ಧರ್ಮಸ್ಥಳ ಪ್ರಕರಣಗಳು: ವಿಳಂಬವಾದರೂ ನ್ಯಾಯ ದೊರೆಯುವುದೇ?

 ಹೈಕೋರ್ಟಿನ ಮಧ್ಯಪ್ರವೇಶದಿಂದ ಇದು 74 ಸಾವುಗಳ ವಿಚಾರದಲ್ಲಿ ಕೋರ್ಟ್ ಅಧೀನದ ತನಿಖೆಯಾಗುವ ಸಾಧ್ಯತೆ ಇದೆ. ಇದು ನಾಗರಿಕ ಸಮಾಜದ ಬೇಡಿಕೆಯೂ ಆಗಿತ್ತು.

................

ಪ್ರಚಲಿತ * ಬಿವಿಸೀ

ಕರ್ನಾಟಕ ಹೈಕೋರ್ಟ್ ಧರ್ಮಸ್ಥಳದಲ್ಲಿ ನಡೆದಿರುವ 74 ಅಸಹಜ ಸಾವುಗಳ ಬಗ್ಗೆ ಸಮಗ್ರ ವರದಿಯನ್ನು ನೇರವಾಗಿಯೇ ಕೇಳಿರುವುದು, ಇಡೀ ವಿವಾದದಲ್ಲಿ ನಿರ್ಣಾಯಕ ಬೆಳವಣಿಗೆಯಾಗಿದ್ದು, ದಶಕಗಳಿಂದ ಊಹಾಪೆÇೀಹಗಳು, ಗುಮಾನಿಗಳು, ಆರೋಪಗಳು ಮತ್ತು ಉತ್ತರಕಾಣದ ಪ್ರಶ್ನೆಗಳಿಂದ ಕೂಡಿದ್ದ ಘಟನೆಗಳಿಗೆ ಹೊಸ ಆಯಾಮ ಕಲ್ಪಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಭಕ್ರು ನೇತೃತ್ವದ ವಿಭಾಗೀಯ ಪೀಠವು ಪರಿಣಾಮಕಾರಿ ನಿರ್ಧಾರವನ್ನು ಕೈಗೊಂಡಿದ್ದು, ಈ ವಿಷಯವು ಇನ್ನು ಪೆÇ್ರಸೀಜರ್ ಹೆಸರಿನಲ್ಲಿ ವಿಳಂಬ ಎದುರಿಸುವಂತಿಲ್ಲ, ಆಯ್ಕೆಯನುಸಾರ ತನಿಖೆ ಮಾಡುವುದಾಗಲೀ, ಸಾಂಸ್ಥಿಕ ಮೌನವನ್ನಾಗಲೀ ಸಹಿಸಲಾಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದು, ಇದು ಉತ್ತಮ ಬೆಳವಣಿಗೆಯಾಗಿದೆ.

ಕರ್ನಾಟಕದ ಸಾರ್ವಜನಿಕ ಪ್ರಜ್ಞೆಯನ್ನೇ ಕದಡಿದ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣದಲ್ಲಿ ಬಲಿಯಾದ ಸೌಜನ್ಯಾಳ ತಾಯಿ ಕುಸುಮಾವತಿ ಸಲ್ಲಿಸಿರುವ ಅರ್ಜಿಯು, ಈವರೆಗೂ ವಾಸಿಯಾಗದೆ ಉಳಿದಿರುವ ಗಾಯವನ್ನು ಮತ್ತೊಮ್ಮೆ ತೆರೆದಿದೆ. ಹೈಕೋರ್ಟಿನ ಈ ತೀರ್ಮಾನದಿಂದ ರಾಜ್ಯ ಸರ್ಕಾರವೇ ಪ್ರಕ್ರಿಯೆಯ ಒಂದು ಭಾಗವಾಗಲಿದೆ. ಉತ್ತರದಾಯಿತ್ವವನ್ನು ಮತ್ತೊಬ್ಬರ ಮೇಲೆ ಹೊರಿಸುವುದಾಗಲೀ ದಿಕ್ಕು ತಪ್ಪಿಸುವುದಾಗಲೀ ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೋರ್ಟ್ ನೀಡಿದೆ.

