ಉಳ್ಳಾಲ ಅಕ್ರಮ ಮರಳು ಹಗರಣ-ಒಂದು ಗಂಭೀರ ಸಮಸ್ಯೆ
ರಾಜ್ಯ ಸರ್ಕಾರವು ಇದನ್ನು ಕೇವಲ ಸ್ಥಳೀಯ ವಿಚಾರ ಎಂದು ನಿರ್ಲಕ್ಷಿಸುವ ಕಾಲ ಮೀರಿದೆ. ಈ ಕೂಡಲೇ ಕಾರ್ಯೋನ್ಮುಖವಾಗಿ ಸಾರ್ವಜನಿಕರ ಆಗ್ರಹದಂತೆ ಸ್ವತಂತ್ರ ಸಂಸ್ಥೆಯ ಮೂಲಕ ತನಿಖೆ ನಡೆಸಬೇಕಿದೆ.
ಮಂಗಳೂರಿನ ಹೊರವಲಯದಲ್ಲಿರುವ ಉಳ್ಳಾಲದ ಕಡಲ ತೀರ ಒಂದು ಸುಂದರವಾದ ತಾಣ. ಆದರೆ ಇಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ಘೋರ ಅಕ್ರಮಗಳು ಅಷ್ಟೇ ಗಂಭೀರ ಸ್ವರೂಪದ್ದಾಗಿದ್ದು, ಹಲವು ವರ್ಷಗಳಿಂದ ಸುದ್ದಿಗೆ ಗ್ರಾಸವಾಗಿದೆ. ಈಗ ಮತ್ತೊಮ್ಮೆ ಇಲ್ಲಿನ ಅಕ್ರಮ ಮರಳು ಗಣಿಗಾರಿಕೆಯ ದಂಧೆ ಸಾರ್ವಜನಿಕವಾಗಿ ಸುದ್ದಿ ಮಾಡುತ್ತಿದೆ. ಕ್ಷಿಪ್ರ ಗತಿಯ ನಿರ್ಬಂಧ ಮತ್ತು ನಿಯಂತ್ರಣದ ಬೆಳವಣಿಗೆಯಾಗಬೇಕಿದ್ದ ಈ ಅಕ್ರಮಗಳು ಸ್ಥಳೀಯ ಮಾಫಿಯಾಗಳು ತಮ್ಮ ರಾಜಕೀಯ ಪ್ರಾಬಲ್ಯ ಮತ್ತು ಬೆಂಬಲದ ಪರಿಣಾಮವಾಗಿ ಅಕ್ರಮ ಚಟುವಟಿಕೆಗಳನ್ನು ನಿರ್ಭೀತಿಯಿಂದ ಮುಂದುವರೆಸುತ್ತಿವೆ. ಅಧಿಕಾರಶಾಹಿಯ ಮೌನ ಸಮ್ಮತಿ ನೈಸರ್ಗಿಕ ಸಂಪನ್ಮೂಲಗಳ ಲೂಟಿಗೆ ಹೇಗೆ ಅವಕಾಶ ಕಲ್ಪಿಸುತ್ತದೆ ಎನ್ನಲು ಉಳ್ಳಾಲ ಸಾಕ್ಷಿಯಾಗಿದೆ.
ಉಳ್ಳಾಲ ಅಕ್ರಮ ಗಣಿಗಾರಿಕೆಯ ಹಗರಣವು ಅಧಿಕೃತವಾಗಿ ಇಂದಿಗೂ ಸದ್ದಿಲ್ಲದೆ ನಡೆಯುತ್ತಿದ್ದು, ಇದಲ್ಲದೇ ವ್ಯಾಪಕವಾಗಿ ಕಾಣುವಂತೆ ಅಧಿಕೃತ ಪರವಾನಗಿ ಇಲ್ಲದೆ ನದಿ ತೀರದ ಮರಳನ್ನು, ಪಾವೂರ್-ಉಳಿಯ ಕಡಲತೀರದ ಮರಳನ್ನು ಮತ್ತು ನೇತ್ರಾವತಿ ತೀರದ ಮರಳು ಸಂಪನ್ಮೂಲವನ್ನು ಹಾಳುಮಾಡಲಾಗುತ್ತಿದೆ. ಇಲ್ಲಿನ ನಿವಾಸಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಈ ಕುರಿತು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ತಡರಾತ್ರಿ ಬಳಸಲಾಗುವ ಮರಳು ತೋಡುವ ಯಂತ್ರಗಳು, ನೋಂದಣಿಯಾಗದ ದೋಣಿಗಳು, ಮರಳು ಸಾಗಿಸುವ ಲಾರಿಗಳು ಇಲ್ಲಿನ ಮರಳನ್ನು ಖಾಸಗಿ ಖರೀದಿದಾರರಿಗೆ ಪೂರೈಸಲು ನೆರವಾಗುತ್ತಿದ್ದು, ಇದಾವುದೂ ಸಾಮಾನ್ಯ ಸಂಗತಿಗಳೆಂದು ನೋಡಬೇಕಾದ ಘಟನೆಗಳಲ್ಲ. ಪ್ರಕೃತಿನಾಶಕ್ಕೆ ಎಡೆಮಾಡುವ ವ್ಯಾಪಕ ಜಾಲಕ್ಕೆ ಒಳಪಟ್ಟಂತಹ ವ್ಯವಸ್ಥಿತ ದಂಧೆಯಾಗಿದೆ. ಸ್ಥಳೀಯ ನಾಗರಿಕರು, ಅಲ್ವಿನ್ ಡಿ ಸೋಜಾ ಅವರಂತಹ ಕಾರ್ಯಕರ್ತರು ಮಾತನಾಡಲು ಯತ್ನಿಸಿದಾಗ ಹಿಂಸಾತ್ಮಕ ಪ್ರತಿಕ್ರಿಯೆಯನ್ನು ಎದುರಿಸಬೇಕಾಗಿದೆ.
