ಸೋಪ್ ಜಾಹೀರಾತಿಗಿಳಿದ ಸಚಿವರು

 ಬಿವಿಸೀ

ನಮ್ಮ ಸಚಿವರು ಸೋಪ್ ಜಾಹೀರಾತಿನಲ್ಲಿ ಸ್ಟಾರ್ ಜತೆ ಭುಜ ಹೊಸೆದಿರುವುದು ಹೊಸ ವಿದ್ಯಮಾನ. ಸ್ವಪ್ರಚಾರ ಇಲ್ಲಿಯವರೆಗೆ ಬಂದು ನಿಂತಿದೆ! ಮೈಸೂರು ಸ್ಯಾಂಡಲ್ ಸೋಪ್‍ನ ಮುಖಪುಟದ ಜಾಹೀರಾತಿನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರ ಭಾವಚಿತ್ರ ಇರುವುದು ನೋಡಿದರೆ ಯಾರಿಗಾದರೂ ಅಚ್ಚರಿಯಾಗದೇ ಇರದು.

ಒಂದು ವಿಧವಾಗಿ ಯಾವುದೇ ಸಂದರ್ಭದಲ್ಲಾದರೂ ಇದು ಪ್ರಶ್ನಾರ್ಹವೇ ಆಗುತ್ತದೆ. ಪ್ರಸ್ತುತ ಸನ್ನಿವೇಶಗಳಲ್ಲಿ ಇದು ಅಸಮರ್ಥನೀಯ ಕೂಡ. ಮೈಸೂರು ಸ್ಯಾಂಡಲ್ ಸರ್ಕಾರಿ ಒಡೆತನದ ಒಂದು ವಾಣಿಜ್ಯ ಉತ್ಪನ್ನವೇ ಹೊರತು ಸರ್ಕಾರದ ಕಲ್ಯಾಣ ಯೋಜನೆಯಲ್ಲ ಅಥವಾ ಅಧಿಕೃತ ವಿವರಣೆ ಅಪೇಕ್ಷಿಸುವ ಸಾರ್ವಜನಿಕ ಸೇವೆಯೂ ಅಲ್ಲ.  ಮಾರಾಟವನ್ನು ಹೆಚ್ಚಿಸುವುದೇ ಉದ್ದೇಶವಾಗಿದ್ದಲ್ಲಿ, ಜಾಹೀರಾತಿನ ಹಿಂದಿನ ತರ್ಕವನ್ನು ನೇರವಾಗಿ ಹೀಗೆ ಹೇಳಬಹುದು.  ಉತ್ಪನ್ನ ಮತ್ತು ಬ್ರಾಂಡ್ ಪರಂಪರೆ ಹಾಗೂ ನಿಯೋಜಿಸಲ್ಪಡುವ ಸೆಲೆಬ್ರಿಟಿ ಉತ್ಪನ್ನದ ರಾಯಭಾರಿಗಳಾಗುತ್ತಾರೆ. ಅಷ್ಟೇ ಸಾಕಾಗಿತ್ತು. ಆದರೆ ಜಾಹೀರಾತಿನಲ್ಲಿ ಸಚಿವರನ್ನು ಒಳಗೊಳ್ಳುವುದರಿಂದ ವಾಣಿಜ್ಯ ಮೌಲ್ಯವೇನೂ ಹೆಚ್ಚಾಗುವುದಿಲ್ಲ. ಬದಲಾಗಿ ಉತ್ಪನ್ನದ ಉತ್ತೇಜನವನ್ನು ರಾಜಕೀಯ ಅಸ್ತಿತ್ವದ ಪ್ರದರ್ಶನವನ್ನಾಗಿ ಮಾಡುತ್ತದೆ. ಇದಕ್ಕಾಗಿ ತೆರಿಗೆದಾರರ ಹಣವನ್ನು ಬಳಸಲಾಗುತ್ತದೆ.

