ಕರಾವಳಿ ಅಭಿವೃದ್ಧಿ ಪ್ರಾಧಿಕಾರವೆಂಬ ಗೊಂಬೆ ಮರು ಸ್ಥಾಪನೆ

 


                                                                    ಎಮ್ ಎ ಗಫೂರ್

ಪ್ರಾಧಿಕಾರ ಮಾಡಬಹುದಾದ ಎಲ್ಲ ಕೆಲಸಗಳನ್ನೂ ಸರಕಾರದ ಲೋಕೋಪಯೋಗಿ ಇಲಾಖೆ ಮಾಡಬಲ್ಲದು.

.............

ಅಲವಾದರಲ್ಲವೆನ್ನಿ* ಬಿವಿಸೀ


ಜನರು ಈಗಾಗಲೇ ಮರೆತು ಹೋಗಿರುವ ಉಡುಪಿಯ ಕಾಂಗ್ರೆಸ್ ನಾಯಕ ಎಮ್ ಎ ಗಫೂರ್ ಅವರನ್ನು ಯಾರನ್ನೋ ಮೆಚ್ಚಿಸಲು ಮರಳಿ ಮುನ್ನಲೆಗೆ ತರುವ ಸಲುವಾಗಿ ಕರ್ನಾಟಕ ಸರ್ಕಾರವು ಕರಾವಳಿ ಅಭಿವೃದ್ಧಿ ಪ್ರಾಧಿಕಾರ(ಸಿಡಿಎ)ದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿಹಾಕಿದೆ. ಹಲವು ವರ್ಷಗಳ ಕಾಲ ಗಫೂರ್ ಅವರ ಸಾರ್ವಜನಿಕ ಚಟುವಟಿಕೆಗಳ ಬಗ್ಗೆ ಯಾವುದೇ ಸುದ್ದಿ ಕೇಳಿಬಂದಿರಲಿಲ್ಲ. ಹಠಾತ್ತನೆ ಅವರನ್ನು ಮರಳಿ ತಂದಿರುವುದು ಕರಾವಳಿ ಅಭಿವೃದ್ದಿಗಿಂತಲೂ ಹೆಚ್ಚಾಗಿ, ರಾಜಕೀಯ ನಿಷ್ಠಾವಂತರನ್ನು ಆಲಂಕಾರಿಕ ಹುದ್ದೆಗಳ ಮೂಲಕ ಸಮ್ಮಾನಿಸುವ ಕ್ರಮವಾಗಿ ತೋರುತ್ತದೆ.

ಹಿಂದೆ ಹಲವು ವರ್ಷಗಳ ಕಾಲ ಕಾರ್ಯೋನ್ಮುಖವಾಗಿದ್ದರೂ ಯಾವುದೇ ಪ್ರಭಾವವನ್ನು ಬೀರುವುದಲ್ಲಿ ವಿಫಲವಾಗಿತ್ತು. ಅದರ ಬಜೆಟ್ ಸಹ ಅಲ್ಪ ಮೊತ್ತದ್ದಾಗಿದೆ. ಈ  ಮಂಜೂರಾತಿಯ ಬಹುಪಾಲು ವೇತನ, ಭತ್ಯೆ, ವಾಹನಗಳ ಬಾಡಿಗೆ, ಸಭೆಗಳು ಮತ್ತು ಕಾರ್ಯಕ್ರಮಗಳ ವೆಚ್ಚವಾಗಿ ಖರ್ಚಾಗಿದೆ. ಈಗ ಉಳಿದಿರುವ ಹಣದಲ್ಲಿ ರಸ್ತೆಗಳ ಹೊಂಡಗಳನ್ನು ಮುಚ್ಚಬಹುದೇ ಹೊರತು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಪರಿವರ್ತನೆಯಾಗುವಂತಹ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ್ಲ.

