ಧರ್ಮಸ್ಥಳ ಆಸ್ತಿ `ಹೊಡೆಯುವ' ಬಗ್ಗೆ ಡಿಕೆಶಿ, ಅಶೋಕ್ ಹೇಳಿದ `ಸತ್ಯ'
`ಸತ್ಯ ವಾಕ್ಯಕೆ ಮೀರಿ ನಡೆದರೆ ಮೆಚ್ಚನಾ ಪರಮಾತ್ಮನು'
ಧರ್ಮಸ್ಥಳದ ಸಂಘರ್ಷ ಹೊಸ ಗಂಭೀರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಾಗರಿಕ ಗುಂಪುಗಳು ಡಿ ಗ್ಯಾಂಗ್ನ ಅಪರಾಧಗಳನ್ನು ಪ್ರಶ್ನಿಸುವುದರ ಮೂಲಕ ಆರಂಭವಾದ ಈ ಸಂಘರ್ಷ ಈಗ ರಾಜ್ಯದ ಉನ್ನತ ನಾಯಕರ ನಡುವೆ ಸಾರ್ವಜನಿಕ ಆರೋಪ, ಪ್ರತ್ಯಾರೋಪಗಳನ್ನು ಎದುರಿಸುತ್ತಿದೆ.
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪರಸ್ಪರ ತಮ್ಮ ಪಕ್ಷಗಳನ್ನು ದೂಷಿಸುತ್ತಿದ್ದು, ಧರ್ಮಸ್ಥಳ ದೇವಾಲಯದ ಆಸ್ತಿಯನ್ನು ಕೊಳ್ಳೆ ಹೊಡೆಯಲು ಧರ್ಮಸ್ಥಳದ ಹೆಗ್ಗಡೆ ಪರ ವಹಿಸುತ್ತಿರುವುದಾಗಿ ಆರೋಪಿಸುತ್ತಿದ್ದಾರೆ. ಇವು ಕ್ಷುಲ್ಲಕ ಮಾತುಗಳಲ್ಲ. ಅಧಿಕಾರದ ಸ್ಥಾನದಲ್ಲಿರುವ ಇಬ್ಬರು ಹಿರಿಯ ಜವಾಬ್ದಾರಿಯುತ ನಾಯಕರು ಮಾತನಾಡುವಾಗ, ಜನರು ಅವರ ಮಾತುಗಳನ್ನು ನಂಬುತ್ತಾರೆ. ಈ ನಾಯಕರು ತಮ್ಮ ಬಳಿ ಸಾಕ್ಷ್ಯಾಧಾರ ಇಟ್ಟುಕೊಂಡೇ ಇಂಥ ಗಂಭೀರ ಆರೋಪ ಮಾಡಿದ್ದಾರೆ ಎಂದುಕೊಳ್ಳುವುದು ಅಸಹಜವಲ್ಲ. ಈ ಮಾತುಗಳನ್ನು ಬೇಕಾಬಿಟ್ಟಿ ಹೇಳಿಕೆಗಳಂತೆ ನಿರ್ಲಕ್ಷಿಸಲಾಗುವುದಿಲ್ಲ.
