ನೀಟ್ ಹಗರಣ: ಧಮೇರ್ಂದ್ರ ಪ್ರಧಾನ್ ರಾಜೀನಾಮೆಗೆ ದೇಶದ ಆಗ್ರಹ

 ಖುಲ್ಲಂ ಖುಲ್ಲಾ * ಬಿವಿಸೀ

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ; ಇದು ಇಡೀ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಬುಡಮೇಲು ಮಾಡಿರುವ ಘೋರ ದುರಂತ. ಈ ಇಡೀ ವಿವಾದದ ಕೇಂದ್ರಬಿಂದುವಾಗಿ ನಿಂತಿರುವುದು ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್. ದೇಶದ ಲಕ್ಷಾಂತರ ಉಜ್ವಲ ಯುವಜನತೆಯ ಭವಿಷ್ಯ ಮತ್ತು ಬದುಕಿನ ಜೊತೆ ಆಟವಾಡಿರುವ ಇಂತಹ ಬೃಹತ್ ಹಗರಣದ ನೈತಿಕ ಹೊಣೆ ಹೊತ್ತು, ಪ್ರಜಾಪ್ರಭುತ್ವದ ಮೂಲಭೂತ ನಿಯಮಗಳ ಅನ್ವಯ ಸಚಿವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ ದೇಶದ ಜನತೆ ಇಂದು ಕಾಣುತ್ತಿರುವುದು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಹಠಮಾರಿತನವನ್ನು ಮಾತ್ರ.

ಈ ಹಗರಣ ತಂದಿಟ್ಟಿರುವ ಮಾನವೀಯ ನಷ್ಟ ಅತ್ಯಂತ ಭೀಕರವಾದದ್ದು. ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಸೃಷ್ಟಿಯಾದ ಗೊಂದಲ, ತೀವ್ರ ಮಾನಸಿಕ ಒತ್ತಡ ಹಾಗೂ ಭವಿಷ್ಯದ ಬಗೆಗಿನ ಆತಂಕ ತಾಳಲಾರದೆ ದೇಶದಾದ್ಯಂತ ಡಜನ್‍ಗಟ್ಟಲೆ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದಾರೆ. ವರ್ಷಗಟ್ಟಲೆ ಹಗಲಿರುಳು ಶ್ರಮಪಟ್ಟು ಓದಿದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಒಂದು ಕನಸಿನ ಗೋಪುರವಾಗಿತ್ತು. ಭ್ರಷ್ಟಾಚಾರದ ದೆಸೆಯಿಂದ ಆ ಕನಸುಗಳು ನುಚ್ಚುನೂರಾದಾಗ ಯುವಮನಸ್ಸುಗಳು ಆಘಾತಕ್ಕೆ ಒಳಗಾಗಿವೆ. ದೇಶದ ಶಿಕ್ಷಣ ವ್ಯವಸ್ಥೆಯ ರಕ್ಷಕನಾಗಬೇಕಿದ್ದ ಸಚಿವನೇ ಈ ವ್ಯವಸ್ಥೆಯ ಪಾವಿತ್ರ್ಯತೆಯನ್ನು ಕಾಪಾಡಲು ವಿಫಲರಾಗಿರುವಾಗ, ಅವರು ಆ ಹುದ್ದೆಯಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ.

ಯಾವುದೇ ಪ್ರಬುದ್ಧ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹದ್ದೊಂದು ದುರಂತ ಸಂಭವಿಸಿದರೆ ಇಡೀ ಸರ್ಕಾರವೇ ಸಾರ್ವಜನಿಕ ಒತ್ತಡಕ್ಕೆ ಮಣಿದು ಅಧಿಕಾರದಿಂದ ಕೆಳಗಿಳಿಯುತ್ತಿತ್ತು. ಆದರೆ ಭಾರತದಲ್ಲಿ ಒಮ್ಮೆ ಅಧಿಕಾರ ಸಿಕ್ಕರೆ ಯಾವುದೇ ಕಾರಣಕ್ಕೂ ಕುರ್ಚಿಯನ್ನು ಬಿಟ್ಟುಕೊಡುವ ಸಂಪ್ರದಾಯವೇ ಇಲ್ಲದಂತಾಗಿದೆ. ಈ ಹಿಂದೆ ನೋಟು ರದ್ದತಿಯ ಸಂದರ್ಭದಲ್ಲಿ ಸಾವಿರಾರು ನಾಗರಿಕರು ಸಾಲಿನಲ್ಲಿ ನಿಂತು ಪ್ರಾಣ ಕಳೆದುಕೊಂಡಾಗಲೂ ಪ್ರಧಾನಿ ಮೋದಿ ರಾಜೀನಾಮೆ ನೀಡಲಿಲ್ಲ. ಅಧಿಕಾರವನ್ನು ತ್ಯಜಿಸುವುದು ಇವರ ಕಾರ್ಯಸೂಚಿಯಲ್ಲೇ ಇಲ್ಲ, ಬದಲಿಗೆ ಯಾವುದೇ ಹಾದಿಯಲ್ಲಾದರೂ ಅಧಿಕಾರವನ್ನು ಹಿಡಿಯುವುದೇ ಇವರ ಮುಖ್ಯ ಗುರಿಯಾಗಿದೆ.

ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ವಿದ್ಯಾರ್ಥಿ ಸಮೂಹದ ಕ್ಷಮೆ ಕೇಳುವ ಬದಲು, ಸಚಿವ ಪ್ರಧಾನ್ ಅವರು ತಮ್ಮ ರಾಜೀನಾಮೆ ಕೋರುವ ನಾಗರಿಕರನ್ನು `ದೇಶದ್ರೋಹಿಗಳು' ಮತ್ತು `ಉಗ್ರಗಾಮಿಗಳು' ಎಂದು ನಿಂದಿಸಲು ಹೊರಟಿದ್ದಾರೆ. ವಿಮರ್ಶಕರ ಧ್ವನಿಯನ್ನು ಅಡಗಿಸಲು ಇಂತಹ ಉಗ್ರ ಪದಗಳನ್ನು ಬಳಸುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಸಚಿವರ ರಾಜೀನಾಮೆಗೆ ಕೇಳಿಬರುತ್ತಿರುವ ಆಗ್ರಹವು ಕೇವಲ ರಾಜಕೀಯಪ್ರೇರಿತವಲ್ಲ; ಅದು ನೊಂದ ಕುಟುಂಬಗಳ ಮತ್ತು ದೇಶದ ಪ್ರಜ್ಞಾವಂತ ನಾಗರಿಕರ ನ್ಯಾಯಸಮ್ಮತ ಧ್ವನಿಯಾಗಿದೆ. ಭಾರತ ತನ್ನ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿಕೊಳ್ಳಬೇಕಾದರೆ, ನಾಯಕರು ಜನರಿಗೆ ಉತ್ತರದಾಯಿಯಾಗಿರಬೇಕು. ಧಮೇರ್ಂದ್ರ ಪ್ರಧಾನ್ ಅವರು ತಕ್ಷಣವೇ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿಯುವುದು ಇಂದಿನ ಅನಿವಾರ್ಯತೆಯಾಗಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ

WHEN COMMUNAL POLITICS POISONS TRADITION: A WARNING FROM UDUPI