ಗಡಿಗಳ ಒಳಗೆ ವಾಸಿಸುವವರ ದಾಖಲೆ ಸರ್ಕಾರದ ಬಳಿಯೇ ಇಲ್ಲವೇ?
ವಲಸಿಗರನ್ನು ಗುರುತಿಸಲಾಗದ ನಿಷ್ಕ್ರಿಯತೆಯನ್ನು ಯಾವ ಪ್ರಜಾಪ್ರಭುತ್ವವೂ ಸಹಿಸಲಾಗುವುದಿಲ್ಲ
....................
ಆಂತರಿಕ ಭದ್ರತೆ * ಬಿವಿಸೀ
ಸಾಮಾನ್ಯವಾಗಿ ಸರ್ಕಾರಗಳು ನುಣುಚಿಕೊಳ್ಳಲು ಬಯಸುವ ವಿಷಯವೊಂದನ್ನು ಕರ್ನಾಟಕದ ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ಸಾರ್ವಜನಿಕ ಚರ್ಚೆಗೆ ಒಳಪಡಿಸಿದೆ. ರಾಜ್ಯದಲ್ಲಿರುವ ಬಾಂಗ್ಲಾದೇಶಿ ಅಕ್ರಮ ವಲಸಿಗರ ಬಗ್ಗೆ ವಿಚಾರಣೆ ನಡೆಸುವ ಸಂದರ್ಭದಲ್ಲಿ, ನ್ಯಾಯಮೂರ್ತಿಗಳು ಬೆಂಗಳೂರು ಒಂದರಲ್ಲೇ 20 ಲಕ್ಷ ಅಕ್ರಮ ವಲಸಿಗರು ಇರಬಹುದು, ಇದು ಒಟ್ಟು ಜನಸಂಖ್ಯೆಯ ಶೇಕಡಾ 15ರಷ್ಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಅಂಕಿ ಅಂಶಗಳು ನಿಖರವೋ ಅಲ್ಲವೋ ಎನ್ನುವುದಕ್ಕಿಂತಲೂ ಕಳಕಳಿಯ ವಾಸ್ತವಾಂಶವೆಂದರೆ ರಾಜ್ಯವಾಗಲೀ ಕೇಂದ್ರ ಸರ್ಕಾರವಾಗಲೀ, ಅಧಿಕೃತವಾಗಿ ಎಷ್ಟು ವಿದೇಶೀಯರು ದಾಖಲೆಗಳಿಲ್ಲದೆ ದೇಶದಲ್ಲಿದ್ದಾರೆ ಎಂದು ದಾಖಲೆಗಳ ಸಮೇತ ನೀಡಲು ಸಾಧ್ಯವಾಗಿಲ್ಲ.
ವಲಸಿಗರ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಇಲ್ಲದಿರುವುದು ಆಳ್ವಿಕೆಯ ವೈಫಲ್ಯವಾಗಿದೆ. ಸಾರ್ವಭೌಮ ದೇಶವೊಂದು ತನ್ನ ಗಡಿಗಳ ಒಳಗೆ ಯಾರು ವಾಸಿಸುತ್ತಾರೆ ಎಂಬ ಮಾಹಿತಿ ಹೊಂದಿರದಿದ್ದರೆ ಅದು ಮೂಲಭೂತ ಜವಾಬ್ದಾರಿಯಿಂದ ನುಣುಚಿಕೊಂಡಂತಾಗುತ್ತದೆ. ಅಂದಾಜುಗಳು ಮುಕ್ತವಾಗಿ ಹರಿದಾಡುತ್ತವೆ. ಎನ್ಜಿಒಗಳು ಬಾಂಗ್ಲಾದೇಶದ ಅಕ್ರಮ ವಲಸಿಗರು ಕೋಟ್ಯಂತರ ಇರುವುದಾಗಿ ಹೇಳುತ್ತವೆ. ಆದರೆ ಸರ್ಕಾರಗಳು ಮೌನವಾಗಿರುತ್ತವೆ, ಇಲ್ಲವಾದರೆ ಉತ್ತರ ನೀಡದೆ ನುಣುಚಿಕೊಳ್ಳುತ್ತವೆ, ಆಯ್ದ ಸಂದರ್ಭಗಳಲ್ಲಿ ಪ್ರತಿಕ್ರಿಯಿಸುತ್ತವೆ.
