ಬಿಡದಿಯಲ್ಲಿ ಚೆಡ್ಡಿಯನ್ನೂ ಬಿಚ್ಚಾಕಿ ಸರಕಾರದೊಂದಿಗೆ ಕುಸ್ತಿಗಿಳಿದ ಜೆಡಿಎಸ್-ಬಿಜೆಪಿ ದೊಣ್ಣೆ ನಾಯಕರು

 ಬೆತ್ತಲೆ ರಾಜಕೀಯ * ಬಿವಿಸೀ


ರಾಜಕೀಯದಲ್ಲಿ ಅಧಿಕಾರ ಎಂಬುದು ಸಾರ್ವಜನಿಕ ಸೇವೆಗಿಂತ ಹೆಚ್ಚಾಗಿ ಸ್ವಹಿತಾಸಕ್ತಿ ಹಾಗೂ ಸ್ವತ್ತುಗಳ ರಕ್ಷಣೆಗೆ ಬಳಕೆಯಾಗುತ್ತಿರುವ ನಿದರ್ಶನಗಳು ಹೆಚ್ಚುತ್ತಿವೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಬಿಡದಿಯ ಉಪನಗರ ಯೋಜನೆ ಈಗ ಇಂತಹದ್ದೇ ಒಂದು ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ರಾಜ್ಯ ಸರ್ಕಾರವು ಮೂಲಸೌಕರ್ಯ ಅಭಿವೃದ್ಧಿಯ ದೃಷ್ಟಿಯಿಂದ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದರೆ, ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ವಿರೋಧ ಪಕ್ಷಗಳು ಇದಕ್ಕೆ ತೀವ್ರ ಪ್ರತಿರೋಧ ಒಡ್ಡುತ್ತಿವೆ. ಈ ಸಂಘರ್ಷದ ಹಿಂದೆ ಸಾರ್ವಜನಿಕ ಹಿತಾಸಕ್ತಿಗಿಂತ ಹೆಚ್ಚಾಗಿ ರಾಜಕೀಯ ಪ್ರಭಾವ ಮತ್ತು ವಿಸ್ತಾರವಾದ ಭೂಮಾಲೀಕತ್ವದ ರಕ್ಷಣೆಯ ಹಪಾಹಪಿ ಎದ್ದು ಕಾಣುತ್ತಿದೆ.


ಬಿಡದಿ ಸುತ್ತಮುತ್ತ ದೇವೇಗೌಡರ ಕುಟುಂಬವು ನೂರಾರು ಎಕರೆ ಜಮೀನು ಹೊಂದಿದೆ ಎನ್ನುವುದು ಯಾರಿಗೆ ಗೊತ್ತಿಲ್ಲ?  ಇದರಲ್ಲಿ ಬಹುಪಾಲು ಒತ್ತುವರಿ ಹಾಗೂ ಅಕ್ರಮ ವಶದಲ್ಲಿದೆ. ಸರ್ಕಾರಿ ಯೋಜನೆ ಜಾರಿಗೆ ಬಂದರೆ ತಮ್ಮ ಖಾಸಗಿ ಸಾಮ್ರಾಜ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಏಕೈಕ ಕಾರಣಕ್ಕಾಗಿ ಕೇಂದ್ರ ಸಚಿವರೊಬ್ಬರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ಜನರನ್ನು ಸಜ್ಜುಗೊಳಿಸಿ, ಶಕ್ತಿ ಪ್ರದರ್ಶನ ಮಾಡುವ ಮೂಲಕ ಸರ್ಕಾರದ ಪ್ರಗತಿಪರ ಕೆಲಸಗಳಿಗೆ ಅಡ್ಡಿಪಡಿಸಲಾಗುತ್ತಿದೆ. ಈ ಸ್ವಾರ್ಥದ ಆಟದಲ್ಲಿ ಬಿಜೆಪಿ ಕೂಡ ಜೆಡಿಎಸ್ ಕೈಜೋಡಿಸಿರುವುದು ಆಶ್ಚರ್ಯಕರವಾಗಿದ್ದು, ಇದು ಮುಂಬರುವ ದಿನಗಳಲ್ಲಿ ಉಭಯ ಪಕ್ಷಗಳಿಗೂ ಭಾರಿ ರಾಜಕೀಯ ಹಿನ್ನಡೆ ತರುವುದು ನಿಶ್ಚಿತ. ಸಾರ್ವಜನಿಕರು ಈ ಭೂ ಲೂಟಿಯ ತಂತ್ರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.


ಈ ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸಲು ಮುಖ್ಯಮಂತ್ರಿಗಳು ಜೆಡಿಎಸ್ ನಿಯೋಗವನ್ನು ಸಚಿವಾಲಯಕ್ಕೆ ಮಾತುಕತೆಗೆ ಆಹ್ವಾನಿಸಿದ್ದರು. ಆದರೆ, ಪ್ರಜಾಪ್ರಭುತ್ವದ ನಿಯಮಾವಳಿಗಳನ್ನು ಗಾಳಿಗೆ ತೂರಿರುವ ಕುಮಾರಸ್ವಾಮಿ, ಮುಖ್ಯಮಂತ್ರಿಗಳೇ ಬಿಡದಿಗೆ ಬಂದು ತಮಗೆ ಅನುಕೂಲಕರವಾದ ದಿನಾಂಕದಂದು ಸಭೆ ನಡೆಸಬೇಕೆಂದು ಹಠ ಹಿಡಿದಿದ್ದಾರೆ. ಆಡಳಿತ ವ್ಯವಸ್ಥೆಯು ಒಬ್ಬ ಸಾಮಂತ ರಾಜನ ಇಷ್ಟದಂತೆ ನಡೆಯಲು ಸಾಧ್ಯವಿಲ್ಲ. ಮತ್ತೊಂದೆಡೆ, ಬಿಡದಿಯ ಸಾಮಾನ್ಯ ರೈತರು ಯೋಗ್ಯ ಪರಿಹಾರ ಸಿಕ್ಕರೆ ತಾವಾಗಿಯೇ ಭೂಮಿ ನೀಡಲು ಮುಂದೆ ಬರುತ್ತಿದ್ದರೂ, ಅವರನ್ನು ದಿಕ್ಕು ತಪ್ಪಿಸುವ ಕೆಲಸ ನಿರಂತರವಾಗಿ ಸಾಗಿದೆ. ನಿಸ್ವಾರ್ಥ ದೇಶಭಕ್ತಿಯ ಕೊರತೆ ಎದ್ದು ಕಾಣುತ್ತಿರುವ ಈ ಸಂದರ್ಭದಲ್ಲಿ, ಸ್ವಹಿತಾಸಕ್ತಿಯ ಗೌಡರ ಕುಟುಂಬಕ್ಕೆ ಬಿಡದಿಯ ಪ್ರಜ್ಞಾವಂತ ಜನರೇ ಸೂಕ್ತ ಪಾಠ ಕಲಿಸಲಿದ್ದಾರೆ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again