ಸದಾ ವಿವಾದಗಳ ಸುಳಿಯಲ್ಲಿ ಕುಮಾರಸ್ವಾಮಿ: ಜನಸೇವೆಯೋ ಅಥವಾ ಸ್ವಹಿತಾಸಕ್ತಿಯೋ?
ನೇರಾನೇರ * ಬಿವಿಸೀ
ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಎಚ್ ಡಿ ಕುಮಾರಸ್ವಾಮಿ ಅವರು ತಮಗೆ ನಿಯೋಜಿಸಲಾದ ಉದ್ಯಮ ಮತ್ತು ಉಕ್ಕಿನ ಸಚಿವಾಲಯದ ಕಾರ್ಯ ಚಟುವಟಿಕೆಗಳಿಗಿಂತ ಹೆಚ್ಚಾಗಿ, ಸದಾ ಪ್ರಾದೇಶಿಕ ರಾಜಕೀಯದ ಜಿದ್ದಾಜಿದ್ದಿನಲ್ಲೇ ಮುಳುಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದನ್ನೆಲ್ಲ ಮಾಡಿಕೊಂಡಿರಲು ಅವರು ಖಾತಾರಹಿತ ಸಚಿವರೇ (ಮಿನಿಸ್ಟರ್ ವಿಥೌಟ್ ಪೋರ್ಟ್ಪೋಲಿಯೊ)? ಯಾವತ್ತಾದರೂ ಅವರು ತಮ್ಮ ಬೃಹತ್ ಸಚಿವಾಲಯದ ಕುರಿತು ನೀತಿ-ನಿರೂಪಕವೆನಿಸುವ ಹೇಳಿಕೆ ಕೊಟ್ಟಿದ್ದು ಕೇಳಿದ್ದೀರಾ, ನೋಡಿದ್ದೀರಾ? ರಾಷ್ಟ್ರೀಯ ಮಟ್ಟದ ಜವಾಬ್ದಾರಿಗಳಿಗಿಂತ ತಮ್ಮ ವೈಯಕ್ತಿಕ ಹಾಗೂ ಕೌಟುಂಬಿಕ ಹಿತಾಸಕ್ತಿಗಳ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ. ಇದಕ್ಕೆ ತಾಜಾ ಉದಾಹರಣೆ, ಬಿಡದಿಯಲ್ಲಿ ಪ್ರಸ್ತಾಪಿತವಾಗಿರುವ ಉಪನಗರ (ಟೌನ್ಶಿಪ್) ಯೋಜನೆಗೆ ಅವರ ತೀವ್ರ ವಿರೋಧ. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಎಕರೆಗಟ್ಟಲೆ ಭೂಮಿಯನ್ನು ಉಳಿಸಿಕೊಳ್ಳಲು ಅವರು ನಡೆಸುತ್ತಿರುವ ಹತಾಶ ಹೋರಾಟ, ಸಾರ್ವಜನಿಕ ಹಿತಾಸಕ್ತಿಗಿಂತ ಸ್ವಯಂ ಆಸ್ತಿ ರಕ್ಷಣೆಯ ರಾಜಕಾರಣವನ್ನು ಎತ್ತಿಹಿಡಿಯುತ್ತದೆ.
ತಮ್ಮ ತಂದೆ ಎಚ್ ಡಿ ದೇವೇಗೌಡರ `ಕೋಳಿ ಜಗಳ'ದ ಮಾದರಿಯ ರಾಜಕೀಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ಕುಮಾರಸ್ವಾಮಿ, ಸದಾ ಹಠಕ್ಕೆ ಬಿದ್ದು ಶತ್ರುಗಳನ್ನು ಮಟ್ಟಹಾಕುವ ಆಕ್ರಮಣಕಾರಿ ಪ್ರವೃತ್ತಿಯನ್ನು ಹೊಂದಿದ್ದಾರೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ಬಿಡದಿ ಭೂಮಿ ಹೋರಾಟದಲ್ಲಿ, ಅನಿವಾರ್ಯವಾಗಿ ತಮ್ಮ ಮಿತ್ರಪಕ್ಷವಾದ ಬಿಜೆಪಿಯ ನಾಯಕರನ್ನು ತಮ್ಮ ಪರವಾಗಿ ನಿಲ್ಲುವಂತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆದರೆ, ಇವೆಲ್ಲದರ ಒಟ್ಟಾರೆ ಫಲಿತಾಂಶವನ್ನು ಗಮನಿಸಿದರೆ, ಇದು ಕೇವಲ ಅಕ್ರಮವಾಗಿ ಗಳಿಸಿದ ಜಮೀನನ್ನು ರಕ್ಷಿಸಿಕೊಳ್ಳಲು ರಾಜಕಾರಣಿಗಳು ನಡೆಸುತ್ತಿರುವ ಒಂದು ಸಂಘಟಿತ ಪ್ರಯತ್ನದಂತೆ ಸಾರ್ವಜನಿಕರಿಗೆ ಗೋಚರಿಸುತ್ತಿದೆ. ಬಿಜೆಪಿಯ ನಾಯಕರು ಕೂಡ ಒಂದು ವೇಳೆ ಕುಮಾರಸ್ವಾಮಿಯವರನ್ನು ಬೆಂಬಲಿಸದಿದ್ದರೆ, ಅವರು ಹಳೆಯ ವಿಷಯಗಳನ್ನು ಕೆದಕಿ ತಮಗೆ ರಾಜಕೀಯವಾಗಿ ಹಾನಿ ಮಾಡಬಹುದು ಅಥವಾ ಬ್ಲ್ಯಾಕ್ಮೇಲ್ ತಂತ್ರ ಅನುಸರಿಸಬಹುದು ಎಂಬ ಆತಂಕದಿಂದಲೇ ಅನಿವಾರ್ಯವಾಗಿ ಧ್ವನಿಗೂಡಿಸುತ್ತಿದ್ದಾರೆ.
ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಭೂಹಗರಣ ಮತ್ತು ನ್ಯಾಯಾಲಯದ ವ್ಯಾಜ್ಯಗಳಲ್ಲಿ ಸಿಲುಕಿಕೊಳ್ಳುವುದು ಈ ಕುಟುಂಬಕ್ಕೆ ಹೊಸದೇನಲ್ಲ. ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ತಾವು ನಿಲ್ಲಿಸಿದ್ದ ಏಕೈಕ ಅಭ್ಯರ್ಥಿಯನ್ನೂ ಗೆಲ್ಲಿಸಿಕೊಳ್ಳಲಾಗದ ಕುಮಾರಸ್ವಾಮಿ, ಸೋಲಿನ ಹತಾಶೆಯಿಂದ ತಮ್ಮದೇ ಪಕ್ಷದ ಶಾಸಕರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದರು. ಯಾವುದೇ ಮುನ್ನಾಲೋಚನೆಯಿಲ್ಲದೆ, ಆವೇಶದಲ್ಲಿ ಇತರರ ಮೇಲೆ ವೈಯಕ್ತಿಕ ದಾಳಿ ನಡೆಸುವುದು ಇವರ ಚಾಳಿಯಾಗಿದೆ. ಈ ಮಾತುಗಳಿಂದ ಸಮಾಜದಲ್ಲಿ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಎಷ್ಟು ಅಪಕೀರ್ತಿ ಬರುತ್ತದೆ ಎಂಬುದರ ಬಗ್ಗೆಯೂ ಅವರು ಯೋಚಿಸುವುದಿಲ್ಲ. ಇಂದು ಅದು ಒಂದೆರಡು ಜಿಲ್ಲೆಗಳಲ್ಲಿ ಜೀವ ಹಿಡಿದುಕೊಂಡಿರುವ ಒಕ್ಕಲಿಗರ ಪಕ್ಷ ಎಂದು ಮಾತ್ರ ಎನಿಸಿದೆ.
ಕಳೆದ ಎರಡು ದಶಕಗಳಲ್ಲಿ ಇವರ ಇಂತಹ ಸ್ವಾರ್ಥ ಸಾಧನೆಯ ನಾಯಕತ್ವದಿಂದಾಗಿ, ಜೆಡಿಎಸ್ ಪಕ್ಷವು ಅಧೋಗತಿಗೆ ಇಳಿದಿದೆ. ಅಂದು 58 ಕ್ಷೇತ್ರಗಳನ್ನು ಹೊಂದಿದ್ದ ಪಕ್ಷವು ಇಂದು ಕೇವಲ 18 ಸೀಟುಗಳಿಗೆ ಬಂದು ತಲುಪಿದ್ದರೂ, ಈ `ಅಪ್ಪ-ಮಕ್ಕಳ ಪಕ್ಷ'ದಲ್ಲಿ ಯಾವುದೇ ಆತ್ಮಾವಲೋಕನ ನಡೆದಿಲ್ಲ. ಪಕ್ಷವು ವಿನಾಶದ ಅಂಚಿನಲ್ಲಿದ್ದರೂ, ಅಧಿಕಾರದಲ್ಲಿ ಇರುವವರೆಗೂ ಎಷ್ಟು ಸಾಧ್ಯವೋ ಅಷ್ಟು ಆಸ್ತಿ ಮತ್ತು ಸಂಪತ್ತನ್ನು ಲೂಟಿ ಮಾಡುವುದೇ ಇವರ ಏಕೈಕ ಗುರಿಯಾಗಿದೆ ಎಂಬುದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಸಂಗತಿಯಾಗಿದೆ.
Comments
Post a Comment