣದ ಸಾಮಥ್ರ್ಯ ಏನೇ ಇರಲಿ, ಅವನಿಗೆ ಸಿಗಬೇಕಾದುದು ಸುರಕ್ಷಿತ ಆಹಾರವೇ.

ಆಹಾರ ಸುರಕ್ಷತೆಯನ್ನು ಕೇವಲ ದಾಳಿಗಳ ಸಂದರ್ಭದಲ್ಲಿ ನೆನಪಿಸಿಕೊಳ್ಳುವ ಅಭ್ಯಾಸ ಬದಲಾಗಬೇಕು. ತಪಾಸಣೆ ನಿರಂತರವಾಗಬೇಕು. ನಿಯಮ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಪದೇಪದೇ ತಪ್ಪು ಮಾಡುವ ಮಳಿಗೆಗಳ ವಿರುದ್ಧ ಪರವಾನಗಿ ರದ್ದುಪಡಿಸುವಂತಹ ಕ್ರಮವೂ ಇರಬೇಕು.

ಜನರು ಹೋಟೆಲ್‍ಗೆ ಹೋಗುವಾಗ ಅಡುಗೆಮನೆಯೊಳಗೆ ಇಣುಕಿ ನೋಡಲು ಸಾಧ್ಯವಿಲ್ಲ. ಅವರು ಆಡಳಿತದ ಮೇಲಿನ ನಂಬಿಕೆಯಿಂದ ಆಹಾರ ಸೇವಿಸುತ್ತಾರೆ. ಆ ನಂಬಿಕೆಗೆ ದ್ರೋಹವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕನಿಷ್ಠ ಜವಾಬ್ದಾರಿ.

ಈಗ ಸರ್ಕಾರದ ಮುಂದೆ ಒಂದೇ ಕರ್ತವ್ಯವಿದೆ - ದಾಳಿಗಳನ್ನು ನಡೆಸುವುದಕ್ಕಿಂತ ಮುನ್ನವೇ ಲೋಪಗಳನ್ನು ತಡೆಯುವ ವ್ಯವಸ್ಥೆಯನ್ನು ನಿರ್ಮಿಸುವುದು. ಇಲ್ಲವಾದರೆ ಇಂದಿನ ದಾಳಿ ಮುಗಿದರೂ, ನಾಳೆಯ ಪ್ಲೇಟಿನಲ್ಲಿರುವ ಅಪಾಯ ಮುಂದುವರಿಯುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ

WHEN COMMUNAL POLITICS POISONS TRADITION: A WARNING FROM UDUPI