ಈ ಹಗರಣವನ್ನು ನಾಚಿಕೆಗೇಡಿನ ಒಂದು ಪ್ರಕರಣವಾಗಿ ನೋಡಬೇಕಿದೆ - ಏಕೆಂದರೆ ಆಡಳಿತ ವ್ಯವಸ್ಥೆ ಮತ್ತು ರಾಜಕೀಯ ರಕ್ಷಣೆ ಇಲ್ಲಿ ಪ್ರಧಾನವಾಗಿದೆ. ಅನೇಕ ವರದಿಗಳ ಅನುಸಾರ, ಸ್ಥಳೀಯ ಅಧಿಕಾರಿಗಳು ಈ ಚಟುವಟಿಕೆಗಳನ್ನು ಕಂಡೂಕಾಣದಂತೆ ಇರುವುದರಿಂದ ಮಾಫಿಯಾ ಕಾರ್ಯಚರಣೆಗಳು ಎಗ್ಗಿಲ್ಲದೆ ಸಾಗುತ್ತಿವೆ. ಇಲ್ಲಿ ಅಕ್ರಮ ಮರಳನ್ನು ವಶಪಡಿಸಿಕೊಳ್ಳುವುದು, ಎಫ್ಐಆರ್ ದಾಖಲಿಸುವುದು ನಡೆಯುತ್ತಿದ್ದರೂ ಸಹ ಯಾರ ಹೆಸರನ್ನೂ ಉಲ್ಲೇಖಿಸಲಾಗುತ್ತಿಲ್ಲ. ಹೊರಡಿಸಲಾದ ಆದೇಶಗಳು ಜಾರಿಯಾಗದೆ ಉಳಿಯುತ್ತವೆ. ಹಾಗಾಗಿ ಮರಳು ಮುಕ್ತವಾಗಿ ಸಾಗಿಸಲ್ಪಡುತ್ತದೆ.
ಆದರೂ ಒಂದು ಪ್ರಶ್ನೆ ಸಹಜವಾಗಿ ಕಾಡುತ್ತದೆ. ಈ ಲೂಟಿಯ ಫಲಾನುಭವಿಗಳು ಯಾರು? ಈವರೆಗೂ ಯಾವುದೇ ಉನ್ನತ ರಾಜಕಾರಣಿಯನ್ನು ನೇರವಾಗಿ ದೂಷಿಸಲಾಗಿಲ್ಲ ಅಥವಾ ಆರೋಪ ಹೊರಿಸಲಾಗಿಲ್ಲ. ಸಾಕ್ಷ್ಯಾಧಾರಗಳ ಕೊರತೆ ಇದ್ದ ಮಾತ್ರಕ್ಕೆ ಅಕ್ರಮ ನಡೆಯುತ್ತಿಲ್ಲ ಎನ್ನಲಾಗುವುದಿಲ್ಲ. ಸ್ಥಳೀಯ ಸುದ್ದಿಗಳನ್ನೇ ಗಮನಿಸಿದರೆ, ರಾಜಕೀಯ-ವಾಣಿಜ್ಯ ಸಂಬಂಧಗಳು ಇಲ್ಲಿ ಗಾಢವಾಗಿವೆ. ಉಳ್ಳಾಲದ ಕಾಂಗ್ರೆಸ್ ಪಕ್ಷದ ಪ್ರಬಲ ರಾಜಕೀಯ ನಾಯಕರಿಗೆ ಮತ್ತು ವಿಧಾನಸಭಾ ಅಧ್ಯಕ್ಷರಿಗೂ ಸಹ ಸುದ್ದಿಯನ್ನು ತಲುಪಿಸಲಾಗಿದೆ. ಯು ಟಿ ಖಾದರ್ ಅವರ ಮೇಲೆ ನಾಗರಿಕರು ಈ ಕುರಿತ ತನಿಖೆ ನಡೆಸಲು ಒತ್ತಡವನ್ನೂ ಹೇರಿದ್ದಾರೆ. ಅಕ್ರಮ ಗಣಿಗಾರಿಕೆ ಅನಿರ್ಬಂಧಿತವಾಗಿ ಸಾಗುತ್ತಿರುವುದು ಅವರ ಕ್ಷೇತ್ರದಲ್ಲೇ ಆಗಿರುವುದು ಇನ್ನೂ ಅಚ್ಚರಿ ಮೂಡಿಸುವ ಅಂಶ.
