ಶಾಸಕನೆಂಬ ಅಹಂಕಾರ ಮತ್ತು ಬುಲ್ಡೋಜರ್ ನ್ಯಾಯ

 ಪುತ್ತೂರು ಎಂಎಲ್ಲೆಯ ಮಿತಿಮೀರಿದ ದಾಹಕ್ಕೆ ಎಣೆಯಿಲ್ಲವೇ?


ಇರೋದು ಇದ್ದಂಗೆ * ಬಿವಿಸೀ

ಪ್ರಜಾಪ್ರಭುತ್ವದ ಆಶಯಗಳ ಮೇಲೆ ಪ್ರಮಾಣ ವಚನ ಸ್ವೀಕರಿಸುವ ಒಬ್ಬ ಜನಪ್ರತಿನಿಧಿ, ತಾನೇ ಕಾನೂನಿಗಿಂತ ಮಿಗಿಲು ಎಂದು ಬೀಗುವುದು ವ್ಯವಸ್ಥೆಗೆ ಅಂಟಿದ ಶಾಪ. ಪುತ್ತೂರಿನ ಆಡಳಿತ ಪಕ್ಷದ ಶಾಸಕರ ಇತ್ತೀಚಿನ ನಡವಳಿಕೆಗಳು ಈ ಮಾತಿಗೆ ಜ್ವಲಂತ ಸಾಕ್ಷಿಯಂತಿವೆ. ನ್ಯಾಯಾಲಯದ ಆದೇಶಗಳನ್ನು ಕಾಲಕಸದಂತೆ ಕಂಡು, ತಾನೇ ಸ್ವತಃ ಬುಲ್ಡೋಜರ್ ಏರಿ ಜನರ ಸೂರುಗಳನ್ನು ನೆಲಸಮ ಮಾಡಿದ ಶಾಸಕರ ಈ ರಾಕ್ಷಸೀತನವು ಕೇವಲ ಒಂದು ಅಕ್ರಮ ಕೃತ್ಯವಲ್ಲ; ಇದು ಈ ದೇಶದ ನ್ಯಾಯಾಂಗ ವ್ಯವಸ್ಥೆಗೆ ಒಡ್ಡಿದ ನೇರ ಸವಾಲಾಗಿದೆ. ಕಾನೂನು ಪಾಲಿಸಬೇಕಾದವರೇ ಕಾನೂನು ಭಕ್ಷಕರಾದಾಗ ಸಾಮಾನ್ಯ ಜನರಿಗೆ ರಕ್ಷಣೆ ಎಲ್ಲಿ ಎಂಬ ಪ್ರಶ್ನೆ ಈಗ ದಟ್ಟವಾಗಿ ಮೂಡಿದೆ.

ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ಪಕ್ಕದ ನಿವಾಸಿಗಳ ನೆಲೆಗಳನ್ನು ಕೆಡವಬಾರದೆಂದು ಉಚ್ಚ ನ್ಯಾಯಾಲಯವು ಸ್ಪಷ್ಟವಾದ ತಡೆಯಾಜ್ಞೆ ನೀಡಿದ್ದರೂ, ಅದನ್ನು ಲೆಕ್ಕಿಸದೆ ಶಾಸಕರು ತೋರಿದ ಆತುರ ಮತ್ತು ಆವೇಶ ಅಕ್ಷಮ್ಯ. ಮಾಧ್ಯಮಗಳಲ್ಲಿ ಪ್ರಕಟವಾದ ಚಿತ್ರಗಳು ಶಾಸಕರ ಅಸಲಿ ಮುಖವನ್ನು ಅನಾವರಣಗೊಳಿಸಿವೆ. ಸ್ವತಃ ಬುಲ್ಡೋಜರ್ ಚಾಲಕನ ಸೀಟಿನಲ್ಲಿ ಕುಳಿತು ಕಟ್ಟಡಗಳನ್ನು ಕೆಡವುತ್ತಿರುವ ಶಾಸಕರು, ಈಗ `ನಾನು ಮಾಡಿದ್ದಲ್ಲ, ಭಕ್ತರು ಮಾಡಿದ್ದು' ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಮತ್ತು ಹೇಡಿತನದ ಪರಮಾವಧಿ. 

