ಮುಳುಗಿದ ಉದಯೋನ್ಮುಖ ಸೂರ್ಯ: ಡಿಎಂಕೆಯ ಅಹಂಕಾರ-ದ್ವೇಷದ ರಾಜಕಾರಣಕ್ಕೆ ಸಂದ ಪ್ರತಿಫಲ
ಖುಲ್ಲಂ ಖುಲ್ಲಾ * ಬಿವಿಸೀ
ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನಕ್ಕೆ ಎಂ ಕೆ ಸ್ಟಾಲಿನ್ ನೀಡಿದ ರಾಜೀನಾಮೆಯು ಕೇವಲ ಒಂದು ಸರ್ಕಾರದ ಪತನವಲ್ಲ; ಇದು ಅಹಂಕಾರವನ್ನೇ ಹಾಸು-ಹೊದ್ದು ಮಲಗಿದ ರಾಜಕೀಯ ಸಿದ್ಧಾಂತದ ಹೀನಾಯ ಅಂತ್ಯ. ಒಂದು ಕಾಲದಲ್ಲಿ ತಮಿಳು ಸಂಸ್ಕøತಿಯ ಏಕೈಕ ರಕ್ಷಕನೆಂದು ಬಣ್ಣಿಸಿಕೊಳ್ಳುತ್ತಿದ್ದ ಡಿಎಂಕೆ ಪಕ್ಷವು ಇಂದು ಇತಿಹಾಸದ ಕಸದ ಬುಟ್ಟಿಗೆ ಸೇರುವಂತಾಗಿದೆ. "ಸಾಕಪ್ಪಾ ಸಾಕು" ಎಂದು ಮತದಾರರು ನೀಡಿದ ಈ ತೀರ್ಪು, ಕೇವಲ ಆಡಳಿತ ಬದಲಾವಣೆಯಲ್ಲ, ಬದಲಾಗಿ ಜನರ ಭಾವನೆಗಳೊಂದಿಗೆ ಆಟವಾಡಿದವರಿಗೆ ಸಂದ ತಕ್ಕ ಪಾಠವಾಗಿದೆ.
ಈ ಪತನದ ಹಿಂದಿನ ಪ್ರಮುಖ ಕಾರಣವೆಂದರೆ ಮೌಲ್ಯಾಧಾರಿತ ಆಡಳಿತವನ್ನು ಸಂಪೂರ್ಣವಾಗಿ ಬದಿಗೊತ್ತಿ, ಅಧಿಕಾರವನ್ನು ಕೇವಲ ಒಂದು ಕುಟುಂಬದ ಸ್ವತ್ತನ್ನಾಗಿ ಮಾಡಿಕೊಂಡಿದ್ದು. ಯಾವುದೇ ಆಡಳಿತಾತ್ಮಕ ಅನುಭವ ಅಥವಾ ರಾಜಕೀಯ ಪರಿಪಕ್ವತೆ ಇಲ್ಲದ ಮಗ ಉದಯನಿಧಿ ಸ್ಟಾಲಿನ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸುವ ಮೂಲಕ ಸ್ಟಾಲಿನ್ ಅವರು ಡಿಎಂಕೆ ಪಕ್ಷವನ್ನು ಕೇವಲ ಕುಟುಂಬದ ಆಸ್ತಿಯಾಗಿ ಪರಿವರ್ತಿಸಿದರು. ಈ ನಿರ್ಧಾರವು ದಶಕಗಳ ಕಾಲ ಪಕ್ಷಕ್ಕಾಗಿ ಬೆವರು ಸುರಿಸಿದ ಹಿರಿಯ ನಾಯಕರನ್ನು ಮತ್ತು ಅನುಭವಿ ಶಾಸಕರನ್ನು ಕಡೆಗಣಿಸಿತು ಮಾತ್ರವಲ್ಲದೆ, ಸಾಮಾನ್ಯ ಜನರ ಕಲ್ಯಾಣಕ್ಕಿಂತ ಕುಟುಂಬದ ಅಧಿಕಾರ ಸ್ಥಾಪನೆಯೇ ಮುಖ್ಯ ಎಂಬ ಸಂದೇಶವನ್ನು ರವಾನಿಸಿತು.