ಹಲವು ವರ್ಷಗಳ ಕಾಲ ವಿಶ್ಲೇಷಕರು `ಧರ್ಮಸ್ಥಳದ ಗಣರಾಜ್ಯ'ವು ಪ್ರಭಾವಶಾಲಿಯಾದ ಹಾಗೂ ಆರ್ಥಿಕವಾಗಿ ಬಲಿಷ್ಠವಾದ ಒಂದು ಜಾಲದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳುತ್ತಲೇ ಬಂದಿದ್ದು, ಇದನ್ನು ಡಿ-ಗ್ಯಾಂಗ್ ಎಂದು ಗುರುತಿಸಲಾಗುತ್ತಿದೆ. ತನಿಖಾಧಿಕಾರಿಗಳನ್ನು ಒತ್ತಡಕ್ಕೆ ಸಿಲುಕಿಸಿರುವುದು, ಸಾಕ್ಷಿಗಳಿಗೆ ಬೆದರಿಕೆ ಒಡ್ಡಿರುವುದು, ದೂರುಗಳನ್ನು ಸಡಿಲಗೊಳಿಸಿರುವುದು ಸಾರ್ವಜನಿಕ ಚರ್ಚೆಯಲ್ಲಿ ವ್ಯಾಪಕವಾಗಿ ಕಂಡುಬಂದಿದ್ದು ಇದಕ್ಕೆ ಯಾವುದೇ ಸಂಸ್ಥೆಯಿಂದ ನಿರಾಕರಿಸುವ ಪ್ರತಿಕ್ರಿಯೆಯೂ ವ್ಯಕ್ತವಾಗಿಲ್ಲ.

ವಿಶೇಷ ತನಿಖಾ ದಳದ ಪಾತ್ರವೇ ಸಾರ್ವಜನಿಕರ ತಪಾಸಣೆಗೊಳಗಾಗಿದೆ. ನಾಗರಿಕರಲ್ಲಿ, ಸಂತ್ರಸ್ತರಲ್ಲಿ ವಿಶ್ವಾಸ ಮೂಡಿಸುವ ಬದಲು ಅದರ ಪಕ್ಷಪಾತಪೂರ್ಣ ಕಾರ್ಯಾಚರಣೆ ಮಹಿಳಾ ಸಂಘಟನೆಗಳಿಂದ ತೀವ್ರ ಆಕ್ಷೇಪಗಳಿಗೆ ಒಳಗಾಗಿದೆ. ನಾಗರಿಕ ಹಕ್ಕುಗಳ ಸಂಘಟನೆಗಳು ಮಾಹಿತಿದಾರರನ್ನು ಗುರಿ ಮಾಡುವ ತನಿಖಾ ತಂಡದ ಧೋರಣೆಯನ್ನೇ ಪ್ರಶ್ನಿಸುತ್ತಿದ್ದಾರೆ. ಅಸಹಜ ಸಾವುಗಳ ಹಿಂದಿನ ಸತ್ಯಾಸತ್ಯತೆಯನ್ನು ಶೋಧಿಸುವ ಬದಲು ದೂರುದಾರರನ್ನೇ ಅಪರಾಧಿಗಳನ್ನಾಗಿ ಮಾಡಿದ ವರ್ತನೆಯನ್ನು ಖಂಡಿಸಿದ್ದಾರೆ. ಎಸ್‍ಐಟಿಯನ್ನು ರದ್ದುಪಡಿಸುವ ಆಗ್ರಹಗಳು ಗಂಭೀರ ಸ್ವರೂಪದ್ದಾಗಿದ್ದು, ನಾಗರಿಕರಲ್ಲಿ ನ್ಯಾಯದಾನದ ವ್ಯವಸ್ಥಿತ ವಿಳಂಬದ ಬಗ್ಗೆ ಜುಗುಪ್ಸೆ ಮೂಡಿರುವುದನ್ನು ಸೂಚಿಸುತ್ತದೆ.

