ಧರ್ಮಸ್ಥಳದ ಸಾವುಗಳು: ಕೆ.ಎಸ್. ಹೆಗ್ಡೆ ಆಸ್ಪತ್ರೆ ಮತ್ತು ಪೋಲೀಸರ ನೈತಿಕ ವೈಫಲ್ಯ
ಧರ್ಮಸ್ಥಳದ ಸುತ್ತಮುತ್ತಲಿನ ಅಸಹಜ ಸಾವುಗಳ ಸರಣಿ ಇದೀಗ ವೈದ್ಯಕೀಯ ಮತ್ತು ಕಾನೂನು ಪ್ರಕ್ರಿಯೆಗಳ ನೈತಿಕತೆಯ ಕುರಿತ ಗಂಭೀರ ಪ್ರಶ್ನೆ ಎತ್ತಿದೆ. ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯು ಈ ಪ್ರಕರಣಗಳಲ್ಲಿ ಮರಣೋತ್ತರ ಪರೀಕ್ಷೆ ನಡೆಸಿರುವುದು ಕಾನೂನಾತ್ಮಕ ದೃಷ್ಟಿಯಿಂದ ವಿವಾದಾತ್ಮಕವಾಗಿದೆ. ಖಾಸಗಿ ಆಸ್ಪತ್ರೆಯೊಂದು ಕ್ರಿಮಿನಲ್ ತನಿಖೆಗೆ ಒಳಪಟ್ಟ ದೇಹದ ಮರಣೋತ್ತರ ಪರೀಕ್ಷೆ ನಡೆಸಿದರೆ, ಅದು ಸಾರ್ವಜನಿಕವಾಗಿ ಉತ್ತರದಾಯಿಯಾಗುತ್ತದೆ ಎಂಬುದು ಕಾನೂನಿನ ಸಿದ್ಧಾಂತ. ಆದರೆ ಆಸ್ಪತ್ರೆಯು ಈ ನಿಯಮವನ್ನು ನಿರ್ಲಕ್ಷಿಸಿರುವುದು ಸಾರ್ವಜನಿಕ ವಿಶ್ವಾಸಕ್ಕೆ ಧಕ್ಕೆಯಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಇಂತಹ ಮರಣೋತ್ತರ ಪರೀಕ್ಷೆಗಳನ್ನು ನಡೆಸಬೇಕು ಎಂಬ ನಿಯಮವಿದೆ, ಏಕೆಂದರೆ ಇವು ತನಿಖಾ ಸಾಕ್ಷ್ಯವಾಗಿ ಬಳಿಕ ನ್ಯಾಯಾಲಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೆ ಧರ್ಮಸ್ಥಳ ಪೆÇಲೀಸರು ದೇಹಗಳನ್ನು ಸ್ಥಳೀಯ ಜಿಲ್ಲಾ ಅಥವಾ ತಾಲೂಕು ಆಸ್ಪತ್ರೆಗಳ ಬದಲು 65 ಕಿಲೋಮೀಟರ್ ದೂರದ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕಳುಹಿಸಿರುವುದು ಕಾನೂನು ಉಲ್ಲಂಘನೆಯಷ್ಟೇ ಅಲ್ಲ, ಸಾಕ್ಷ್ಯಾಧಾರಗಳ ಪ್ರಾಮಾಣಿಕತೆಯ ಮೇಲೂ ಪ್ರಶ್ನೆ ಎತ್ತಿದೆ. ಈ ಕ್ರಮದಿಂದ ಪೆÇಲೀಸರು ತಮ್ಮ ಅಧಿಕಾರದ ವ್ಯಾಪ್ತಿಯನ್ನು ಮೀರಿದ್ದಾರೆ ಮತ್ತು ಆಸ್ಪತ್ರೆಯು ಕೂಡ ಕಾನೂನಾತ್ಮಕವಾಗಿ ತಪ್ಪು ಮಾಡಿದೆ ಎನ್ನುವ ಅಭಿಪ್ರಾಯ ಸಾರ್ವಜನಿಕರಲ್ಲಿದೆ.
ಅಸಹಜ ಸಾವುಗಳು ರಾಜಕೀಯ ಮತ್ತು ಸಾಮಾಜಿಕ ಸೂಕ್ಷ್ಮತೆ ಹೊಂದಿರುವ ಪ್ರದೇಶದಲ್ಲಿ ಸಂಭವಿಸಿದಾಗ, ಆಸ್ಪತ್ರೆಯಂತಹ ಸಾರ್ವಜನಿಕ ನಂಬಿಕೆಯ ಸಂಸ್ಥೆಗಳು ತಟಸ್ಥ ನಿಲುವು ಕಾಪಾಡಬೇಕಿತ್ತು. ಆದರೆ ಈ ಘಟನೆಗಳು ಮಾಧ್ಯಮಗಳಲ್ಲಿ ಬೆಳಕಿಗೆ ಬಂದ ನಂತರವೂ ಆಸ್ಪತ್ರೆ ಆಡಳಿತ ಮಂಡಳಿ ಮೌನವಾಗಿರುವುದು ಅಚ್ಚರಿಯೆನಿಸಿದೆ.
