ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹೊರೆಯಾಗಿರಬಾರದು
ಬಿಳಿಮಲೆ, ತಮ್ಮ ಪದವಿಯನ್ನು ತ್ಯಜಿಸಲಿ, ಅವರಿಗೆ ಮನಸ್ವೀ ಮಾತನಾಡಲು ಅವಕಾಶ ಇರುವ ವಾತಾವರಣವನ್ನು ಸೇರಿಕೊಳ್ಳಲಿ
...............
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ವ್ಯಕ್ತಿಯು ಕಾರ್ಯನಿರ್ವಹಿಸುವ ಕಚೇರಿಯ ಹೊಣೆಗಾರಿಕೆಗಳಿಗೂ ಮತ್ತು ಅದನ್ನು ನಿರ್ವಹಿಸುವವರ ವೈಯುಕ್ತಿಕ ಭಾವನೆಗಳಿಗೂ ಎಷ್ಟು ಅಂತರವಿರಲಿಕ್ಕೆ ಸಾಧ್ಯ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಅವರು ಹೊಂದಿರುವ ಹುದ್ದೆಯಲ್ಲಿ ಆಡಳಿತಾತ್ಮಕ ಸಂಯಮ, ಸಾಂಸ್ಕøತಿಕ ಸೂಕ್ಷ್ಮತೆ ಬಹಳ ಮುಖ್ಯವಾಗಿರುತ್ತದೆ, ಹಾಗೆಯೇ ಕನ್ನಡ ಭಾಷೆಯ ಬಳಕೆಯನ್ನು ಸರ್ಕಾರದಲ್ಲಿ, ಸಾರ್ವಜನಿಕ ವಲಯದಲ್ಲಿ ಬೆಳೆಸುವ ಜವಾಬ್ದಾರಿ ಹೊಂದಿರುತ್ತದೆ. ಆದರೆ ಕರ್ನಾಟಕದ ಜನತೆ ಪಡೆದಿರುವುದು ಬಿಳಿಮಲೆಯವರ ಅಸಂಬದ್ಧ ಹೇಳಿಕೆಗಳೇ ಆಗಿದ್ದು, ಇದು ವಿವಾದದ ಸದ್ದು ಮಾಡುತ್ತದೆಯೇ ಹೊರತು ಸಂಸ್ಕøತಿಗಾಗಲೀ, ಆಡಳಿತಕ್ಕಾಗಲೀ ಮೂರು ಕಾಸಿನ ಪ್ರಯೋಜನವಾಗುವುದಿಲ್ಲ. ಈ ಅಸಂಬಂದ್ಧ ಹೇಳಿಕೆಗಳಲ್ಲಿ ಮುಖ್ಯವಾಗಿ ಕಾಣುವುದು ತಾನು ಹೇಳುವುದೆಲ್ಲ ಅಣಿಮುತ್ತುಗಳು ಎಂಬ ಅಹಮಿಕೆ
ಉದಾಹರಣೆಗೆ ಅವರ ಇತ್ತೀಚಿನ ಅವರ ಹೇಳಿಕೆ ಯಕ್ಷಗಾನ ಕಲಾವಿದರು ಸ್ವಭಾವತಃ ಸಲಿಂಗ ಕಾಮಿಗಳು ಎಂಬ ಅವರ ಅಭಿಪ್ರಾಯ ವಸ್ತುಶಃ ಅಸಂಬದ್ಧವಷ್ಟೇ ಅಲ್ಲದೆ, ಸಾಮಾಜಿಕವಾಗಿ ಹಾನಿಕಾರಕವಾದುದು. ಇದರಿಂದ ಪಾರಂಪರಿಕ ಕಲೆಯನ್ನು ಆಶ್ರಯಿಸಿದ ಕಲಾವಿದರನ್ನು ಅವಮಾನಿಸಿದಂತಾಗುವುದೇ ಅಲ್ಲದೆ, ಅವರ ಅಸ್ಮಿತೆಯನ್ನೂ ನಗಣ್ಯಗೊಳಿಸುತ್ತದೆ. ರಾಜ್ಯ ಸರ್ಕಾರವು ರಕ್ಷಿಸಬೇಕಾದ ಬಾಧ್ಯತೆ ಇರುವ ಸಮುದಾಯಗಳ ಘನತೆಯನ್ನು ಅಲ್ಲಗಳೆದಂತಾಗುತ್ತದೆ. ಬಿಳಿಮಲೆಯವರ ಅಪ್ರಚೋದಿತ ಪ್ರಚೋದಕ ಹೇಳಿಕೆ ಬಗ್ಗೆ ಸಾರ್ವಜನಿಕ ಪ್ರತಿಕ್ರಿಯೆ, ಕಲಾವಿದರಿಂದ ಸಾಂಸ್ಕøತಿಕ ಪೆÇೀಷಕರವರೆಗೂ, ಆಕ್ರೋಶಭರಿತವಾಗಿರುವುದು ಸಹಜವೇ ಆಗಿದೆ.
