ಗೋವನ್ನೂ ರಕ್ಷಿಸಿ, ಗೋಮಾಂಸ ರಫ್ತು ನಿಲ್ಲಿಸಬೇಡಿ!
ಗೋಮಾಂಸ ಸೇವನೆ ಏಕೆ ಪಾಪ, ರಫ್ತು ಮಾಡಲು ಲಾಭದಾಯಕ ಎನ್ನುವುದನ್ನು ಬಿಜೆಪಿ ಪ್ರಾಮಾಣಿಕವಾಗಿ ಉತ್ತರಿಸಲಿ.
........
ಬಿವಿಸೀ
ಕೇಂದ್ರದಲ್ಲಿ ಮತ್ತು ಹಲವು ರಾಜ್ಯಗಳಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರಗಳು ಗೋ ರಕ್ಷಣೆಯನ್ನು ನಿರ್ಣಾಯಕ ರಾಜಕೀಯ ಧ್ಯೇಯವನ್ನಾಗಿ ಪರಿಗಣಿಸಿದ್ದು ಈ ನಿಟ್ಟಿನಲ್ಲಿ ಕಠಿಣ ಕಾನೂನುಗಳನ್ನು ರೂಪಿಸಿದೆ. ನೈತಿಕ ಉಪದೇಶಗಳನ್ನು ನೀಡುತ್ತಿದೆ, ತಳಮಟ್ಟದಲ್ಲಿ ರಸ್ತೆಗಳಲ್ಲೇ ಗೋರಕ್ಷಕ ಪಡೆಗಳು ಸಕ್ರಿಯವಾಗಿವೆ. ಆದರೆ ಈ ಘೋಷಣೆಗಳೊಂದಿಗೇ ಆರ್ಥಿಕವಾಗಿ ಒಂದು ಕಟು ಸತ್ಯವನ್ನೂ ಗುರುತಿಸಬಹುದು. ಭಾರತ ಗೋಮಾಂಸ ರಫ್ತು ಮಾಡುವ ಪ್ರಮುಖ ದೇಶವಾಗಿದ್ದು, ವರ್ಷದಿಂದ ವರ್ಷಕ್ಕೆ ಬಿಜೆಪಿ ಆಳ್ವಿಕೆಯಲ್ಲೇ ಗೋಮಾಂಸದ ರಫ್ತು ಪ್ರಮಾಣ ಹೆಚ್ಚಾಗುತ್ತಿದೆ.
ವಿಷ್ಲೇಶಕರು ಮತ್ತು ಟೀಕಾಕಾರರು ಈ ವೈರುಧ್ಯವನ್ನು ಉಲ್ಲೇಖಿಸುತ್ತಲೇ ಬಂದಿದ್ದಾರೆ. ಇಲ್ಲಿ ಮುಖ್ಯವಾಗಿ ಕಾಣುವುದು ಆರೋಪ ಮಾತ್ರವಲ್ಲ, ಆಡಳಿತಾರೂಢ ವಲಯದಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲು ಸಾಧ್ಯವಾಗದಿರುವುದು ಮಹತ್ವದ ಪ್ರಶ್ನೆಯಾಗುತ್ತದೆ. ಇತ್ತೀಚೆಗೆ ಈ ಕುರಿತು ದನಿ ಎತ್ತುತ್ತಿರುವುದು ಅವಿಮುಕೇಶ್ವರಾನಂದ ಸರಸ್ವತಿ. ಜ್ಯೋತಿರ್ಮಠದ ಸ್ವಘೋಷಿತ ಹಾಗೂ ವಿವಾದಾಸ್ಪದ ಸ್ವಾಮಿಯಾಗಿರುವ ಅವಿಮುಕ್ತೇಶ್ವರಾನಂದ ಅವರು ಉದಾರಾವಾದಿ ನೆಲೆಯ ವಿಶ್ಲೇಷಕರೂ ಅಲ್ಲ, ಸೆಕ್ಯುಲರ್ ರಾಜಕಾರಣಕ್ಕೆ ನಿಕಟವಾದವರೂ ಅಲ್ಲ. ಈ ಕಾರಣಕ್ಕಾಗಿಯೇ ಅವರ ಪ್ರವೇಶ ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡುತ್ತಿದೆ. ಹಿಂದೂ ಧಾರ್ಮಿಕ ವಲಯದಿಂದಲೇ ಒಬ್ಬ ವ್ಯಕ್ತಿ ಗೋ ರಕ್ಷಣೆಯನ್ನೇ ಪ್ರಧಾನ ಧ್ಯೇಯವಾಗಿರಿಸಿಕೊಂಡಿರುವ ಬಿಜೆಪಿ ಸರ್ಕಾರದಲ್ಲಿ ಗೋಮಾಂಸ ರಫ್ತು ಹೆಚ್ಚಾಗುತ್ತಿರುವುದರ ಬಗ್ಗೆ ಪ್ರಶ್ನೆ ಎತ್ತಿರುವುದು ಮಹತ್ವದ್ದಾಗಿದೆ.
