ಖರ್ಗೆ ಪ್ರಚೋದನಾಕಾರಿ ಭಾಷಣ ಪ್ರಜಾಪ್ರಭುತ್ವದ ಘನತೆಗೆ ಚ್ಯುತಿ

 ಸಂಪಾದಕೀಯ


ಅಸ್ಸಾಂನ ಚುನಾವಣಾ ರ್ಯಾಲಿಗಳಲ್ಲಿ ಇತ್ತೀಚೆಗೆ ಕೇಳಿಬಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣಗಳು ಭಾರತೀಯ ಪ್ರಜಾಪ್ರಭುತ್ವದ ಮೂಲಭೂತ ಆಶಯಗಳಿಗೆ ಧಕ್ಕೆ ತರುವಂತಿವೆ. ದಶಕಗಳ ಕಾಲ ಅಧಿಕಾರ ರಾಜಕಾರಣದಲ್ಲಿ ಪಳಗಿದ, ಅಪಾರ ಅನುಭವವಿರುವ ಮಲ್ಲಿಕಾರ್ಜುನ ಖರ್ಗೆಯಂತಹ ಹಿರಿಯ ನಾಯಕರು, ರಾಜಕೀಯ ಎದುರಾಳಿಗಳನ್ನು "ವಿಷಕಾರಿ ಹಾವುಗಳು" ಎಂದು ಬಿಂಬಿಸಿ, ಅವುಗಳನ್ನು "ಕೊಲ್ಲಬೇಕು" ಎಂದು ಕುರಾನ್ ಧರ್ಮಗ್ರಂಥದ ಉಲ್ಲೇಖದೊಂದಿಗೆ ಕರೆ ನೀಡಿದಾಗ, ಪ್ರಜಾಸತ್ತಾತ್ಮಕ ಭಿನ್ನಮತ ಮತ್ತು ಅಪಾಯಕಾರಿ ಪ್ರಚೋದನೆಯ ನಡುವಿನ ಗೆರೆ ಅಳಿಸಿಹೋಗುತ್ತದೆ. ನೀಲಂಬಜಾರ್‍ನಲ್ಲಿ ಅಲ್ಪಸಂಖ್ಯಾತ ಮತದಾರರನ್ನು ಉದ್ದೇಶಿಸಿ ಮಾತನಾಡುತ್ತಾ, ಆರ್‍ಎಸ್‍ಎಸ್ ಅಥವಾ ಬಿಜೆಪಿಯನ್ನು ಪ್ರತಿನಿಧಿಸುವವರನ್ನು ನಾಶಪಡಿಸುವುದು ಕುರಾನ್‍ನಲ್ಲಿ ವಿಧಿಸಲ್ಪಟ್ಟಿದೆ ಎಂದು ಸೂಚಿಸುವುದು ಕೇವಲ ಒಂದು ವಾಕ್ಚಾತುರ್ಯದ ತಪ್ಪಲ್ಲ; ಬದಲಾಗಿ ಅದು ದೇಶದ ಸಾಂವಿಧಾನಿಕ ಚೌಕಟ್ಟಿನ ಮೇಲಿನ ಪ್ರಹಾರವಾಗಿದೆ.


ಪ್ರಜಾಪ್ರಭುತ್ವವು ವಿರೋಧ ಪಕ್ಷದ ಅಸ್ತಿತ್ವದ ಮೇಲೆ ಅವಲಂಬಿತವಾಗಿದೆ. ನಾವು ಒಂದು ಸಿದ್ಧಾಂತವನ್ನು ಒಪ್ಪದಿದ್ದರೂ, ಆ ಸಿದ್ಧಾಂತದ ಅನುಯಾಯಿಗಳ ಬದುಕುವ ಮತ್ತು ಸ್ಪರ್ಧಿಸುವ ಹಕ್ಕನ್ನು ಗೌರವಿಸಬೇಕೆಂಬ ಕಲ್ಪನೆಯ ಮೇಲೆ ನಮ್ಮ ವ್ಯವಸ್ಥೆ ನಿಂತಿದೆ. ಆದರೆ ಚರ್ಚೆಯ ವಿಷಯಗಳನ್ನು ಬದಿಗಿಟ್ಟು, ದೈಹಿಕ ನಾಶಕ್ಕೆ ಕರೆ ನೀಡುವುದರ ಮೂಲಕ ಒಬ್ಬ ಪ್ರಭಾವಿ ನಾಯಕರು ಧಾರ್ಮಿಕ ಚೌಕಟ್ಟಿನಡಿಯಲ್ಲಿ ಹಿಂಸಾಚಾರಕ್ಕೆ ಮನ್ನಣೆ ನೀಡಿದಂತಾಗುತ್ತದೆ. ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಸಮರ್ಥನೀಯವಲ್ಲ. ಇಂತಹ ಭಾಷಣಗಳು ಧರ್ಮವನ್ನು ಅಸ್ತ್ರವನ್ನಾಗಿಸುತ್ತವೆ, ನಿರ್ದಿಷ್ಟ ಸಮುದಾಯವನ್ನು ಪ್ರಚೋದನಾಕಾರಿ ರೂಪಕಗಳ ಮೂಲಕ ಗುರಿ ಮಾಡುತ್ತವೆ ಮತ್ತು ವಾಸ್ತವ ಜಗತ್ತಿನಲ್ಲಿ ಹಿಂಸಾಚಾರಕ್ಕೆ ಕಾರಣವಾಗುವ ಅಪಾಯವನ್ನು ತಂದೊಡ್ಡುತ್ತವೆ. ಈ ಹೇಳಿಕೆಗಳು ಕೇವಲ ಸಾಂಕೇತಿಕ ಎಂಬ ವಾದಕ್ಕೆ ಇಲ್ಲಿ ಅರ್ಥವಿಲ್ಲ; ಏಕೆಂದರೆ ಶತ್ರುಗಳನ್ನು ಸಂಹರಿಸಲು ಪ್ರಾರ್ಥನೆಯನ್ನೂ ಬಿಡಬೇಕು ಎಂದು ಜನರಿಗೆ ನೇರವಾಗಿ ಹೇಳಲಾಗಿದೆ.