ಆದರೆ ಈ ವಿವಾದ ಒಂದು ಮಾದರಿಯನ್ನು ಸೂಚಿಸುತ್ತದೆ. ಅಧಿಕಾರ ವಹಿಸಿಕೊಂಡ ದಿನದಿಂದಲೂ ಬಿಳಿಮಲೆ ಅವರ ಸಾರ್ವಜನಿಕ ಚಟುವಟಿಕೆಗಳು ಕನ್ನಡ ಅಭಿವೃದ್ಧಿ ಸಂಸ್ಥೆಗಿಂತಲೂ ಹೆಚ್ಚಾಗಿ, ಸೈದ್ಧಾಂತಿಕ ಭಾಷಣಗಳು ಮತ್ತು ರಾಜಕೀಯ ವೇದಿಕೆಗಳಲ್ಲಿ ಉಪಸ್ಥಿತರಾಗಿರುವುದರ ಮೂಲಕ ಕಾಣುತ್ತಿದೆ. ಅವರ ನೇತೃತ್ವದಲ್ಲಿ ಕೆಡಿಎ ಹೇಳಿಕೊಳ್ಳುವಂತಹ ಸಾಧನೆಯನ್ನೂ ಮಾಡಿಲ್ಲ. ಯಾವುದೇ ಪ್ರಮುಖ ನೀತಿ ನಿರೂಪಣೆಗಳಲ್ಲಿ ಪಾತ್ರ ಕಾಣುವುದಿಲ್ಲ. ಕನ್ನಡ ಭಾಷೆಯನ್ನು ಅಳವಡಿಸಲು ಸರ್ಕಾರಿ ಇಲಾಖೆಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಿಲ್ಲ. ಸಾಂಸ್ಥಿಕವಾಗಿ ಯಾವ ಪ್ರಯೋಜನವೂ ಕಂಡುಬರುತ್ತಿಲ್ಲ. ಭಾಷಿಕ ನೀತಿಯ ನೇತೃತ್ವವನ್ನು ಕೇವಲ ಅವರ ವೈಯುಕ್ತಿಕ ಬೌದ್ಧಿಕ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಬಳಸುತ್ತಿದ್ದಾರೆ.
ಇದು ಒಂದು ಸರಳವಾದ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಸಾಂಸ್ಥಿಕ ಶಿಸ್ತನ್ನು ಪಾಲಿಸದೆ ಇರುವ ಒಬ್ಬ ಅಧ್ಯಕ್ಷ ಪದವಿಯಲ್ಲಿರುವ ವ್ಯಕ್ತಿಯನ್ನು, ಅವರಿಂದಾಗುತ್ತಿರುವ ಅಪಾಯದ ಹೊರತಾಗಿಯೂ ಸರ್ಕಾರ ಎಷ್ಟು ದಿನ ಸಹಿಸಿಕೊಂಡಿರಲು ಸಾಧ್ಯ?
ರಾಜ್ಯ ಸರ್ಕಾರದಿಂದ ನೇಮಿಸಲ್ಪಟ್ಟ ಬಿಳಿಮಲೆ ಇದೀಗ ಹೊಂದಿರುವ ಹುದ್ದೆ ವಿಶ್ವವಿದ್ಯಾಲಯದ ವಿಸ್ತರಣೆಯಲ್ಲ ಅಥವಾ ಮನಸ್ಸಿಗೆ ತೋಚಿದ ವಿಷಯಗಳ ವಿಶ್ಲೇಷಣೆಗಳ ವೇದಿಕೆಯೂ ಅಲ್ಲ. ಅವರು ಪದೇ ಪದೇ ಸರ್ಕಾರಕ್ಕೆ ಮುಜುಗರ ಉಂಟುಮಾಡುತ್ತಿದ್ದರೆ ಮೊದಲು ಬಲಿಯಾಗುವುದು ಸಂಸ್ಥೆಯ ವಿಶ್ವಾಸಾರ್ಹತೆ. ಕರ್ನಾಟಕಕ್ಕೆ ಕನ್ನಡದ ಕೆಲಸಗಳನ್ನು ಉತ್ತಮವಾಗಿ ಮಾಡುವ ಪ್ರಾಧಿಕಾರ ಬೇಕಿದೆಯೇ ಹೊರತು, ವಾರಕ್ಕೊಂದು ವಿನಾಕಾರಣ ವಿವಾದ ಸೃಷ್ಟಿಸುವ ಕಚೇರಿ ಅಲ್ಲ.
ಮುಂದಿನ ಹಾದಿ ಸ್ಪಷ್ಟವಾಗಿದೆ. ಬಿಳಿಮಲೆ, ತಮ್ಮ ಪದವಿಯನ್ನು ತ್ಯಜಿಸಬೇಕು, ಅವರಿಗೆ ಅವಕಾಶ ಇರುವ ವಾತಾವರಣವನ್ನು ಸೇರಿಕೊಳ್ಳಬೇಕು. ಬೌದ್ಧಿಕ ವಲಯ, ಚರ್ಚೆಗಳು, ಸಂವಾದ ಮತ್ತು ಮುಕ್ತ ಬೌದ್ಧಿಕ ವೇದಿಕೆಗಳನ್ನು ಆಯ್ಕೆ ಮಾಡಬೇಕು. ಅವರು ಹೀಗೆ ಮಾಡದೆ ಹೋದರೆ, ಸರ್ಕಾರವು ಒತ್ತಡ ಹೇರಬೇಕು. ಕಚೇರಿಯ ಘನತೆಯನ್ನು ಕಾಪಾಡುವುದು ಆಯ್ಕೆಯ ಪ್ರಶ್ನೆಯಲ್ಲ. ಅದು ಆಳ್ವಿಕೆಯ ಜವಾಬ್ದಾರಿ.
ಮುಖ್ಯಮಂತ್ರಿ ಈ ಕೂಡಲೇ ಕಾರ್ಯೋನ್ಮುಖರಾಗಬೇಕಿದೆ. ಕೆಡಿಎ ಕನ್ನಡ ಅಭಿವೃದ್ಧಿಗಿಂತಲೂ ಹೆಚ್ಚಾಗಿ ಬಿಳಿಮಲೆ ಅವರ ತಪ್ಪಿಸಬಹುದಾದ ಪ್ರಚೋದನೆಗಳಿಗೆ ಬಲಿಯಾಗುವ ಮುನ್ನ ಈ ಕ್ರಮ ಕೈಗೊಳ್ಳಬೇಕಿದೆ.
Comments
Post a Comment