ಈ ನಾಯಕರ ಬಳಿ ಸಾಕ್ಷಿ ಇದ್ದರೆ, ಸಾರ್ವಜನಿಕರಿಗೆ ಅದನ್ನು ಒದಗಿಸಬೇಕಾಗುತ್ತದೆ. ಇಲ್ಲಿ ಯಾವ ಧರ್ಮಸ್ಥಳ ಟೆಂಪಲ್ ಆಸ್ತಿಯನ್ನು ಕೊಳ್ಳೆಹೊಡೆಯಲಾಗಿದೆ ಅಥವಾ ಯತ್ನಿಸಲಾಗುತ್ತಿದೆ ಎಂದು ಜನರಿಗೆ ಗೊತ್ತಾಗಬೇಕು. ಅದನ್ನು ಯಾರಿಗೆ ಯಾರು ವರ್ಗಾಯಿಸಲು ಪ್ರಯತ್ನಿಸಿದವರು? ಈ ಉದ್ದೇಶಕ್ಕಾಗಿ ಸರ್ಕಾರದಲ್ಲಿ ಅಥವಾ ವಿರೋಧ ಪಕ್ಷದಲ್ಲಿ ಆರೋಪಿಗೆ ರಕ್ಷಣೆ ನೀಡಿದವರು ಯಾರು? ಧರ್ಮಸ್ಥಳದವರ ವಿರುದ್ಧ ಪೆÇಲೀಸ್ ಮೊಕದ್ದಮೆಗಳು ಸ್ಥಗಿತಗೊಳ್ಳಲು ಅಥವಾ ವಿಳಂಬವಾಗಲು ಇದೇ ಕಾರಣವೇ? ಯಾವ ಅಧಿಕಾರಿಗಳು ಈ ಮೊಕದ್ದಮೆಗಳಿಗೆ ವಿಮುಖರಾಗಿದ್ದರು? ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡಬೇಕಾಗುತ್ತದೆ. ಇಬ್ಬರೂ ನಾಯಕರು ವಿವರಗಳನ್ನು ಬಹಿರಂಗಪಡಿಸದೆ ಇದ್ದರೆ, ಜನರು ಈ ಆರೋಪಗಳು ಕೇವಲ `ರಾಜಕೀಯ ನಾಟಕ' ಎಂದೇ ಭಾವಿಸುತ್ತಾರೆ. ನಿಜವಾದ ಅಪರಾಧಿಗಳನ್ನು ಸದ್ದಿಲ್ಲದೆ ರಕ್ಷಿಸುತ್ತಾ ಪರಸ್ಪರ ದೋಷಾರೋಪಣೆ ಮಾಡುತ್ತಿದ್ದಾರೆ ಎಂದು ಭಾವಿಸುತ್ತಾರೆ. ಮತ್ತು ಈ ವಿಚಾರವಾಗಿ ನ್ಯಾಯಾಲಯಕ್ಕೆ ದೂರು ಸಲ್ಲಿಸುವ ಸ್ವಾತಂತ್ರ್ಯ ಹೊಂದಿರುತ್ತಾರೆ.
ಹಾಗಾಗಿಯೇ ಈ ವಿಷಯ ಈಗ ಗಂಭೀರ ಸ್ವರೂಪ ಪಡೆದಿದೆ. ಹಲವು ವರ್ಷಗಳ ಕಾಲ ಈ ದೇವಾಲಯದ ಪಾವಿತ್ರ್ಯತೆ ಮತ್ತು ಘನತೆಯ ನೆಪದಲ್ಲಿ ಅದರ ವಿರುದ್ಧ ಎದ್ದ ಪ್ರಶ್ನೆಗಳನ್ನು ನಿರ್ಲಕ್ಷಿಸಿ, ತೆಪ್ಪಗಾಗಿಸಲು ಪ್ರಯತ್ನಿಸಲಾಗಿದೆ. ಇದರ ವಿರುದ್ಧ ಮಾತನಾಡುವವರನ್ನು ಧರ್ಮ ವಿರೋಧಿ ಅಥವಾ ಸಂಪ್ರದಾಯಕ್ಕೆ ಧಕ್ಕೆ ಉಂಟುಮಾಡುವವರು ಎಂದು ದೂಷಿಸಲಾಗುತ್ತಿದೆ. ಈ ರಕ್ಷಾ ಕವಚದ ಹಿಂದೆ, ಅಪರಾಧಗಳು, ಅಕ್ರಮ ಭೂ ಕಬಳಿಕೆಯ ವ್ಯವಹಾರಗಳು ಅಡಗಿವೆ. ಸೌಜನ್ಯ ಹತ್ಯೆ ಪ್ರಕರಣದಲ್ಲೂ ಸಹ ನಾಯಕರು ಆರೋಪಿಯನ್ನು ಸಂಪರ್ಕಿಸುವುದು ಸಾರ್ವಜನಿಕರಿಗೆ ತಿಳಿದಿದ್ದು, ಅವರ ನಿಷ್ಠೆ ಯಾರ ಕಡೆಗೆ ಇದೆ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ.