ಒಬ್ಬ ಬಿಲ್ಡರ್ ಆಗಿ ಅವರ ವೃತ್ತಿಪರ ಹಿತಾಸಕ್ತಿಗಳು ಈ ಧ್ವಂಸ ಕಾರ್ಯಾಚರಣೆಯ ಹಿಂದೆ ಇವೆಯೇ ಎಂಬ ಸಾರ್ವಜನಿಕರ ಸಂಶಯಕ್ಕೆ ಅವರ ಈ ಗೂಂಡಾ ವರ್ತನೆಯೇ ಪುಷ್ಟಿ ನೀಡುತ್ತಿದೆ. ಅಧಿಕಾರ ಮತ್ತು ಹಣದ ಬಲವಿದ್ದರೆ ಯಾವುದನ್ನೂ ಸಾಧಿಸಬಹುದು ಎಂಬ ಅಹಂಕಾರ ಅವರ ಪ್ರತಿ ನಡೆಯಲ್ಲೂ ಎದ್ದು ಕಾಣುತ್ತಿದೆ.

ದಿನನಿತ್ಯ ಭಕ್ತಿ ಮತ್ತು ಸಂಪ್ರದಾಯದ ಹೆಸರಿನಲ್ಲಿ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನ ಮಾಡುವ ಶಾಸಕರು, ವಾಸ್ತವದಲ್ಲಿ ನ್ಯಾಯಾಂಗದ ಕಟ್ಟಪ್ಪಣೆಯನ್ನು ಗಾಳಿಗೆ ತೂರಿರುವುದು ಅವರ `ಕಾನೂನುಬಾಹಿರ' ಮನಸ್ಥಿತಿಯನ್ನು ತೋರಿಸುತ್ತದೆ. ಆಡಳಿತ ಪಕ್ಷದ ಶಾಸಕನಾದ ಕಾರಣ ತನ್ನನ್ನು ಯಾರೂ ಏನೂ ಮಾಡಲಾರರು ಎಂಬ ಭ್ರಮೆಯಲ್ಲಿರುವ ಅವರಿಗೆ ಈಗ ಕಾನೂನಿನ ಅಸ್ತ್ರ ತಟ್ಟತೊಡಗಿದೆ. ಸಂತ್ರಸ್ತರು ನ್ಯಾಯಾಲಯದ ಮೊರೆ ಹೋಗಿದ್ದು, ಕೋರ್ಟ್ ಈಗ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಿದೆ.  ಶಾಸಕನೆಂದರೆ ಸಮಾಜಕ್ಕೆ ಮಾದರಿಯಾಗಿರಬೇಕೇ ಹೊರತು, ಬುಲ್ಡೋಜರ್ ಹಿಡಿದು ಅಬ್ಬರಿಸುವ ಉಗ್ರಗಾಮಿಯಂತಲ್ಲ.

ಈ ದೇಶದ ಕಾನೂನು ಎಲ್ಲರಿಗೂ ಒಂದೇ. ಅದು ಸಾಮಾನ್ಯನಿಗಿರಲಿ ಅಥವಾ ಪ್ರಭಾವಿ ಶಾಸಕನಿಗಿರಲಿ, ಉಲ್ಲಂಘನೆಯಾದಾಗ ಶಿಕ್ಷೆ ಅನಿವಾರ್ಯ. ನ್ಯಾಯಾಲಯದ ಅವಮಾನ ಎಸಗಿರುವ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಇಂದು ಕಾಲದ ಅವಶ್ಯಕತೆಯಾಗಿದೆ. ಇಲ್ಲದಿದ್ದರೆ, ಪ್ರತಿಯೊಬ್ಬ ರಾಜಕಾರಣಿಯೂ ತಾನೇ ಒಬ್ಬ ನ್ಯಾಯಾಧೀಶ ಎಂದು ಭಾವಿಸಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಸುವುದರಲ್ಲಿ ಸಂಶಯವಿಲ್ಲ. ಪುತ್ತೂರಿನ ಜನತೆ ಮತ್ತು ಇಡೀ ರಾಜ್ಯ ಈಗ ನ್ಯಾಯಾಲಯದ ತೀರ್ಪಿನತ್ತ ಕಣ್ಣು ನೆಟ್ಟಿದೆ. ಈ `ಬುಲ್ಡೋಜರ್ ನ್ಯಾಯ'ಕ್ಕೆ ತಾರ್ಕಿಕ ಅಂತ್ಯ ಸಿಗಲೇಬೇಕು ಮತ್ತು ಅಧಿಕಾರದ ಮದದಲ್ಲಿ ಕಾನೂನು ಮೀರಿದವರಿಗೆ ಕಠಿಣ ಪಾಠ ಕಲಿಸಲೇಬೇಕು.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again