ಕರ್ನಾಟಕದ ಅಧಿಕಾರ ಯಾರೊಬ್ಬರ ವಂಶಪಾರಂಪರ್ಯ ಬಳುವಳಿಯಲ್ಲ

 ಅಹುದಾದರಹುದೆನ್ನಿ* ಬಿವಿಸೀ

ಕರ್ನಾಟಕದ ರಾಜಕಾರಣವು ಇಂದು ಒಂದು ಕುತೂಹಲಕಾರಿ ಮತ್ತು ಸಂಕೀರ್ಣವಾದ ಘಟ್ಟಕ್ಕೆ ಬಂದು ತಲುಪಿದೆ. ರಾಜ್ಯದ ಇಬ್ಬರು ಹಿರಿಯ ನಾಯಕರು ಇಂದು ಆಡಳಿತದ ಸುಧಾರಣೆಗಿಂತಲೂ ಹೆಚ್ಚಾಗಿ, ತಮ್ಮ ಕುಟುಂಬಗಳ ರಾಜಕೀಯ ಭವಿಷ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವಂತೆ ಮೇಲ್ನೋಟಕ್ಕೆ ಭಾಸವಾಗುತ್ತಿದೆ. ತಮ್ಮ ಸುದೀರ್ಘ ಸಾರ್ವಜನಿಕ ಮತ್ತು ರಾಜಕೀಯ ಜೀವನದ ಅಂತಿಮ ಹಂತದಲ್ಲಿರುವ ಎಚ್ ಡಿ ದೇವೇಗೌಡ ಮತ್ತು ಬಿ ಎಸ್ ಯಡಿಯೂರಪ್ಪ ಅವರು ಇಂದು ಒಂದು ಸಾಮಾನ್ಯ ಉದ್ದೇಶಕ್ಕಾಗಿ ಒಂದಾದಂತೆ ಕಾಣುತ್ತಿದ್ದಾರೆ. ಅದುವೇ ತಮ್ಮ ಪುತ್ರರನ್ನು ಮುಖ್ಯಮಂತ್ರಿ ಗಾದಿಯ ಮೇಲೆ ಕೂರಿಸುವ ಹಂಬಲ. ಈ ಬೆಳವಣಿಗೆಯು ಪ್ರಜಾಪ್ರಭುತ್ವದ ಆಶಯಗಳಿಗೆ ಸವಾಲೊಡ್ಡುತ್ತಿದೆ.

ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಆ ಮೂಲಕ ಎಚ್ ಡಿ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಪ್ರತಿಷ್ಠಾಪಿಸುವ ದೇವೇಗೌಡರ ತಂತ್ರಗಾರಿಕೆಯು ಒಂದು ನೇರವಾದ ಪ್ರಶ್ನೆಯನ್ನು ಸಮಾಜದ ಮುಂದೆ ಇಡುತ್ತದೆ. ಹಲವಾರು ಸಮರ್ಥ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಹೊಂದಿರುವ ರಾಷ್ಟ್ರೀಯ ಪಕ್ಷವೊಂದು, ತನಗಿಂತ ಕಡಿಮೆ ಸಂಖ್ಯಾಬಲವಿರುವ ಪ್ರಾದೇಶಿಕ ಪಕ್ಷಕ್ಕೆ ನಾಯಕತ್ವವನ್ನು ಬಿಟ್ಟುಕೊಡುವುದೇ? 

ಇದೇ ರೀತಿಯ ಮತ್ತೊಂದು ಚಿತ್ರಣವನ್ನು ನಾವು ಬಿಜೆಪಿಯಲ್ಲೂ ಸ್ಪಷ್ಟವಾಗಿ ಗಮನಿಸಬಹುದು. ಆರಂಬಿಕ ಹಂತದಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಉತ್ತರಾಧಿಕಾರಿಯಾಗಿ ಬಿಂಬಿಸುತ್ತಿರುವುದು, ಬಿಜೆಪಿ ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬಂದಿರುವ `ವಂಶಪಾರಂಪರ್ಯ ರಾಜಕಾರಣದ ವಿರೋಧ'ದ ನಿಲುವನ್ನು ಪ್ರಶ್ನಿಸುವಂತೆ ಮಾಡಿದೆ. ಒಂದು ವೇಳೆ ಮುಂದಿನ ಚುನಾವಣೆಯ ನಂತರದ ನಾಯಕತ್ವವು ಶಾಸಕರ ಸಾಮೂಹಿಕ ಒಮ್ಮತಕ್ಕಿಂತ ಹೆಚ್ಚಾಗಿ, ಕುಟುಂಬದ ಹಿರಿಯರ ಒತ್ತಾಸೆಯ ಮೇಲೆ ನಿರ್ಧಾರವಾಗುವುದಾದರೆ, ಆಗ ರಾಜಕೀಯ ಪಕ್ಷಗಳ ಸಿದ್ಧಾಂತಗಳ ನಡುವಿನ ವ್ಯತ್ಯಾಸವೇ ಮರೆಯಾಗಿ ಹೋಗುತ್ತದೆ.