ಮೌನದಿಂದ ಆಸ್ಪತ್ರೆಯು ತನ್ನ ವಿಶ್ವಾಸಾರ್ಹತೆಯ ಜತೆ ರಾಜಿ ಮಾಡಿಕೊಂಡಿರುವುದು ಮಾತ್ರವಲ್ಲ, ಸಾರ್ವಜನಿಕರ ಮಾಹಿತಿ ಹಕ್ಕನ್ನೂ ಉಲ್ಲಂಘಿಸಿದೆ. ದೇಹಗಳ ಮರಣೋತ್ತರ ಪರೀಕ್ಷೆ ವಿಳಂಬವಾಗಿದ್ದು ಉದ್ದೇಶಪೂರ್ವಕವೋ? ದೇಹಗಳನ್ನು ಪ್ರಯೋಗಾಲಯಗಳಲ್ಲಿ ಬಳಸಲಾಗಿದೆಯೇ? ಅಂಗಾಂಗ ವ್ಯಾಪಾರದ ಸಂಶಯಗಳೂ ಮೂಡಿವೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಯ ಮೌನವು ಅನುಮಾನಗಳಿಗೆ ಆಹಾರ ನೀಡುತ್ತಿದೆ.
ಸಿಆರ್ಪಿಸಿ ಕಲಂ 174 ಪ್ರಕಾರ, ಅಸಹಜ ಸಾವುಗಳಲ್ಲಿ ಪೆÇಲೀಸರು ಸರ್ಕಾರ ಮಾನ್ಯತೆ ನೀಡಿದ ವೈದ್ಯಕೀಯ ಅಧಿಕಾರಿಗಳಿಂದಲೇ ಮರಣೋತ್ತರ ಪರೀಕ್ಷೆ ಮಾಡಿಸಬೇಕು. ಖಾಸಗಿ ಸಂಸ್ಥೆಯಲ್ಲಿ ಈ ಕಾರ್ಯ ನಡೆದರೆ ಅದು ಕಾನೂನುಬಾಹಿರವಾಗುತ್ತದೆ. ಈ ಪ್ರಕರಣವು ಕೇವಲ ಕಾನೂನು ಉಲ್ಲಂಘನೆಯಷ್ಟೇ ಅಲ್ಲ - ಖಾಸಗಿ ಆಸ್ಪತ್ರೆಯ ನೈತಿಕ ಹೊಣೆಗಾರಿಕೆಯ ನಿಗೂಢ ಸವಾಲಾಗಿದೆ.
ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳವು ಈ ವಿಚಾರದಲ್ಲಿ ಪರಿಶೀಲಿಸಬೇಕಿದೆ. ಕೆ ಎಸ್ ಹೆಗ್ಡೆ ಆಸ್ಪತ್ರೆಯು ಕಾನೂನು ನಿಯಮ ಉಲ್ಲಂಘಿಸಿತೇ, ಅಥವಾ ಬಾಹ್ಯ ಒತ್ತಡಕ್ಕೆ ಮಣಿಯಿತೇ ಎಂಬುದನ್ನೂ ಸ್ಪಷ್ಟಪಡಿಸಬೇಕು. ಈ ಹಂತದಲ್ಲಾದರೂ ಆಸ್ಪತ್ರೆಯು ಸಾರ್ವಜನಿಕವಾಗಿ ಸ್ಪಷ್ಟನೆ ನೀಡುವುದು ಅತ್ಯಾವಶ್ಯಕ.
ಮೌನದಿಂದ ಸತ್ಯವನ್ನು ಮುಚ್ಚುವ ಪ್ರಯತ್ನ ವಿಫಲವಾಗುತ್ತದೆ. ಧರ್ಮಸ್ಥಳದ ಅಸಹಜ ಸಾವುಗಳ ವಿಚಾರದಲ್ಲಿ ಆಸ್ಪತ್ರೆಯೂ ಪೋಲೀಸರೂ ಸ್ಪಷ್ಟನೆ ನೀಡುವವರೆಗೂ, ಈ ಪ್ರಕರಣವು ಜೀವಂತವಾಗಿಯೇ ಉಳಿಯಲಿದೆ.
Comments
Post a Comment