ಭ್ರಷ್ಟಾಚಾರ ಕರ್ನಾಟಕವನ್ನು ಆಳುತ್ತಿದೆ
ಪ್ರಚಲಿತ * ಬಿವಿಸೀ
ಕರ್ನಾಟಕದಲ್ಲಿ ಭ್ರಷ್ಟಾಚಾರವು ಈಗ ಅಡಗಿರುವ ಕಾಯಿಲೆಯಾಗಿ ಉಳಿದಿಲ್ಲ; ಬದಲಾಗಿ ಅದು ಆಡಳಿತದ ಮೂಲ ವ್ಯವಸ್ಥೆಯಾಗಿಯೇ (ಆಪರೇಟಿಂಗ್ ಸಿಸ್ಟಮ್) ಮಾರ್ಪಟ್ಟಿದೆ. ಲೋಕಾಯುಕ್ತದಂತಹ ಸಂಸ್ಥೆಗಳು, ದಾಳಿಗಳು, ಆಸ್ತಿ ಮುಟ್ಟುಗೋಲು ಮತ್ತು ದೊಡ್ಡ ಮಟ್ಟದ ಘೋಷಣೆಗಳ ಹೊರತಾಗಿಯೂ, ಭ್ರಷ್ಟಾಚಾರವು ರಾಜ್ಯದ ಅತ್ಯಂತ ನಂಬಿಕಸ್ತ ವ್ಯವಹಾರವಾಗಿ ಬೆಳೆಯುತ್ತಲೇ ಇದೆ. ಪ್ರಜಾಪ್ರಭುತ್ವವನ್ನು ಬೆಚ್ಚಿಬೀಳಿಸಬೇಕಾದ ಇಂತಹ ವಿಚಾರಗಳು ಇಂದು ಅತಿ ಸಾಮಾನ್ಯ ಸಂಗತಿಗಳಾಗಿವೆ. ನಾಗರಿಕ ಸೇವಾ ಅಧಿಕಾರಿಗಳು ತಮ್ಮ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದು ಈಗ ಜನರಲ್ಲಿ ಆಕ್ರೋಶ ಮೂಡಿಸುತ್ತಿಲ್ಲ; ಬದಲಾಗಿ ಸಾರ್ವಜನಿಕರ ಹತಾಶೆ ಮತ್ತು ಅವಿಶ್ವಾಸವನ್ನು ಮತ್ತಷ್ಟು ದೃಢಪಡಿಸುತ್ತಿವೆ.
ಇದು ಕೇವಲ ಮೇಲ್ಪದರದ ಸಣ್ಣ ಭ್ರಷ್ಟಾಚಾರವಲ್ಲ. ಇದು ಕೆಳಗಿನಿಂದ ಮೇಲಿನ ಹಂತದವರೆಗೂ ವ್ಯಾಪಿಸಿರುವ ಒಂದು ವ್ಯವಸ್ಥಿತ ಉದ್ಯಮ. ಹಳ್ಳಿ ಕಚೇರಿಗಳಿಂದ ಸಚಿವಾಲಯದವರೆಗೆ, ಗುಮಾಸ್ತರಿಂದ ಹಿಡಿದು ಮಂತ್ರಿಗಳವರೆಗೆ, ಲಂಚವನ್ನು ಅಧಿಕೃತ ಹಕ್ಕಿನಂತೆ ಕೇಳಲಾಗುತ್ತದೆ. ನಾಗರಿಕರು ತಮ್ಮ ಕಾನೂನುಬದ್ಧ ಸೇವೆಗಳಿಗಾಗಿಯೂ ಹಣ ನೀಡಬೇಕಾದ ಅನಿವಾರ್ಯತೆ ಇದೆ. ಹಣ ಕೊಡದಿದ್ದರೆ ಕಡತಗಳು ಮುಂದೆ ಸಾಗುವುದಿಲ್ಲ. ಪರವಾನಗಿಗಳು, ಬಿಲ್ಗಳು, ಪ್ರಮಾಣಪತ್ರಗಳು ಮತ್ತು ಅನುಮತಿಗಳಿಗೆ ಮುಕ್ತವಾಗಿ ಬೆಲೆ ನಿಗದಿಪಡಿಸಲಾಗಿದೆ. ಯಾವುದೇ ಲಜ್ಜೆ ಇಲ್ಲದೆ, ಇದೊಂದು ಹಕ್ಕು ಎನ್ನುವಂತೆ ಭ್ರಷ್ಟಾಚಾರ ನಡೆಯುತ್ತಿದೆ.