ಇನ್ನೊಂದೆಡೆ, ಸಾಮಾನ್ಯ ಪ್ರಜೆಯ ಮೇಲೆ ಕಾನೂನು ಕ್ರಮ ಜರುಗಿಸುವಲ್ಲಿ ತೋರಿಸುವ ಆತುರವನ್ನು ಇಂತಹ ಹಿರಿಯ ನಾಯಕರ ವಿಷಯದಲ್ಲಿ ಕಾನೂನು ಪಾಲಕರು ತೋರುತ್ತಿಲ್ಲದಿರುವುದು `ಎರಡು ಬಗೆಯ ನೀತಿ' ಎಂಬ ಸಂಶಯವನ್ನು ಮೂಡಿಸುತ್ತದೆ. ಚುನಾವಣಾ ಆಯೋಗವು ಕೇವಲ ನೋಟಿಸ್ ನೀಡುವುದಕ್ಕೆ ಸೀಮಿತವಾಗಿದ್ದರೆ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವು ನೆರಳಿನಂತೆ ಭಾಸವಾಗುತ್ತಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಸಾರ್ವಜನಿಕವಾಗಿ ಧಾರ್ಮಿಕ ಆಧಾರದ ಮೇಲೆ "ಕೊಲ್ಲಲು" ಕರೆ ನೀಡಿದ್ದರೆ, ಈ ಹೊತ್ತಿಗೆ ಆತ ಬಂಧನಕ್ಕೊಳಗಾಗುತ್ತಿದ್ದನು. ಉನ್ನತ ಹುದ್ದೆಯಲ್ಲಿರುವವರಿಗೆ ರಾಜಕೀಯ ಸ್ಥಿರತೆಯ ಹೆಸರಿನಲ್ಲಿ ರಿಯಾಯಿತಿ ನೀಡುವುದು ಪ್ರಚೋದನಾಕಾರಿ ಭಾಷಣಗಳಿಗೆ ಪರವಾನಗಿ ನೀಡಿದಂತಾಗುತ್ತದೆ. 

ಎಂಬತ್ತನಾಲ್ಕು ವರ್ಷದ ಖರ್ಗೆಯವರು ಸಂಸದೀಯ ಮೌಲ್ಯಗಳ ರಕ್ಷಕರಾಗಿರಬೇಕಿತ್ತು, ಆದರೆ ಈ ಘಟನೆಯು ರಾಜಕೀಯ ಲಾಭಕ್ಕಾಗಿ ತೀವ್ರಗಾಮಿ ಹಾದಿಯನ್ನು ತುಳಿದಿರುವುದನ್ನು ಸೂಚಿಸುತ್ತದೆ. ರಾಷ್ಟ್ರೀಯ ಭದ್ರತೆ ಮತ್ತು ಸಾಮಾಜಿಕ ಸಾಮರಸ್ಯದ ದೃಷ್ಟಿಯಿಂದ, ಇಂತಹ ಭಾಷಣಗಳನ್ನು ಕೇವಲ ಆಡಳಿತಾತ್ಮಕ ವಿಚಾರಣೆಯಿಂದ ಎದುರಿಸಬಾರದು; ರಾಜಕೀಯ ಎದುರಾಳಿಯ ಜೀವವನ್ನು ಚುನಾವಣಾ ಬಲಿಪಶುವಾಗಿ ನೋಡುವ ಇಂತಹ ಪ್ರವೃತ್ತಿಯನ್ನು ಒಕ್ಕೊರಲಿನಿಂದ ತಿರಸ್ಕರಿಸಬೇಕಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again