ಕರ್ನಾಟಕವಿಂದು ಬುಡಬುಡಿಕೆದಾಸರ ಸಂತೆಯಾಗಿದೆಯೇ?
ಒಣ ಮಾತುಗಳು ಸೋಂಕು ರೋಗದ ಹಾಗೆ ವ್ಯಾಪಿಸುತ್ತದೆ. ಕರ್ನಾಟಕದ ರಾಜಕೀಯ ವಲಯದಲ್ಲಿ ಒಂದು ಹೊಸ ವ್ಯಾಧಿ ಆಳವಾಗಿ ಬೇರೂರುತ್ತಿದೆ. ಇದನ್ನು ಅನಗತ್ಯವಾದ ಮಾತಿನ ವ್ಯಸನ ಎಂದೂ ಕರೆಯಬಹುದು. ಈ ವಾತಾವರಣದಲ್ಲಿ ರಾಜಕಾರಣಿಗಳು, ಪಕ್ಷಾತೀತವಾಗಿ ತಮ್ಮ ಸ್ಥಾನಮಾನಗಳನ್ನೂ ಲೆಕ್ಕಿಸದೆ, ಪ್ರಸ್ತುತತೆಯನ್ನೂ ಪರಿಗಣಿಸದೆ ಬಡಬಡಿಸುವ ಅಭ್ಯಾಸ ಮಾಡಿಕೊಂಡಿದ್ದಾರೆ. ಯಾವುದೇ ಸಮಯದಲ್ಲಾದರೂ ಯಾವುದೋ ವಿಷಯದ ಬಗ್ಗೆ ಮಾತನಾಡುವ ಈ ನಾಯಕರ ಮಾತುಗಳಿಂದ ಯಾವ ಪರಿಣಾಮಗಳೂ ಉಂಟಾಗುವುದಿಲ್ಲ. ಮುಖ್ಯವಾದ ವಿಷಯಗಳನ್ನು ಕುರಿತ ಪತ್ರಿಕಾ ಹೇಳಿಕೆಯಾಗಿ ಆರಂಭವಾಗುವ ಈ ಮಾತುಗಳು ಅಂತ್ಯವಿಲ್ಲದ ವಿರೋಧಿ ಹೇಳಿಕೆಗಳಾಗಿ ಅಥವಾ ರಾಜಕೀಯ ನಾಯಕರ ವ್ಯಾಪ್ತಿಯನ್ನೂ ಮೀರಿ, ಅವರ ಅರ್ಹತೆಯನ್ನೂ ಮೀರಿ ವಿಸ್ತರಿಸುತ್ತದೆ. ಸಾರ್ವಜನಿಕ ಮೂಲ ಸೌಕರ್ಯಗಳನ್ನು ಕುರಿತು ಮಾತನಾಡಬೇಕಾದ ಒಬ್ಬ ನಾಯಕ ಭೌಗೋಳಿಕ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ವಿಧಾನಸಭೆಯಲ್ಲಿ ಎಂದೂ ಕಾಣಿಸಿಕೊಳ್ಳದ, ದನಿ ಎತ್ತದ ಪುಢಾರಿಗಳು ಹಠಾತ್ತನೆ ಸದನದ ಹೊರಗೆ ರಾಷ್ಟ್ರೀಯ ನೈತಿಕತೆಯ ವಕ್ತಾರರಾಗಿ ಮಾತನಾಡತೊಡಗುತ್ತಾರೆ. ಅನೇಕ ಪ್ರಸಂಗಗಳಲ್ಲಿ ಈ ಹೇಳಿಕೆಗಳಲ್ಲಿ ಹುರುಳಿರುವುದಿಲ್ಲ, ಸ್ಪಷ್ಟತೆ ಅಥವಾ ಪರಿಹಾರಗಳೂ ಇರುವುದಿಲ್ಲ. ಉತ್ತರದಾಯಿತ್ವವಂತೂ ಸುತಾರಾಂ ಇರುವುದಿಲ್ಲ. ಕೇವಲ ಪ್ರಚಾರದಲ್ಲಿರಲು ಈ ಹೇಳಿಕೆಗಳು ನೆರವಾಗುತ್ತವೆ. ಇದು ಕೇವಲ ಆಕ್ಷೇಪವಲ್ಲ. ರಾಜಕೀಯ ಸಂಸ್ಕøತಿಯಲ್ಲಿರುವ ಒಂದು ರಚನಾತ್ಮಕ ಸಮಸ್ಯೆ...