ಈ ಪ್ರತಿರೋಧದ ದನಿ ಎತ್ತಿರುವವರ ಪೈಕಿ ಇವರು ಮೊದಲಿಗರಲ್ಲ. ಸ್ವಾಮಿ ಅಗ್ನಿವೇಶ್ ಪದೇ ಪದೇ ಇದನ್ನು ಪ್ರಸ್ತಾಪಿಸಿದ್ದು, ದೇಶದಲ್ಲಿ ಗೋಮಾಂಸ ಸೇವನೆಯನ್ನು ನಿಷೇಧಿಸಿ, ಗೋಮಾಂಸವನ್ನು ರಪ್ತು ಮಾಡಿರುವುದರ ಬಗ್ಗೆ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ಶಶಿತರೂರ್ ಮತ್ತು ಜೈರಾಮ್ ರಮೇಶ್ ರಫ್ತು ಪ್ರಮಾಣದ ಅಂಕಿಅಂಶಗಳನ್ನು ಮುಂದಿಟ್ಟು, ಸಂಸತ್ತಿನ ಚರ್ಚೆಗಳಲ್ಲೂ ಸಹ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ನಾಗರಿಕ ಹಕ್ಕು ಕಾರ್ಯಕರ್ತರು ಗೋ ರಕ್ಷಕರ ಹಿಂಸಾತ್ಮಕ ಚಟುವಟಿಕೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಾದ ಮತ್ತೊಮ್ಮೆ ಮುನ್ನಲೆಗೆ ಬಂದಿರುವುದೇ, ವಿಷಯ ಪರಿಹಾರವಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆ.
ಕೇಸರಿ ಪಡೆಯಿಂದ ಬಂದಿರುವ ಪ್ರತಿಕ್ರಿಯೆಯನ್ನು ಗಮನಿಸಿದರೆ, ಮೌನವೇ ಕಂಡುಬರುತ್ತದೆ. ನಿರಂತರವಾದ ನಿರಾಕರಣೆಯಾಗಲೀ, ಸೈದ್ಧಾಂತಿಕ ವಿವರಣೆಯಾಗಲೀ ಕಂಡುಬರುತ್ತಿಲ್ಲ. ವಾಣಿಜ್ಯ ವಲಯದ ವರ್ಗೀಕರಣದ ಬಗ್ಗೆಯೂ ಮಾಹಿತಿ ನೀಡಲಾಗಿಲ್ಲ. ಈ ಮೌನವೇ ಸಮಸ್ಯೆಯ ಆಳವನ್ನು ಸೂಚಿಸುತ್ತದೆ. ಪ್ರಾಮಾಣಿಕವಾಗಿ ಸಮರ್ಥಿಸಿದರೆ ಮೂಲ ಸತ್ಯವೂ ಹೊರಬರುತ್ತದೆ. ಗೋ ರಕ್ಷಣೆಯನ್ನು ತಳಮಟ್ಟದವರೆಗೂ ಜಾರಿಗೊಳಿಸಲಾಗುತ್ತದೆ. ಬೆದರಿಕೆ ಒಡ್ಡಿ ಭೀತಿ ಸೃಷ್ಟಿಸಲಾಗುತ್ತದೆ. ಗೋಮಾಂಸ ರಫ್ತು ಮಾಡುವುದನ್ನು ಮೇಲ್ಮಟ್ಟದಲ್ಲಿ ಸಮರ್ಥಿಸಲು ಆದಾಯ ಮತ್ತು ವಿದೇಶಿ ವಿನಿಯಮವನ್ನು ಕಾರಣವನ್ನಾಗಿ ನೀಡಲಾಗುವುದಾದರೂ ಇದು ಸತ್ಯವಲ್ಲ.
ಇದು ಪರಂಪರೆಯ ವೈರುಧ್ಯವಲ್ಲ. ಉದ್ದೇಶಪೂರ್ವಕ ಆಯ್ಕೆಯಾಗಿದೆ. ಗೋಮಾಂಸ ಸೇವನೆ ಏಕೆ ಪಾಪ ಮಾಡಿದಂತಾಗುತ್ತದೆ, ಆದರೆ ರಫ್ತು ಮಾಡಲು ಲಾಭದಾಯಕವಾಗುತ್ತದೆ ಎನ್ನುವುದನ್ನು ಬಿಜೆಪಿ ಪ್ರಾಮಾಣಿಕವಾಗಿ ಉತ್ತರಿಸುವವರೆಗೂ ಈ ಆರೋಪ ಇದ್ದೇ ಇರುತ್ತದೆ.
Comments
Post a Comment