ಇಂದೇ ಚುನಾವಣೆ ನಡೆದರೆ ಕಾಂಗ್ರೆಸ್ಸಿಗೆ ಸೋಲು ಕಟ್ಟಿಟ್ಟ ಬುತ್ತಿ

 ಒಡೆದ ನಾಯಕತ್ವದ ಕಾಂಗ್ರೆಸ್‍ಗೆ ಚುನಾವಣೆಯನ್ನು ಎದುರಿಸಲು ಶಕ್ತಿಯಿಲ್ಲ.

sಸಿವೋಟರ್ ಜನಾಭಿಪ್ರಾಯ ಅಂಕಿ-ಅಂಶಗಳನ್ನು ಕರ್ನಾಟಕದ ಮತದಾನ ಮತ್ತು ರಾಜಕೀಯ ನಡವಳಿಕೆಯ ಬೆಳಕಿನಲ್ಲಿ ಪರಿಶೀಲಿಸಿದಾಗ, ಇಂದೇ ವಿಧಾನಸಭೆ ಚುನಾವಣೆ ನಡೆದರೆ ಕಾಂಗ್ರೆಸ್‍ಗೆ ಗಂಭೀರ ಹಿನ್ನಡೆ ಅನಿವಾರ್ಯವೆಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ವಿರೋಧಪಕ್ಷಗಳು ಅಚಾನಕ್ ಬಲಿಷ್ಠರಾದುದೇ ಕಾರಣವಲ್ಲ; ಕಾಂಗ್ರೆಸ್ ಆಡಳಿತ ಸ್ವತಃ ದುರ್ಬಲಗೊಂಡಿದೆ, ವಿಭಜನಕಾರಿ ಸಂದೇಶ ರವಾನಿಸುತ್ತಿದೆ, ತನ್ನ ನಂಬಿಕೆಗೆ ತಾನೇ ಧಕ್ಕೆ ತಂದುಕೊಂಡಿದೆ.

2023ರಲ್ಲಿ ಕಾಂಗ್ರೆಸ್ ಭಾರೀ ಜನಾದೇಶದೊಂದಿಗೆ ಅಧಿಕಾರಕ್ಕೆ ಬಂದಿತು. ಆದರೆ ಜನರಿಂದ ಬಂದ ಆದೇಶವನ್ನು ಆಡಳಿತ ಪಕ್ಷವು ಶೀಘ್ರವೇ ದುರ್ಬಲಗೊಳಿಸಿತು. ಸರ್ಕಾರ ಜನರ ನಿರೀಕ್ಷೆಗಳಿಂದ ದೂರವಾಗುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡಿದ್ದೇ ಇದಕ್ಕೆ ಕಾರಣ. ಕಾಂಗ್ರೆಸ್ ಅನ್ನು ಇಂದಿನ ರಾಜಕೀಯ ಪತನದ ಕಡೆಗೆ ಎಳೆದ ಕಾರಣಗಳು ತಾತ್ವಿಕ ಭೇದಗಳಲ್ಲ, ಅವು ಆಡಳಿತ ವೈಫಲ್ಯಗಳು ಮತ್ತು ವೈಯಕ್ತಿಕ ಪೈಪೆÇೀಟಿಗಳು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪರಸ್ಪರ ತಿಕ್ಕಾಟ ನಡೆಸಿ, ಖ್ಯಾತಿ ಪಡೆಯಲು ಹೊಡೆದಾಡಿ, ಒಬ್ಬರನ್ನೊಬ್ಬರು ದುರ್ಬಲಗೊಳಿಸುವ ದೃಶ್ಯ ಮತದಾರರ ಮುಂದೆ ಬರುವಾಗ, ಆಡಳಿತವು ಕಲ್ಯಾಣ ಯೋಜನೆಗಳ ಪಟ್ಟಿಯನ್ನು ಮೀರಿದ ಸಾಧನೆ ಮಾಡಬಹುದೇ ಎನ್ನುವ ಪ್ರಶ್ನೆ ತಂತಾನೇ ಹುಟ್ಟಿಕೊಳ್ಳುತ್ತದೆ.