ಡಿಎಂಕೆಯ ವಿನಾಶಕ್ಕೆ ಅಂತಿಮ ಮೊಳೆ ಹೊಡೆದದ್ದು ಸನಾತನ ಧರ್ಮದ ವಿರುದ್ಧ ಆ ಪಕ್ಷ ನಡೆಸಿದ ನಿರಂತರ ಮತ್ತು ಕೀಳುಮಟ್ಟದ ದಾಳಿ. ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಅವರಿಗೆ ಸನಾತನ ಧರ್ಮದ ಮೌಲ್ಯಗಳನ್ನು ಅವಹೇಳನ ಮಾಡುವುದೇ ಏಕೈಕ ಕಾರ್ಯಸೂಚಿಯಾಗಿತ್ತು. ಸನಾತನ ಧರ್ಮವನ್ನು "ವೈರಸ್", "ಮಲೇರಿಯಾ" ಮತ್ತು "ಡೆಂಗ್ಯೂ"ಗೆ ಹೋಲಿಸುವ ಮೂಲಕ ಉದಯನಿಧಿ ಕೇವಲ ಒಂದು ಸಿದ್ಧಾಂತವನ್ನು ಟೀಕಿಸಲಿಲ್ಲ, ಬದಲಾಗಿ ಈ ದೇಶದ ಕೋಟ್ಯಂತರ ಜನರ ಸಾಂಸ್ಕøತಿಕ ಅಸ್ಮಿತೆಯ ಮೇಲೆ ಯುದ್ಧ ಘೋಷಿಸಿದರು. ಅಲ್ಪಸಂಖ್ಯಾತರು ಮತ್ತು ಕೆಲವು ಹಿಂದುಳಿದ ವರ್ಗಗಳ ಬೆಂಬಲವಿದ್ದರೆ ಸಾಕು, ಯಾರನ್ನೂ ಬೇಕಾದರೂ ಅವಮಾನಿಸಬಹುದು ಎಂಬ ಅವರ ಕುರುಡು ನಂಬಿಕೆ ಇಂದು ಧೂಳೀಪಟವಾಗಿದೆ. ಸಮಾಜದ ಯಾವ ವರ್ಗವೂ ಇಂತಹ ವಿಭಜಕ ಮತ್ತು ದ್ವೇಷದ ರಾಜಕಾರಣವನ್ನು ಒಪ್ಪಲಿಲ್ಲ ಎಂಬುದು ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ.
ರಾಷ್ಟ್ರಮಟ್ಟದಲ್ಲಿ ಇಂದು ಡಿಎಂಕೆ ಸಂಪೂರ್ಣವಾಗಿ ಏಕಾಂಗಿಯಾಗಿದೆ. ಡಿಎಂಕೆಯ ಹಾದಿ ತಪ್ಪಿದ ರಾಜಕಾರಣವನ್ನು ಕಂಡು ದಶಕಗಳ ಹಳೆಯ ಮಿತ್ರಪಕ್ಷವಾದ ಕಾಂಗ್ರೆಸ್ ಕೂಡ ಅವರನ್ನು ಕೈಬಿಟ್ಟಿದೆ. ಪಕ್ಷದೊಳಗಿನ ಸ್ವಂತ ಸದಸ್ಯರೇ ನಾಯಕತ್ವದ ವಿರುದ್ಧ ಬಂಡೆದ್ದು ಹೊರಬರುತ್ತಿದ್ದಾರೆ. ಈ ನಡುವೆ, ತೆಲಂಗಾಣದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಹಿಂದೂಗಳ ಏಕತೆಯನ್ನು ಒಡೆಯಲು ಯತ್ನಿಸಿದ ಡಿಎಂಕೆಯ ಸ್ವಾರ್ಥವನ್ನು ಮತ್ತು ಸಂಕುಚಿತ ಮನೋಭಾವವನ್ನು ರಾಷ್ಟ್ರಮಟ್ಟದಲ್ಲಿ ಬಹಿರಂಗವಾಗಿ ಖಂಡಿಸಿದ್ದು ದೊಡ್ಡ ಪೆಟ್ಟು ನೀಡಿದೆ.
ಎಐಎಡಿಎಂಕೆ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ, ಡಿಎಂಕೆ ತನ್ನ ಮೊದಲ ಸ್ಥಾನವನ್ನು ಕಳೆದುಕೊಂಡು ಅಸ್ತಿತ್ವಕ್ಕಾಗಿ ಹೋರಾಡುವ ಸ್ಥಿತಿಗೆ ತಲುಪಿದೆ. "ಬಿತ್ತಿದಂತೆ ಬೆಳೆ" ಎಂಬ ಗಾದೆಯಂತೆ, ದ್ವೇಷ, ಅಹಂಕಾರ ಮತ್ತು ಕುಟುಂಬ ರಾಜಕಾರಣದ ಬೀಜ ಬಿತ್ತಿದ ಸ್ಟಾಲಿನ್ ಮತ್ತು ಅವರ ಪುತ್ರ ಇಂದು ಅದರ ಕಹಿ ಫಲವನ್ನು ಉಣ್ಣುತ್ತಿದ್ದಾರೆ. ಅಧಿಕಾರ ದಾಹಕ್ಕಾಗಿ ಜನರ ಸಂಸ್ಕøತಿಯನ್ನು ತುಳಿದವರನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ ಎಂಬುದಕ್ಕೆ ಈ ಪತನವೇ ಸಾಕ್ಷಿ. ತಮಿಳುನಾಡಿನ ಈ ಬದಲಾವಣೆಯು ಭಾರತೀಯ ರಾಜಕೀಯದಲ್ಲಿ ಒಂದು ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ.
Comments
Post a Comment