ಇಲ್ಲಿನ ಮೂಲಭೂತ ಆತಂಕವೆಂದರೆ, ರಾಜ್ಯದ ಅತ್ಯುನ್ನತ ಅಧಿಕಾರವು ಕೇವಲ ಒಂದು ಕುಟುಂಬದ ಆಸ್ತಿಯಾಗಿ ಅಥವಾ ಬಳುವಳಿಯಾಗಿ ಮಾರ್ಪಾಡಾಗುತ್ತಿದೆಯೇ ಎಂಬುದು. ಚುನಾಯಿತ ಶಾಸಕರು ತಮ್ಮ ನಾಯಕನನ್ನು ಮುಕ್ತವಾಗಿ ಆಯ್ಕೆ ಮಾಡುವ ಸ್ವಾತಂತ್ರ್ಯ ಹೊಂದಿದ್ದಾರೆಯೇ? ಅಥವಾ ಕೇವಲ ನಿಷ್ಠೆ ಮತ್ತು ಪರಂಪರೆಯ ಹೆಸರಿನಲ್ಲಿ ಹೇರಲಾದ ಕುಟುಂಬದ ಹಕ್ಕುಗಳನ್ನು ಒಪ್ಪಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆಯೇ ಎಂಬುದು ಇಂದಿನ ಜ್ವಲಂತ ಪ್ರಶ್ನೆಯಾಗಿದೆ.

ಕರ್ನಾಟಕವು ಯಾವುದೇ ಒಂದು ಅಥವಾ ಎರಡು ಕುಟುಂಬಗಳ ಎಸ್ಟೇಟ್ ಅಲ್ಲ. ಇದು ಸುಮಾರು ಏಳು ಕೋಟಿಗೂ ಅಧಿಕ ಸ್ವಾಭಿಮಾನಿ ನಾಗರಿಕರನ್ನು ಹೊಂದಿರುವ ಒಂದು ಬಲಿಷ್ಠ ಪ್ರಜಾಪ್ರಭುತ್ವ ರಾಜ್ಯ. ರಾಜ್ಯದ ಮುಂದಿನ ಮುಖ್ಯಮಂತ್ರಿಯು ಕೇವಲ `ಧೃತರಾಷ್ಟ್ರ'ನಂತಹ ಪುತ್ರ ವ್ಯಾಮೋಹದಿಂದ ಅಥವಾ ರಾಜಕೀಯ ಹೊಂದಾಣಿಕೆಗಳಿಂದ ಹೊರಬರಬಾರದು. ಬದಲಾಗಿ, ಅವರು ತಮ್ಮ ವಿಶ್ವಾಸಾರ್ಹತೆ, ಆಡಳಿತಾತ್ಮಕ ಸಾಮಥ್ರ್ಯ ಮತ್ತು ಜನರ ಸಾಮೂಹಿಕ ಜನಾದೇಶದ ಮೂಲಕ ಅಧಿಕಾರಕ್ಕೆ ಬರಬೇಕು. ಮತದಾರರು ಅಂತಿಮವಾಗಿ ಚುನಾವಣಾ ಅಂಕಿ-ಅಂಶಗಳನ್ನು ನಿರ್ಧರಿಸಬಹುದು, ಆದರೆ ರಾಜಕೀಯ ಪಕ್ಷಗಳು ಅದಕ್ಕಿಂತಲೂ ಮಿಗಿಲಾದ ಒಂದು ಗಂಭೀರ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ. ಅವರು ನಿಜವಾದ ಸಾಂಸ್ಥಿಕ ಪ್ರಜಾಪ್ರಭುತ್ವವನ್ನು ಗೌರವಿಸುತ್ತಾರೆಯೇ ಅಥವಾ ಉತ್ತರಾಧಿಕಾರಿಗಳ ಗುಪ್ತ ಪಟ್ಟಾಭಿಷೇಕಕ್ಕೆ ದಾರಿ ಮಾಡಿಕೊಡುತ್ತಾರೆಯೇ ಎಂಬುದು ಕಾದು ನೋಡಬೇಕಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again