ಇಂದೇ ಚುನಾವಣೆ ನಡೆದರೆ, ಕಾಂಗ್ರೆಸ್ ಗೆಲುವಿಗೆ ನೆರವಾದ ಹಿಂದುಳಿದ ವರ್ಗಗಳ ಪ್ರಮುಖ ನೆಲೆ ದೂರವಾಗುವ ಸಾಧ್ಯತೆ ಕಾಣುತ್ತದೆ. ದಲಿತರು, ರೈತರು, ಸಣ್ಣ ವ್ಯಾಪಾರಿಗಳು ಆಡಳಿತವು ಮೂಲ ಸೇವೆಗಳು ಮತ್ತು ಆರ್ಥಿಕ ನೆರವನ್ನು ನಿರ್ಲಕ್ಷಿಸಿದೆ ಎಂಬ ಅಸಮಾಧಾನದಿಂದ - ಕಾಂಗ್ರೆಸ್ಸಿನಿಂದ ನಿಧಾನವಾಗಿ ದೂರ ಸರಿದಿವೆ. ಮುಸ್ಲಿಮರ ದೊಡ್ಡ ಮತಬಲ ಮತ್ತು ಕೆಲವು ಅಹಿಂದ ಮತಗಳು ಕಾಂಗ್ರೆಸ್‍ಗೆ ಇದ್ದರೂ, ಅದೆಷ್ಟಿದ್ದರೂ ಸರ್ಕಾರ ರಚಿಸಲು ಅದು ಸಾಕಾಗುವುದಿಲ್ಲ.

ರಾಜ್ಯದಲ್ಲಿ ಕೇಸರಿ ಪಡೆಗೆ ವಿಶ್ವಾಸಾರ್ಹ ಮತ್ತು ಜನಪ್ರಿಯ ಮುಖಂಡರ ಕೊರತೆ ಇದ್ದರೂ, ಬಿಜೆಪಿ ಕಾಂಗ್ರೆಸ್ ಆಡಳಿತದ ಪ್ರತಿಕೂಲ ವಾತಾವರಣದ ನೇರ ಲಾಭವನ್ನು ಪಡೆಯುತ್ತದೆ. ಆಡಳಿತದ ಮೇಲೆ ಕೋಪಗೊಂಡ ಮತದಾರರು, ಮುಖ್ಯ ಪ್ರತಿಪಕ್ಷದತ್ತ ತಿರುಗುತ್ತಾರೆ. 2023ರಲ್ಲಿ ಬಿಜೆಪಿ ಎದುರಿಸಿದ ಸ್ಥಿತಿಯನ್ನೇ ಈಗ ಕಾಂಗ್ರೆಸ್ ಎದುರಿಸಬಹುದು -  ಇದು ಪ್ರತಿಪಕ್ಷದ ಶಕ್ತಿಯ ಮೇಲೆ ಅಲ್ಲ, ಆಡಳಿತದ ವೈಫಲ್ಯಗಳ ಮೇಲೆ ಜನರ ತೀರ್ಪಾಗುತ್ತದೆ.

ಹಳೆಯ ಮೈಸೂರು ಪ್ರದೇಶದಲ್ಲಿ  ಜೆಡಿಎಸ್ ಮತ್ತೆ ನೆಲೆ ಮರಳಿ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ ಒಳ ಕಲಹಗಳು ಒಕ್ಕಲಿಗ ಮತದಾರರಲ್ಲಿ ಅಸಮಾಧಾನ ಉಂಟುಮಾಡಿರುವಾಗ, ಆ ಪಕ್ಷದ ಅಲ್ಪ ಮಟ್ಟಿನ ಪುನರುದಯವೂ ಕಾಂಗ್ರೆಸ್‍ಗೆ ಹಾನಿಯಾಗುವುದು ಖಚಿತ.

ಜನಮನದ ದಿಕ್ಕನ್ನು ಗಮನಿಸಿದರೆ, ಚಿತ್ರ ಹೀಗೆ ಮೂಡುತ್ತದೆ: ಕಾಂಗ್ರೆಸ್ ತನ್ನ ಬಹುಮತ ಕಳೆದುಕೊಳ್ಳುವುದು; ಬಿಜೆಪಿ ದೊಡ್ಡ ಏರಿಕೆ ಸಾಧಿಸುವುದು;  ಜೆಡಿಎಸ್ ಮತ್ತೆ ನಿರ್ಧಾರಕಾರಿ ಪಾತ್ರ ವಹಿಸುವುದು. ಅತಂತ್ರ ವಿಧಾನಸಭೆಯ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಮುಖ್ಯ ಪಾಠ ಏನೆಂದರೆ - ಒಡೆದ ನಾಯಕತ್ವದ ಕಾಂಗ್ರೆಸ್‍ಗೆ ಚುನಾವಣೆಯನ್ನು ಎದುರಿಸಲು ಶಕ್ತಿಯಿಲ್ಲ. ಜನಾಭಿಪ್ರಾಯ ಸಮೀಕ್ಷೆ ತೋರಿಸುವ ಸತ್ಯವೇನೆಂದರೆ `ಒಡೆದ ಮನೆಗಳು ಗೆಲುವಿನ ಬಾಗಿಲಿನತ್ತ ಸಾಗುವುದಿಲ್ಲ.'

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again