ಆದರೆ ಇದು ಕೇವಲ ಮರಳಿಗೆ ಸಂಬಂಧಿಸಿದ ಅಥವಾ ಭ್ರಷ್ಟಾಚಾರದ ಪ್ರಶ್ನೆಯಲ್ಲ. ಉಳ್ಳಾಲ ಹಗರಣವು ಪರಿಸರವನ್ನು ನಾಶಪಡಿಸುವ ಅಪರಾಧವಾಗಿದ್ದು ಇದು ಸರಿಪಡಿಸಲಾಗದ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ. ನೇತ್ರಾವತಿ ನದಿ ತೀರದ ದುರ್ಬಲ ಪರಿಸರ ಅಪಾಯದಲ್ಲಿದೆ. ಪಾವೂರ್-ಉಳಿಯಾ ದ್ವೀಪ ಕ್ರಮೇಣ ಕಣ್ಮರೆಯಾಗುತ್ತಿರುವುದು, ಅಲ್ಲಿ ಹಲವು ಪೀಳಿಗೆಗಳಿಂದ ಬದುಕುತ್ತಿರುವ ಜನರ ಆತಂಕವನ್ನು ಹೆಚ್ಚಿಸುತ್ತಿದೆ. ನದಿ ತೀರವು ಅಸ್ವಾಭಾವಿಕವಾಗಿ ಆಳಕ್ಕಿಳಿಯುತ್ತಿದ್ದು ಇದು ಕಡಲ ಸಾರಿಗೆಯ ಬದುಕು, ನೀರಿನ ಲವಣಾಂಶ ಮತ್ತು ಕೃಷಿಗೆ ಬೇಕಾದ ನೀರು ಪೂರೈಕೆಯನ್ನೂ ಬಾಧಿಸುತ್ತಿದೆ. ಇವೆಲ್ಲವೂ ಸಹ ಖಾಸಗಿ ಉದ್ಯಮಿಗಳ ಲಾಭಕ್ಕಾಗಿ ನಡೆಯುತ್ತಿರುವ ದಂಧೆಗಳು. ಚುನಾಯಿತ ಸರ್ಕಾರಗಳ ಮೂಗಿನಡಿಯಲ್ಲೇ ಇದು ನಡೆಯುತ್ತಿರುವುದು ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡಿದೆ.
ರಾಜ್ಯ ಸರ್ಕಾರವು ಇದನ್ನು ಕೇವಲ ಸ್ಥಳೀಯ ವಿಚಾರ ಎಂದು ನಿರ್ಲಕ್ಷಿಸುವ ಕಾಲ ಮೀರಿದೆ. ಈ ಕೂಡಲೇ ಕಾರ್ಯೋನ್ಮುಖವಾಗಿ ಸಾರ್ವಜನಿಕರ ಆಗ್ರಹದಂತೆ ಸ್ವತಂತ್ರ ಏಜೆನ್ಸಿಯ ಮೂಲಕ ತನಿಖೆ ನಡೆಸಬೇಕಿದೆ. ಸಿಬಿಐ, ಲೋಕಾಯುಕ್ತ ಅಥವಾ ನ್ಯಾಯಾಲಯ ನಿರ್ದೇಶಿತ ವಿಶೇಷ ತನಿಖಾ ದಳದ ಮೂಲಕ ತನಿಖೆ ನಡೆಸಿ ಹಗರಣವನ್ನು ಸಮಗ್ರವಾಗಿ ಪರಿಶೀಲಿಸಬೇಕಿದೆ. ಈ ಕ್ರಮ ಕೈಗೊಳ್ಳದೆ ಹೋದರೆ ಇದು ಅನೇಕ ಅಪರಾಧಿಗಳನ್ನು ರಕ್ಷಿಸುತ್ತಲೇ ಇರುತ್ತದೆ, ನೈಜ ಅಪರಾಧಿಗಳು ತೆರೆಮರೆಯಲ್ಲಿದ್ದುಕೊಂಡು ಮರಳು ಲೂಟಿಯನ್ನು ಅವ್ಯಾಹತವಾಗಿ ಮುಂದುವರೆಸುತ್ತಾರೆ.
ಲೂಟಿ ಮಾಡಲಾಗುವ ಪ್ರತಿಯೊಂದು ಮರಳಿನ ಕಣವೂ ವಿಶ್ವಾಸ ಕಳೆದುಕೊಳ್ಳುವುದಕ್ಕೆ ಸಾಕ್ಷಿಯಾಗುತ್ತದೆ. ಉಳ್ಳಾಲದ ಜನರು ಮತ್ತು ಕರ್ನಾಟಕದ ಜನತೆ ನ್ಯಾಯ ಮತ್ತು ಸತ್ಯವನ್ನು ಅಪೇಕ್ಷಿಸುತ್ತಿದ್ದಾರೆ.

Comments
Post a Comment