ಇದಕ್ಕೆ ನೀಡಲಾಗುವ ಸಮರ್ಥನೆಗಳು ಕೂಡ ಅಷ್ಟೇ ಉದ್ಧಟತನದಿಂದ ಕೂಡಿವೆ. ವೇತನ ವಿಳಂಬವಾಗುತ್ತಿದೆ, ಹಾಗಾಗಿ ಲಂಚ ಪಡೆಯುವುದು ಅನಿವಾರ್ಯ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಾರೆ. ಇದು ಸತ್ಯವಿರಲಿ ಅಥವಾ ಉತ್ಪ್ರೇಕ್ಷೆಯಿರಲಿ, ಆಡಳಿತಾತ್ಮಕ ವೈಫಲ್ಯವು ಕ್ರಿಮಿನಲ್ ನಡವಳಿಕೆಗೆ ನೈತಿಕ ನೆಪವಾಗಲಾರದು. ಪಾವತಿಯಾಗದ ಸಂಬಳವು ಸುಲಿಗೆಯನ್ನು ಸಮರ್ಥಿಸುವುದಾದರೆ, ಆಡಳಿತವು ಸಂಘಟಿತ ದರೋಡೆಯಾಗುತ್ತದೆ. ಈ ವಿಚಾರದ ಬಗ್ಗೆ ಮೌನವಾಗಿರುವುದು ಆತಂಕಕಾರಿ ಸಂಗತಿ - ಏಕೆಂದರೆ ಇದರ ಆಳವಾದ ತನಿಖೆಯು ಉನ್ನತ ರಾಜಕೀಯ ಶಕ್ತಿಗಳ ಹತ್ತಿರಕ್ಕೆ ಕರೆದೊಯ್ಯುತ್ತದೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಈ ವ್ಯವಸ್ಥೆಯ ಕ್ರೂರ ಮುಖಕ್ಕೆ ಕನ್ನಡಿ ಹಿಡಿದಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರವನ್ನು ಅದು ಬಯಲಿಗೆಳೆದದ್ದು ಆ ಸರ್ಕಾರದ ಪತನಕ್ಕೆ ಪ್ರಮುಖ ಕಾರಣವಾಗಿತ್ತು. ಇಂದು ಅದೇ ಸಂಘವು ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರವು ಇನ್ನೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎಂದು ಆರೋಪಿಸುತ್ತಿದೆ. ಭ್ರಷ್ಟಾಚಾರ ವಿರೋಧಿ ಅಲೆಯ ಲಾಭ ಪಡೆದು ಅಧಿಕಾರಕ್ಕೆ ಬಂದ ಪಕ್ಷವು, ಇಂದು ಅದೇ ಜನರ ನ್ಯಾಯಾಲಯದಲ್ಲಿ ಆರೋಪಿಯಾಗಿ ನಿಂತಿರುವುದು ವಿಪರ್ಯಾಸದ ಸಂಗತಿ.
ಭ್ರಷ್ಟಾಚಾರವು ಕೇವಲ ಸಾರ್ವಜನಿಕ ಹಣವನ್ನು ಪೆÇೀಲು ಮಾಡುವುದಿಲ್ಲ. ಇದು ಸಾಂಸ್ಥಿಕ ವಿಶ್ವಾಸಾರ್ಹತೆಯನ್ನು ನಾಶಪಡಿಸುತ್ತದೆ, ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತದೆ ಮತ್ತು ಪ್ರಾಮಾಣಿಕತೆ ಎಂಬುದು ಮೂರ್ಖತನ, ನಿಯಮಗಳನ್ನು ಹಣದಿಂದ ಬದಲಿಸಬಹುದು ಎಂಬ ಪಾಠವನ್ನು ನಾಗರಿಕರಿಗೆ ಕಲಿಸುತ್ತದೆ. ಭ್ರಷ್ಟಾಚಾರವೇ ಸಹಜ ಎಂಬಂತಾದಾಗ, ಚುನಾವಣೆಗಳು ಕೇವಲ ಒಂದು ಆಚರಣೆಯಾಗುತ್ತವೆ ಮತ್ತು ಆಡಳಿತವು ಒಂದು ಮಾರುಕಟ್ಟೆಯಾಗುತ್ತದೆ.
ಈ ಅವನತಿಯನ್ನು ತಡೆಯುವವರು ಯಾರು? ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಲಾಭ ಪಡೆಯುತ್ತವೆ ಮತ್ತು ವಿರೋಧ ಪಕ್ಷದಲ್ಲಿದ್ದಾಗ ಉಪದೇಶ ನೀಡುತ್ತವೆ. ಸಂಸ್ಥೆಗಳು ಇಕ್ಕಟ್ಟಿನಲ್ಲಿವೆ. ಹೊಣೆಗಾರಿಕೆಯು ಆಯ್ದ ಜನರಿಗೆ ಮಾತ್ರ ಸೀಮಿತವಾಗಿದೆ. ಇಂತಹ ಸಂದರ್ಭದಲ್ಲಿ, ನಿರಂತರವಾದ ಸಾರ್ವಜನಿಕ ಒತ್ತಡವು ಮಾತ್ರ ಇದಕ್ಕೆ ಉಳಿದಿರುವ ಏಕೈಕ ಮದ್ದಾಗಿದೆ - ಇದು ಅಪೂರ್ಣವಾಗಿರಬಹುದು ಅಥವಾ ದಣಿವಿನ ಹಾದಿಯಾಗಿರಬಹುದು, ಆದರೆ ಅನಿವಾರ್ಯವಾಗಿದೆ.
Comments
Post a Comment