ಆದಾಗ್ಯೂ ಹೊಸ ಅಧ್ಯಕ್ಷರು ತಮ್ಮ ಅಧಿಕಾರ ವಹಿಸಿಕೊಂಡ ಕೂಡಲೇ ನೇಮಕವಾಗುವ ಎಲ್ಲರೂ ಮಾತನಾಡುವ ಪರಿಭಾಷೆಯಲ್ಲೇ ಮಾತನಾಡಿದರು. ಕರಾವಳಿಯಲ್ಲಿ ಪ್ರಾಜೆಕ್ಟ್‍ಗಳ ದೊಡ್ಡ ಕನಸುಗಳು, ಭಾರಿ ಪ್ರಮಾಣದ ಮೂಲ ಸೌಕರ್ಯ ಯೋಜನೆಗಳು ಮತ್ತು ಕರಾವಳಿ ಪ್ರದೇಶದ 19 ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಒತ್ತು ನೀಡುವ ಮಾತನಾಡುತ್ತಿದ್ದಾರೆ. ಇವೆಲ್ಲವೂ ದುರಂತವಾಗಿ ಅಂತ್ಯವಾಗುವುದೇ ಹೆಚ್ಚು. ಈ ಜಿಲ್ಲೆಗಳು ಮೂಲ ಸೌಕರ್ಯಗಳಿಗಾಗಿ ಆಗ್ರಹಿಸುತ್ತಲೇ ಇವೆ. ಸಮರ್ಪಕ ಸಂಚಾರ ಯೋಗ್ಯ ರಸ್ತೆಗಳು, ನಂಬಲರ್ಹವಾಗಿ ಕುಡಿಯುವ ನೀರು, ಕಾರ್ಯನಿರತವಾದ ಆರೋಗ್ಯ ಕೇಂದ್ರಗಳು, ಬಳಸದೆ ಇರುವ ಗೋದಾಮುಗಳಂತಿರುವ ಶಾಲೆಗಳ ಪುನರುತ್ಥಾನ ಇವು ಜನರ ಬೇಡಿಕೆಯಾಗಿದೆ. ಈ ಕೆಲಸಗಳಿಗಾಗಿ ಯಾವುದೇ ಅಧ್ಯಕ್ಷರ ಅಗತ್ಯವಿಲ್ಲ. ರಾಜಕೀಯ ಇಚ್ಛಾಶಕ್ತಿ ಮತ್ತು ಬಜೆಟ್ ಅನುದಾನಗಳು ಸಮರ್ಪಕವಾಗಿದ್ದರೆ ಸಾಕು. ಹಾಗೆ ನೋಡಿದರೆ, ಪ್ರಾಧಿಕಾರ ಮಾಡಬಹುದಾದ ಎಲ್ಲ ಕೆಲಸಗಳನ್ನೂ ಸರಕಾರದ ಲೋಕೋಪಯೋಗಿ ಇಲಾಖೆ ಮಾಡಬಲ್ಲದು.

ಗಫೂರ್ ಅವರ ಮುಂದಾಳತ್ವದಲ್ಲಿ ಸಿಡಿಎ, ಈ ಪ್ರಾಥಮಿಕ ಅಗತ್ಯತೆಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡಿ ಅನುದಾನ ಪಡೆಯಲು ಸಾಧ್ಯವೇ? ಚಿಲ್ಲರೆ ಮಂಜೂರಾತಿಗಳನ್ನೂ ಮೀರಿ ಹೆಚ್ಚುವರಿ ಅನುದಾನಗಳನ್ನು ತರಲು ಸಾಧ್ಯವೇ? ಪ್ರಾಮಾಣಿಕವಾಗಿ ಹೇಳುವುದಾದರೆ, ಇದು ಅಸಾಧ್ಯವಾದ ಕೆಲಸ. ಪ್ರಾಧಿಕಾರವು ಇದಕ್ಕೆ ಪೂರಕವಾದ ರಾಜಕೀಯ ಬಲವನ್ನಾಗಲೀ, ಹಣಕಾಸಿನ ಬಲವನ್ನಾಗಲೀ, ಆಡಳಿತಾತ್ಮಕ ವ್ಯವಸ್ಥೆಯನ್ನಾಗಲೀ ಹೊಂದಿಲ್ಲ. ಹಾಗಾಗಿ ಈ ಆದ್ಯತೆಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ.

ಹಾಗಾಗಿ ಮುಂದಿನ ಚಿತ್ರಣವನ್ನು ಊಹಿಸಬಹುದು. ಸಿಡಿಎ ತೆರಿಗೆದಾರರ ಹಣವನ್ನು ಪೆÇೀಲು ಮಾಡುತ್ತದೆಯೇ ಹೊರತು ಫಲಿತಾಂಶಗಳು ಶೂನ್ಯವಾಗಿರುತ್ತದೆ. ಅಧ್ಯಕ್ಷರು ಕಾಲಕಾಲಕ್ಕೆ ಪತ್ರಿಕಾಗೋಷ್ಠಿ ನಡೆಸಿ ಬಣ್ಣ ಬಣ್ಣದ ಹೇಳಿಕೆಗಳನ್ನು ನೀಡುತ್ತಾರೆ, ಅದ್ಭುತವಾದ ಸಾಧನೆ ಮಾಡಿರುವುದಾಗಿ ಹೇಳುತ್ತಾರೆ. ಆದರೆ ವಾಸ್ತವವಾಗಿ ಇದಾವುದೂ ಕಾಣುವುದಿಲ್ಲ. ಸರ್ಕಾರ ತನ್ನ ಅವಧಿ ಮುಗಿಸುವ ವೇಳೆಗೆ ಪ್ರಾಧಿಕಾರದ ಈ ಪರಂಪರೆ ಬದಲಾಗದೆ ಉಳಿದಿರುತ್ತದೆ. ಅಧಿಕಾರಶಾಹಿಯ ಕೂಪವಾಗಿ ಕೇವಲ ಪಕ್ಷದ ಕಾರ್ಯಕರ್ತರ ಆಶ್ರಯ ತಾಣವಾಗಿರುತ್ತದೆ.

ಒಟ್ಟಾರೆ ಹೇಳುವುದಾದರೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮರುಸ್ಥಾಪನೆ, ಅಭಿವೃದ್ಧಿಯ ಸೂಚಕವಲ್ಲ, ಇದು ರಾಜಕೀಯ ಪೆÇೀಷಣೆಯನ್ನು ಸಾರ್ವಜನಿಕ ಸೇವೆಯ ವೇಷದಲ್ಲಿ ಎತ್ತಿ ತೋರುವ ಪ್ರಸಂಗ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again