ಸಂದಿಗ್ಧ ಸ್ಥಿತಿಯಲ್ಲಿ ಕರ್ನಾಟಕ ಕಾಂಗ್ರೆಸ್
ಪಕ್ಷ ತನಗೆ ಸಿಎಂ ಗದ್ದುಗೆ ಹಸ್ತಾಂತರಿಸದಿದ್ದರೆ, ಡಿಕೆಶಿ ಬಿಜೆಪಿಯೊಡನೆ ಮೈತ್ರಿ ಮಾಡಿಕೊಂಡು ಸಿಎಂ ಹುದ್ದೆ ಗಳಿಸುವ ಯೋಚನೆಯಲ್ಲಿದ್ದಾರೆ ಎಂಬ ಗುಮಾನಿಯೂ ಕೇಳಿಬರುತ್ತಿದೆ.
ವೀಕ್ಷಣೆ * ಬಿವಿಸೀ
ರಾಜ್ಯದಲ್ಲಿ ನಡೆದಿರುವ ಕಳೆದ ಹಲವು ದಿನಗಳ ಬೆಳವಣಿಗೆಗಳು, ಹೋದ ಒಂದು ವರ್ಷದಿಂದಲೂ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಸರ್ಕಾರದ ಸ್ಥಿರತೆಯನ್ನೂ ಹಾಳು ಮಾಡಿವೆ. ಆಂತರಿಕವಾಗಿ ಒಳಗೊಳಗೇ ನಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಡುವಿನ ಸಂಘರ್ಷ ಬಹಿರಂಗವಾಗಿದ್ದು, ಪಕ್ಷದ ಹೈಕಮಾಂಡ್ ಈಗ ಈ ಆಂತರಿಕ ಕಲಹವನ್ನು ಗಮನಿಸುತ್ತಿದೆ.
ಡಿ ಕೆ ಶಿವಕುಮಾರ್ ಅವರು ಹಠಾತ್ತನೆ 30 ಶಾಸಕರನ್ನು ಒಟ್ಟುಗೂಡಿಸಿರುವುದು ಮತ್ತು ದೆಹಲಿಯಲ್ಲಿ ಅವರ ಹಕ್ಕೊತ್ತಾಯದ ಉಪಸ್ಥಿತಿಯು, ಮಾತುಕತೆಗಳನ್ನೂ ಮೀರಿ, ಬಹಿರಂಗ ಹಕ್ಕು ಪ್ರತಿಪಾದನೆಯಾಗಿ ಪರಿಣಮಿಸಿದೆ. ಈಗ ಶಿವಕುಮಾರ್ ಮಧ್ಯಮಾವಧಿಯ ಅಧಿಕಾರ ಹಸ್ತಾಂತರದ ಬಗ್ಗೆ ಮಾತನಾಡುತ್ತಿಲ್ಲ, ಬದಲಾಗಿ ತಮಗೆ ನಾಯಕತ್ವದ ಸಮ್ಮಾನ ಕೊಡುವಂತೆ ಆಗ್ರಹಿಸುತ್ತಿದ್ದಾರೆ. ಸರ್ಕಾರದ ರಚನೆಯಾದಾಗ ಇದ್ದಂತಹ ಒಪ್ಪಂದದ ಅನುಸಾರ, ಸಿದ್ದರಾಮಯ್ಯ ಈ ಸಮಯದಲ್ಲಿ ಕೆಳಗಿಳಿದು ಸಿಎಂ ಹುದ್ದೆ ತಮಗೆ ಬಿಟ್ಟುಕೊಡಬೇಕು ಎಂದು ಬಲವಾಗಿ ಆಗ್ರಹಿಸಲಾರಂಭಿಸಿದ್ದಾರೆ. ಈ ರೀತಿಯ ಒಪ್ಪಂದಕ್ಕೆ ಅಧಿಕೃತವಾದ ದಾಖಲೆ ಇಲ್ಲದೆ ಇದ್ದರೂ ಸಹ ಶಿವಕುಮಾರ್ ಅವರ ಆತ್ಮವಿಶ್ವಾಸವನ್ನು ನೋಡಿದರೆ, ಅದು ರಾಜಕೀಯವಾಗಿ ಬಂಧಿಸಿತ್ತು, ಆದರೆ ಲಿಖಿತವಾಗಿ ದಾಖಲಿಸಿರಲಿಲ್ಲ ಎನ್ನುವುದು ತಿಳಿಯುತ್ತದೆ.
ಆದರೆ ಈ ನಂಬಿಕೆಯೇ ಅಧಿಕಾರ ನೀಡುವುದಿಲ್ಲ. ರಾಜಕೀಯವು ಲೆಕ್ಕಾಚಾರ ಮತ್ತು ಸಾಧ್ಯಾಸಾಧ್ಯತೆಗಳ ಮೇಲೆ ನಡೆಯುತ್ತದೆ, ಎರಡೂ ಮಗ್ಗುಲಿನಲ್ಲಿ ಸಿದ್ದರಾಮಯ್ಯ ಬಲವಾಗಿದ್ದಾರೆ. ಅಹಿಂದ ಬಣ, ಹಿರಿಯ ಶಾಸಕರು, ಬಹುಪಾಲು ಕಾಂಗ್ರೆಸ್ ಶಾಸಕರು ಅವರ ಹಿಂದೆ ಬಲವಾಗಿ ನಿಂತಿದ್ದಾರೆ. ಈ ಬಣದ ಶಾಸಕರು ಅಧಿಕಾರ ಹಸ್ತಾಂತರದ ಯಾವುದೇ ರೀತಿಯ ಒಪ್ಪಂದ ಇರಲಿಲ್ಲ ಎಂದೇ ಹೇಳುತ್ತಿದ್ದು, ಇದು ಕೇವಲ ಒಬ್ಬ ನಾಯಕನ ಮಹತ್ವಾಕಾಂಕ್ಷೆಯ ಪರಿಣಾಮ ಎಂದು ಹೇಳುತ್ತಿದ್ದಾರೆ. ಹಾಗಾಗಿ ಇದು ನಂಬಿಕೆ ದ್ರೋಹವಾಗುವುದಿಲ್ಲ ಎಂದೂ ಹೇಳುತ್ತಿದ್ದಾರೆ.
