ವಿದ್ಯಾರ್ಥಿ, ಶಿಕ್ಷಕರಿಗೆ ದ್ರೋಹ ಬಗೆದ ರಾಜ್ಯ ಸರ್ಕಾರ

 ಕರ್ನಾಟಕ ಸರ್ಕಾರದಿಂದ ನಿರ್ವಹಿಸಲ್ಪಡುವ ಶಾಲಾ ಕಾಲೇಜುಗಳು ಕ್ರಮೇಣ ಅವಸಾನದತ್ತ ಸಾಗುತ್ತಿದ್ದು, ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯು ಈ ವಿನಾಶಕಾರಿ ಬೆಳವಣಿಗೆಯ ನಡುವೆಯೂ ನಿರ್ಲಕ್ಷ್ಯದಿಂದಲೇ ವರ್ತಿಸುತ್ತಿದೆ. ಶಿಕ್ಷಕರಿಗೆ ಹಲವು ತಿಂಗಳುಗಳ ವೇತನ ಪಾವತಿಯಾಗಿಲ್ಲ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಬಹುಮುಖ್ಯವಾದ ಅನುದಾನಗಳನ್ನು ಪಡೆಯುತ್ತಿಲ್ಲ. ಶಾಲಾ ಕೊಠಡಿಗಳು ಕುಸಿದು ಬೀಳುತ್ತಿವೆ. ತನ್ನ ಬಾಧ್ಯತೆ ಮತ್ತು ಆರ್ಥಿಕ ಹೊರೆಯನ್ನು ತಗ್ಗಿಸಿಕೊಳ್ಳಲು ರಾಜ್ಯ ಸರ್ಕಾರವು ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವ ವ್ಯವಸ್ಥೆಯನ್ನು ಅಳವಡಿಸಿದ್ದು, ಈ ಬೋಧಕರನ್ನು ವರ್ಷದ ಹತ್ತು ತಿಂಗಳುಗಳಲ್ಲಿ ದುಡಿಸಿಕೊಳ್ಳಲಾಗುತ್ತದೆ ತದನಂತರ ಬೇಸಿಗೆ ರಜೆಯಲ್ಲಿ ಇವರು ನಿರುದ್ಯೋಗಿಗಳಾಗುತ್ತಾರೆ.  ಈ ಹತ್ತು ತಿಂಗಳುಗಳ ಅವಧಿಯಲ್ಲೂ ವೇತನಗಳನ್ನು ವಿಳಂಬ ಮಾಡಲಾಗುತ್ತಿದೆ ಅಥವಾ ತಡೆಹಿಡಿಯಲಾಗುತ್ತಿದೆ. ಇದು ಅಸಾಂಪ್ರದಾಯಿಕ ಮಾತ್ರವೇ ಅಲ್ಲ, ಕ್ರೂರ ವ್ಯವಸ್ಥೆಯಾಗಿದೆ.

ಸಮಾಜದ ಬೆನ್ನೆಲುಬಾಗಿರುವ ಬೋಧಕರನ್ನು ಬಳಸಿ ಬಿಸಾಡುವ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದು, ಕೆಲವರು ವೇತನ ರಹಿತ ಕೆಲಸದ ಭಾರಕ್ಕೆ ನಲುಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರವು ಈ ಬೆಳವಣಿಗೆಗೆ ಮೌನ ವಹಿಸಿದ್ದು ಅನ್ಯಮನಸ್ಕವಾಗಿ, ತಟಸ್ಥವಾಗಿ ಉಳಿದಿದೆ. ಪೆÇೀಷಕರು ಅಸಹಾಯಕರಾಗಿ ತಮ್ಮ ಮಕ್ಕಳ ಭವಿಷ್ಯದತ್ತ ನೋಡುತ್ತಿದ್ದು, ಈ ಮಕ್ಕಳ ಭವಿಷ್ಯ ಆಡಳಿತಾತ್ಮಕ ಅದಕ್ಷತೆಗೆ ಬಲಿಯಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಹಿನ್ನಡೆ ಎದುರಿಸುತ್ತಿದ್ದು, ನೈತಿಕವಾಗಿ ಕುಸಿಯುತ್ತಿದ್ದಾರೆ. ಇಡೀ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ವಿನಾಶದ ಅಂಚಿನಲ್ಲಿದೆ.