ಅಷ್ಟೇ ಸಮಸ್ಯಾತ್ಮಕವಾಗಿರುವುದು ಸರ್ಕಾರದ ಕೆಲವು ವಲಯಗಳಿಂದ ವ್ಯಕ್ತವಾಗಿರುವ ರಾಜಕೀಯ ಅಭಿಪ್ರಾಯಗಳು. ಪ್ರಭಾವಶಾಲಿ ಸಚಿವರ ಹೇಳಿಕೆಗಳಲ್ಲಿ ಪ್ರಬಲ ವರ್ಗಗಳ, ಸ್ಥಳೀಯ ಡಿ-ಗ್ಯಾಂಗ್ ಹಿತಾಸಕ್ತಿಗಳ ಬಗ್ಗೆ ಅನುಕಂಪ ವ್ಯಕ್ತವಾಗಿರುವುದು ಜನರಲ್ಲಿ ಆತಂಕ ಮೂಡಿಸಿದ್ದು ನ್ಯಾಯ ಶೋಧನೆಗಿಂತಲೂ ರಾಜಕೀಯ ಸ್ವಾರ್ಥವೇ ಮೇಲುಗೈ ಸಾಧಿಸಿದಂತೆ ತೋರುತ್ತಿದೆ.

ಹೈಕೋರ್ಟ್ ಮಧ್ಯಪ್ರವೇಶವು ನ್ಯಾಯಾಂಗದ ಮೇಲ್ವಿಚಾರಣೆಯನ್ನೂ ಮೀರಿದ ಒಂದು ನಡೆಯಾಗಿದೆ. ಸಂತ್ರಸ್ತ ಕುಟುಂಬಗಳಿಗೆ ಸಂಸ್ಥೆಗಳ ಮೇಲೆ ಇದ್ದಂತಹ ವಿಶ್ವಾಸವನ್ನು ಕಾಪಾಡುವ ನಿಟ್ಟಿನಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದ್ದು, ಸಂತ್ರಸ್ತರು ಅನಾಥ ಭಾವನೆಯಿಂದ ಹೊರಬರಲು ಸಾಧ್ಯವಾಗುತ್ತದೆ. ನ್ಯಾಯಾಂಗ ವಿಚಾರಣೆ ಈ ಸಾವುಗಳಿಗೆ ಕಾರಣರಾದ ಪ್ರಬಲ ಶಕ್ತಿಗಳಿಗೆ ಇದ್ದಂತಹ ರಕ್ಷಾ ಕವಚವನ್ನು ಭಗ್ನಗೊಳಿಸುವ ಸೂಚನೆಯನ್ನೂ ನೀಡುತ್ತದೆ.

ಗಂಭೀರವಾಗಿ ಪ್ರಕರಣಗಳನ್ನು ಶೋಧಿಸಿದರೆ, ನ್ಯಾಯಾಂಗ ಮೇಲ್ವಿಚಾರಣೆಯ ಕಾರ್ಯಾಚರಣೆ ಅಹಿತಕರ ಸತ್ಯಾಂಶಗಳನ್ನು ಹೊರಗೆಳೆಯಲಿದ್ದು, ಹಲವು ವರ್ಷಗಳಿಂದ ಕಾಣದಾಗಿದ್ದ ಉತ್ತರದಾಯಿತ್ವಕ್ಕೆ ಮರುಜನ್ಮ ನೀಡುತ್ತದೆ. ಸ್ಪಷ್ಟವಾದ ಸಂದೇಶ ಎಂದರೆ, ಯಾವುದೇ ದೇವಾಲಯವಾಗಲೀ, ಬಲಿಷ್ಠ ಅಧಿಕಾರ ಕೇಂದ್ರವಾಗಲೀ, ರಾಜಕೀಯ ಮೈತ್ರಿಯಾಗಲೀ, ಕಾನೂನಿನ ವ್ಯಾಪ್ತಿಯಿಂದ ಮುಕ್ತವಾಗಲು ಸಾಧ್ಯವಿಲ್ಲ.

ಮೌನವಾಗಿ ನ್ಯಾಯದ ನಿರೀಕ್ಷೆಯಲ್ಲಿರುವ ಕುಟುಂಬಗಳಿಗೆ ಇದು ಅಂತಿಮ ನಿರ್ಣಾಯಕ ಘಟ್ಟವಾಗಿದ್ದು, ನ್ಯಾಯ ವ್ಯವಸ್ಥೆ ಮಾತನಾಡುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again