ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡನೆ: ರಾಜಕೀಯ ಲೆಕ್ಕಾಚಾರ ಉಲ್ಟಾ ಹೊಡೆದಿದ್ದೇಕೆ ?
ಪ್ರಚಲಿತ * ಬಿವಿಸೀ ನರೇಂದ್ರ ಮೋದಿ ಸರ್ಕಾರವು ರಾಹುಲ್ ಗಾಂಧಿ ವಿರುದ್ಧ ಉದ್ದೇಶಿತ ಹಕ್ಕುಚ್ಯುತಿ ನಿರ್ಣಯದಿಂದ ಹಿಂದೆ ಸರಿದಿರುವುದು ಕೇವಲ ಸೌಜನ್ಯದ ಕಾರಣಕ್ಕಲ್ಲ, ಬದಲಾಗಿ ಬದಲಾದ ರಾಜಕೀಯ ಪರಿಸ್ಥಿತಿಯ ಒತ್ತಡದಿಂದ ಎಂಬುದು ಸ್ಪಷ್ಟವಾಗಿದೆ. ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭಾರತದ ಒಪ್ಪಂದಗಳು ದೇಶದ ಹಿತಾಸಕ್ತಿಗೆ ಧಕ್ಕೆ ತರುತ್ತಿವೆ ಎಂದು ಸಂಸತ್ತಿನಲ್ಲಿ ರಾಹುಲ್ ಮಾಡಿದ ಗಂಭೀರ ಆರೋಪಗಳು ಕೇವಲ ವಿರೋಧ ಪಕ್ಷದ ಸಾಮಾನ್ಯ ಟೀಕೆಯಾಗಿ ಉಳಿಯದೆ, ಸಾರ್ವಜನಿಕರಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವೊದಗಿಸಿವೆ. ಅವರು ಈ ವಿಷಯವನ್ನು ಅತ್ಯಂತ ಭಾವನಾತ್ಮಕವಾಗಿ ಮತ್ತು ಅಷ್ಟೇ ದೃಢವಾಗಿ ಮಂಡಿಸಿದ್ದು, ಸಾಮಾನ್ಯ ಜನರ ಮನಸ್ಸಿನಲ್ಲಿ ಮೂಡಿದ್ದ ಆತಂಕಗಳನ್ನೇ ಪ್ರತಿಧ್ವನಿಸಿದಂತೆ ಭಾಸವಾಯಿತು. ಅನಿಶ್ಚಿತ ಮತ್ತು ವ್ಯವಹಾರಿಕ ಮನೋಭಾವದ ನಾಯಕರೊಂದಿಗೆ ನಡೆಯುವ ಪಾರದರ್ಶಕವಲ್ಲದ ಒಪ್ಪಂದಗಳು ಭಾರತಕ್ಕೆ ಅಪಾಯ ತರಬಹುದು ಎಂಬ ಅವರ ಮಾತುಗಳು ಜನರಿಗೆ ತಲುಪಿದವು. ಕಳೆದ ಹಲವು ವರ್ಷಗಳಿಂದ ಮೋದಿ ಸರ್ಕಾರವು `ಆತ್ಮನಿರ್ಭರತೆ'ಯನ್ನು ಸಾರ್ವಭೌಮತ್ವ ಮತ್ತು ಆಯಕಟ್ಟಿನ ಸ್ವಾತಂತ್ರ್ಯದ ಸಂಕೇತವಾಗಿ ಬಿಂಬಿಸುತ್ತಾ ಬಂದಿದೆ. ಇಂತಹ ಸನ್ನಿವೇಶದಲ್ಲಿ, ವ್ಯಾಪಾರ ಒಪ್ಪಂದಗಳ ವಿಷಯದಲ್ಲಿ ಭಾರತವು ಪರಕೀಯ ಒತ್ತಡಕ್ಕೆ ಮಣಿಯುತ್ತಿದೆ ಎಂಬ ಸಣ್ಣ ಸಂಶಯವೂ ರಾಜಕೀಯವಾಗಿ ಸರ್ಕಾರಕ್ಕೆ ಮುಜುಗರ ತರುವಂಥದ್ದಾಗಿತ್ತು. ರಾಹುಲ್ ಗಾಂಧಿ ಈ ಸಂಶಯವನ್ನೇ ಒಂದು ನೇರ ರಾ...