ಈ ಜಾಹೀರಾತು ಪ್ರಕಟವಾಗಿರುವ ಸಮಯವೂ ಸಹ ವಿಷಯವನ್ನು ಜಟಿಲಗೊಳಿಸುತ್ತದೆ. ಸರ್ಕಾರದ ಸೋಪ್ ಕಾರ್ಖಾನೆ ಈಗಾಗಲೇ ಹಣಕಾಸು ದುರುಪಯೋಗದ ಆರೋಪಗಳನ್ನು ಎದುರಿಸುತ್ತಿದ್ದು, ಅತಿಯಾದ ರಾಜಕೀಯ ಹಸ್ತಕ್ಷೇಪದ ಆರೋಪಗಳನ್ನೂ ಎದುರಿಸುತ್ತಿದೆ. ವಿರೋಧ ಪಕ್ಷಗಳು, ರಾಜ್ಯ ಸರ್ಕಾರ ಕಾರ್ಖಾನೆಯ ವೃತ್ತಿಪರ ಸ್ವಾಯತ್ತತೆಯನ್ನು ಕಾಪಾಡದೆ ರಾಜಕೀಯ ನಿಯಂತ್ರಣ ಹೇರುತ್ತಿರುವುದಾಗಿ ಆರೋಪಿಸುತ್ತಿವೆ. ಈ ಹಿನ್ನೆಲೆಯಲ್ಲಿ ಹಣ ಪಾವತಿ ಮಾಡಿ ಜಾಹೀರಾತು ಉತ್ಪನ್ನದ ಜೊತೆ ಸಚಿವರನ್ನೂ ಬಿಂಬಿಸುವುದು ಈ ಆರೋಪವನ್ನು ಪುಷ್ಟೀಕರಿಸುತ್ತದೆ. ಸರ್ಕಾರವು ತಾನಾಗಿಯೇ ವಿರೋಧಿಗಳಿಗೆ ಸಾಕ್ಷಿಯನ್ನು ಒದಗಿಸಿದ್ದು, ತನ್ನ ಹಸ್ತಕ್ಷೇಪದ ಆರೋಪಗಳನ್ನು ಒಪ್ಪಿಕೊಂಡಂತಾಗಿದೆ.

ಇಂತಹ ಸಂದರ್ಭಗಳಲ್ಲಿ ತೀರ್ಮಾನಗಳ ಸ್ಪಷ್ಟತೆ ಮುಖ್ಯ. ಅದರಲ್ಲೂ ಕೈಗಾರಿಕಾ ಸಚಿವರು ಸಾರ್ವಜನಿಕ ಉದ್ದಿಮೆಯ ನಿರ್ವಹಣಾ ನಿಯಂತ್ರಣವನ್ನು ಹೊಂದಿರುವುದರಿಂದ ಇದು ಮುಖ್ಯ. ಇಲ್ಲಿ ಉದ್ಭವಿಸುವ ಮೂಲಭೂತ ಪ್ರಶ್ನೆ ಎಂದರೆ, ಸಚಿವರನ್ನು ಪ್ರದರ್ಶಿಸುವುದರಿಂದ ಕಾರ್ಖಾನೆಗೆ ನೆರವಾಗುವುದೇ ಅಥವಾ ಸಚಿವರಿಗೆ ಸಹಾಯ ಮಾಡುವುದೇ? ಉತ್ತರ ಸ್ಪಷ್ಟವಾಗಿದೆ.

ಸಾರ್ವಜನಿಕರು ಈಗಲೂ ಗುರುತಿಸುವಂತಹ ವ್ಯತ್ಯಾಸಗಳಿವೆ. ಪಾವತಿ ಮಾಡಿದ ಜಾಹೀರಾತು ಕಲ್ಯಾಣ ಯೋಜನೆಗಳದ್ದಾದರೆ, ಅದು ಚರ್ಚಾಸ್ಪದವಾದರೂ ಸಹ, ಏನೋ ಸಹಿಸಿಕೊಳ್ಳಬಹುದು. ಏಕೆಂದರೆ ಅದು ಭಾವನೆಗಳನ್ನು ಜನರಿಗೆ ತಲುಪಿಸುತ್ತದೆ. ಒಂದು ಲಕ್ಸುರಿ ಸೋಪ್ ಬ್ರಾಂಡ್ ಇದನ್ನು ಸಾಧಿಸುವುದಿಲ್ಲ. ಸುದ್ದಿಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗುವ  ಒಂದು ಸೋಪ್ ಜಾಹೀರಾತಿನಲ್ಲಿ  ಸಚಿವರ ನಗುಮುಖ ನಾಗರಿಕರ ಜೀವನವನ್ನು ಹಸನುಗೊಳಿಸುವುದಿಲ್ಲ.

ಸಾರ್ವಜನಿಕರ ಹಣ ವೈಯುಕ್ತಿಕ ಪ್ರದರ್ಶನಕ್ಕಾಗಿ ಇರುವುದಲ್ಲ. ಈ ರೀತಿಯ ಅತಿರೇಕಗಳು ವಿರೋಧಿಗಳ ಕೈಗೆ ಪ್ರಬಲ ಅಸ್ತ್ರವನ್ನು ನೀಡುವುದೇ ಅಲ್ಲದೆ, ಆಡಳಿತದ ವಿಶ್ವಾಸಾರ್ಹತೆಗೂ ಧಕ್ಕೆ ಉಂಟುಮಾಡುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again