ಇದು ಅಧಿಕಾರಶಾಹಿಯ ವೈಫಲ್ಯ ಎನ್ನುವುದಕ್ಕಿಂತಲೂ ನೈತಿಕ ವೈಫಲ್ಯ ಎನ್ನಬಹುದು. ರಾಜ್ಯ ಸರ್ಕಾರವು ಶಿಕ್ಷಣವನ್ನು ಲೆಕ್ಕಪುಸ್ತಕಗಳ ಅಂಕಿ ಅಂಶಗಳಂತೆ ಪರಿಗಣಿಸುತ್ತಿದ್ದು, ಅದು ಪ್ರಭಾವಿಸುವ ಮನುಷ್ಯ ಜೀವನವನ್ನು ನಿರ್ಲಕ್ಷಿಸುತ್ತಿದೆ. ಪ್ರತಿಭೆಯು ವ್ಯವಸ್ಥೆಯಿಂದ ಮರೆಯಾಗುತ್ತಿದ್ದು, ಶಾಲಾ ಕೊಠಡಿಗಳು ಮೌನವಾಗಿವೆ. ಸಾರ್ವಜನಿಕ ಶಿಕ್ಷಣದ ಭರವಸೆ ಕ್ಷೀಣಿಸುತ್ತಿದೆ.

ಕರ್ನಾಟಕದ ಆಳುವ ವರ್ಗಗಳು ಇದಕ್ಕೆ ಉತ್ತರಿಸಬೇಕಿದೆ. ಶಿಕ್ಷಕರು ಭದ್ರತೆ, ಘನತೆಯನ್ನು ಅಪೇಕ್ಷಿಸುತ್ತಾರೆ, ಅದಕ್ಕೆ ಅರ್ಹರೂ ಆಗಿದ್ದಾರೆ. ವಿದ್ಯಾರ್ಥಿಗಳು ಸುಸ್ಧಿರತೆ ಮತ್ತು ಅವಕಾಶಗಳಿಗೆ ಅರ್ಹರಾಗಿರುತ್ತಾರೆ. ನಾಗರಿಕರು ತನ್ನ ಕರ್ತವ್ಯವನ್ನು ಗೌರವಿಸುವ ಸರ್ಕಾರವನ್ನು ಬಯಸುತ್ತಾರೆ. ತುರ್ತು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸದೆ ಹೋದರೆ, ಕರ್ನಾಟಕದ ಶಿಕ್ಷಣ ವ್ಯವಸ್ಥೆಯು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ವೆಚ್ಚಗಳನ್ನು ಕಡಿತಗೊಳಿಸುವುದರಿಂದ ಆಗುವ ಪರಿಣಾಮಗಳು ಮಾನವನ ಮತ್ತು ಬೌದ್ಧಿಕತೆಯ ಅಭಿವೃದ್ಧಿಗೆ ಮಾರಕವಾಗುತ್ತದೆ.

ಈ ಕುಸಿತವು ಅನಿವಾರ್ಯವೇನಲ್ಲ. ಬದಲಾಗಿ ಸೃಷ್ಟಿಸಿದ ಅಪಾಯವಾಗಿದೆ. ರಾಜಕೀಯ ಅನಿವಾರ್ಯತೆಗಳು, ಹಣಕಾಸು ವ್ಯವಹಾರಗಳು ಮತ್ತು ಅನ್ಯಮನಸ್ಕತೆಯ ಪರಿಣಾಮವಾಗಿದೆ. ಈಗ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಉತ್ತರದಾಯಿತ್ವವನ್ನು ಪ್ರಶ್ನಿಸುವ ಸಮಯ ಎದುರಾಗಿದೆ. ಇಲ್ಲವಾದರೆ ರಾಜ್ಯದ ಪ್ರತಿಯೊಬ್ಬ ಮಗು, ಬೋಧಕರು, ಮತ್ತು ಕರ್ನಾಟಕದ ಭವಿಷ್ಯಕ್ಕೆ ದ್ರೋಹ ಬಗೆದಂತಾಗುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again