ಆದರೂ ಪರಿಸ್ಥಿತಿ ಒಂದೇ ರೀತಿಯದ್ದಾಗಿಲ್ಲ. ರಾಜಕೀಯ ಗಾಳಿ ಮಾತುಗಳು ವ್ಯಾಪಕವಾಗಿ ಹರಡಿದ್ದು, ಶಿವಕುಮಾರ್ ತಮ್ಮನ್ನು ಬದಿಗೆ ಸರಿಸಲು ಅವಕಾಶ ನೀಡದೆ, ಬಿಜೆಪಿಯೊಡನೆ ಮೈತ್ರಿ ಮಾಡಿಕೊಂಡು ಅಧಿಕಾರ ಗಳಿಸುವ ಯೋಚನೆಯಲ್ಲಿದ್ದಾರೆ ಎಂಬ ಗುಮಾನಿಯೂ ಕೇಳಿಬರುತ್ತಿದೆ. ಇದು ಅಸಾಧ್ಯ ಸನ್ನಿವೇಶವೇನಲ್ಲ. ಶಿವಕುಮಾರ್ ಅವರ ವ್ಯಕ್ತಿತ್ವ ಅಪಾಯದಲ್ಲಿದ್ದು, ಬಿಜೆಪಿ ಮರಳಿ ಅಧಿಕಾರಕ್ಕಾಗಿ ಹಂಬಲಿಸುತ್ತಿದೆ. ಡಿಕೆಶಿ ಮತ್ತು ಬಿಜೆಪಿ ಮೈತ್ರಿ ಸಾಧ್ಯವಾಗುವುದಾದರೆ, ಇದು ಶಿವಕುಮಾರ್ ಅವರನ್ನು ಅವಕಾಶವಾದಿ ಎಂದು ನಿರೂಪಿಸುವುದೇ ಅಲ್ಲದೆ, ಕಾಂಗ್ರೆಸ್ನೊಡನೆ ಸಂಬಂಧಗಳನ್ನು ಶಾಶ್ವತವಾಗಿ ಕಳೆದುಕೊಳ್ಳಲಿದ್ದಾರೆ. ಹಾಗೆಯೇ ಅವರು ಬಿಜೆಪಿಯ ಅಲ್ಪಕಾಲಿಕ ಕೈಗೊಂಬೆಯಾಗುತ್ತಾರೆ.
ಹೈಕಮಾಂಡ್ ಈಗ ಹಿಂದಿನಂತೆ ಗೊಂದಲಕ್ಕೆ ಸಿಲುಕಿದೆ. ಇಬ್ಬರೂ ನಾಯಕರನ್ನು ಕಳೆದುಕೊಳ್ಳಲು ಪಕ್ಷವು ಇಚ್ಛಿಸುವುದಿಲ್ಲ. ಆದರೂ ಪಕ್ಷವು ಈ ಕಲಹದಿಂದ ಸರಿಪಡಿಸಲಾಗದಂತೆ ಛಿದ್ರೀಕರಣವಾಗುವುದನ್ನು ತಪ್ಪಿಸಬೇಕಿದೆ. ಇದು ಸೂಕ್ಷ್ಮ ಸಮತೋಲನದ ನಡೆಯಾಗಿದ್ದು, ಪಕ್ಷದಲ್ಲಿ ದೃಢ ನಿಶ್ಚಯ, ಸ್ಪಷ್ಟತೆ ಮತ್ತು ಅಹಿತಕರ ಸತ್ಯವನ್ನು ಎದುರಿಸುವ ಇಚ್ಛಾಶಕ್ತಿ ಇರಬೇಕಾಗುತ್ತದೆ.
ಈಗ ಕದನದ ಅಸ್ತ್ರಗಳು ಹೊರಬಂದಿವೆ, ಪಕ್ಷ ಮೌನವಾಗಿರುವುದು ಸಾಧ್ಯವಿಲ್ಲ. ಕರ್ನಾಟಕದ ರಾಜಕೀಯ ಭವಿಷ್ಯ ಇನ್ನು ಎರಡು ವರ್ಷಗಳ ಕಾಲ, ಕಾಂಗ್ರೆಸ್ ಪಕ್ಷವು ಹೇಗೆ ಇಬ್ಬರು ಬಲಾಢ್ಯ ನಾಯಕರ ನಡುವೆ ಕಲಹದ ಈ ಪರಿಸ್ಥಿತಿಯನ್ನು ನಿಭಾಯಿಸುತ್ತದೆ ಎನ್ನುವುದನ್ನು ಅವಲಂಬಿಸುತ್ತದೆ.
Comments
Post a Comment