ಈ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ದೇವಾಲಯದ ಆಸ್ತಿಯನ್ನು ಕಬಳಿಸುವ ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿರುವುದರಿಂದ ಸ್ಪಷ್ಟ ಚಿತ್ರಣ ಎದುರಾಗಿದೆ. ಇಲ್ಲಿ ಸಂಘರ್ಷ ನಡೆಯುತ್ತಿರುವುದು ನ್ಯಾಯಕ್ಕಾಗಿ ಅಲ್ಲ, ಸತ್ಯಕ್ಕಾಗಿ ಅಲ್ಲ ಅಥವಾ ಶ್ರದ್ದಾನಂಬಿಕೆಗಳಿಗಾಗಿಯೂ ಅಲ್ಲ. ಭೂಮಿ, ಹಣ, ಅಧಿಕಾರದ ಮೇಲೆ ನಿಯಂತ್ರಣ ಸಾಧಿಸುವುದಕ್ಕಾಗಿ, ಈ ಹಿತಾಸಕ್ತಿ ಎಲ್ಲ ಪಕ್ಷಗಳನ್ನೂ ಆವರಿಸಿದೆ.
ಮುಂದಿನ ಏಕೈಕ ಹಾದಿ ಎಂದರೆ ನ್ಯಾಯಾಂಗ ತನಿಖೆ. ಇದು ರಾಜ್ಯ ಸರ್ಕಾರ ಅಥವಾ ಒತ್ತಡಗಳಿಗೆ ಒಳಗಾಗುವ ಏಜೆನ್ಸಿಗಳ ಮೂಲಕ ಆಗಬಾರದು. ಬದಲಾಗಿ ಸ್ವತಂತ್ರವಾದ ನ್ಯಾಯಾಲಯವೇ ರಚಿಸಿದ ಸಮಿತಿಯಿಂದ ನಡೆಯಬೇಕಿದೆ. ಪ್ರತಿಯೊಂದು ಭೂ ದಾಖಲೆಯನ್ನು, ಪ್ರಮಾಣ ಪತ್ರಗಳನ್ನೂ, ದೇವಾಲಯಕ್ಕೆ ಸಂಬಂಧಿಸಿದ ಪ್ರತಿಯೊಂದು ವಹಿವಾಟನ್ನೂ ತನಿಖೆಗೊಳಪಡಿಸಬೇಕಿದೆ. ತನ್ಮೂಲಕ ಯಾವ ರಾಜಕಾರಣಿಗಳು, ಅಧಿಕಾರಿಗಳು, ಮಧ್ಯವರ್ತಿಗಳು ಧರ್ಮಸ್ಥಳಕ್ಕೆ ಸಂಬಂಧಿತ ವಹಿವಾಟುಗಳಲ್ಲಿ ಶಾಮೀಲಾಗಿದ್ದಾರೆ ಎನ್ನುವುದು ಸಾಬೀತಾಗುತ್ತದೆ.
ಕರ್ನಾಟಕದ ಜನತೆ ಈ ವಿವರಗಳನ್ನು ಪಡೆಯಲು ಅರ್ಹರಾಗಿದ್ದಾರೆ. ದೇವಾಲಯಗಳು ಅಪರಾಧಗಳನ್ನು ಬಚ್ಚಿಡುವ ಮೂಲಕ ಗೌರವ ಗಳಿಸಲಾಗುವುದಿಲ್ಲ. ಸತ್ಯವನ್ನು ಧೈರ್ಯದಿಂದ ಎದುರಿಸಿದಾಗ ಮಾತ್ರ ಪಡೆಯುತ್ತವೆ. ರಾಜಕಾರಣಿಗಳು ನಂಬಿಕೆ, ಶ್ರದ್ಧೆಯನ್ನು ತಮ್ಮ ವ್ಯವಹಾರಗಳನ್ನು ಮುಚ್ಚಿಹಾಕುವ ಹೊದಿಕೆಯಂತೆ ಬಳಸಿದಾಗ ಆ ಮುಖವಾಡವನ್ನೂ ಕಿತ್ತೊಗೆಯಬೇಕಾಗುತ್ತದೆ.
Comments
Post a Comment