ದೇಶದ ಗಡಿಯಲ್ಲಿ ಪ್ರವೇಶದ ಜಾಗಗಳು ಸ್ಪಷ್ಟವಾಗಿವೆ. ಭಾರತದ ಪೂರ್ವದಲ್ಲಿರುವ ಬಾಂಗ್ಲಾದೇಶದ ಗಡಿ ದೀರ್ಘವಾಗಿದೆ. ಇಲ್ಲಿ ನುಸುಳುಕೋರರನ್ನು ಗುರುತಿಸುವುದು ಪೆÇಲೀಸರಿಗೆ ಕಷ್ಟವಾಗುತ್ತದೆ. ಒಮ್ಮೆ ಒಳಗೆ ಬಂದ ಮೇಲೆ ದಾಖಲೆಗಳಿಲ್ಲದ ವಲಸಿಗರು ದೇಶದ ವಿವಿಧ ರಾಜ್ಯಗಳಿಗೆ ಚದುರಿಹೋಗುತ್ತಾರೆ. ಬೆಂಗಳೂರಿನಂತಹ ನಗರ ಪ್ರದೇಶಗಳನ್ನು ಪ್ರವೇಶಿಸಿ, ಅನೌಪಚಾರಿಕ ಕಾರ್ಮಿಕರ ಬೇಡಿಕೆ ಜಾಸ್ತಿ ಇರುವುದರಿಂದ ಅಲ್ಲಿ ದುಡಿಮೆ ಆರಂಭಿಸುತ್ತಾರೆ. ಕಟ್ಟಡ ನಿರ್ಮಾಣ ನಿವೇಶನಗಳು, ರಸ್ತೆ ನಿರ್ಮಾಣ ಯೋಜನೆಗಳು, ಒಳಚರಂಡಿ ಕಾಮಗಾರಿಗಳು ಈ ಕಾರ್ಮಿಕರನ್ನು ಸೆಳೆಯುತ್ತವೆ. ಇದು ಸ್ಥಳೀಯ ಅಧಿಕಾರಿಗಳ ಮತ್ತು ಉದ್ಯೋಗದಾತರ ಸಮ್ಮತಿಯೊಂದಿಗೇ ಸಾಧ್ಯವಾಗುತ್ತದೆ. ಗುರುತಿನ ಚೀಟಿಗಳನ್ನು ಬಹಳ ಸುಲಭವಾಗಿ ಪಡೆಯಲಾಗುತ್ತದೆ. ನಕಲಿ ದಾಖಲೆಗಳನ್ನೂ ಸೃಷ್ಟಿಸಲಾಗುತ್ತದೆ. ಕೆಲವೊಮ್ಮೆ ಭ್ರಷ್ಟ ಮಾರ್ಗಗಳನ್ನು ಅನುಸರಿಸಿ ಅಧಿಕೃತವಾಗಿಯೂ ಪಡೆಯಲಾಗುತ್ತದೆ.
ಇದರ ರಾಜಕೀಯ ಆಯಾಮವನ್ನು ಅಲ್ಲಗಳೆಯಲಾಗುವುದಿಲ್ಲ. ಪಶ್ಚಿಮ ಬಂಗಾಲ ಅಕ್ರಮ ವಲಸಿಗರಿಗೆ ಕುರುಡಾಗಿದೆ ಎನ್ನುವ ಆರೋಪ ಬಹಳ ವರ್ಷಗಳಿಂದಲೂ ಇದೆ. ಆದರೆ ಜವಾಬ್ದಾರಿ ಇಲ್ಲಿಗೇ ಕೊನೆಯಾಗುವುದಿಲ್ಲ. ಪ್ರತಿಯೊಂದು ರಾಜ್ಯವೂ ದಾಖಲೆರಹಿತ ವಲಸಿಗರಲ್ಲಿ ಪಾಲು ಹೊಂದಿದೆ. ಪ್ರತಿಯೊಂದು ಸರ್ಕಾರವೂ, ರಾಜ್ಯ ಮತ್ತು ಕೇಂದ್ರದಲ್ಲಿ, ಸಂಯೋಜಿತ ಪ್ರತಿಕ್ರಿಯೆಯನ್ನು ನೀಡಲು ಹಿಂಜರಿಯುತ್ತವೆ. ರಾಷ್ಟ್ರೀಯ ಭದ್ರತೆ, ಸವಲತ್ತುಗಳ ಸೋರಿಕೆ, ಜನಸಂಖ್ಯೆಯ ಒತ್ತಡ ಇವೆಲ್ಲವನ್ನೂ ಸಹ ಆಗಾಗ್ಗೆ ಚರ್ಚೆಗೊಳಪಡಿಸಲಾಗುತ್ತದೆ. ಆದರೆ ಚುನಾವಣಾ ಲೆಕ್ಕಾಚಾರಗಳಲ್ಲಿ ಮುಳುಗಿಹೋಗುತ್ತವೆ. ವಲಸಿಗರು ಬಹುತೇಕ ಈ ದೇಶದ ಮತದಾರರೂ ಆಗಿಬಿಟ್ಟಿದ್ದಾರೆ, ಈ ದೇಶದ ಸರಕಾರ ಯಾವುದಿರಬೇಕು ಎಂದು ನಿರ್ಧರಿಸುವ ಪವರ್ ಕೂಡ ಹೊಂದಿಬಿಡುತ್ತಾರೆ.
ಈ ನಿಷ್ಕ್ರಿಯತೆಯನ್ನು ಯಾವ ಪ್ರಜಾಪ್ರಭುತ್ವವೂ ಸಹಿಸಲಾಗುವುದಿಲ್ಲ. ಗಡಿ ನಿರ್ವಹಣೆ, ಆಂತರಿಕ ಪರಿಶೀಲನೆ ಮತ್ತು ಕಾನೂನಾತ್ಮಕವಾಗಿದ್ದರೂ ಗಡೀಪಾರು ಮಾಡುವುದು ಸೈದ್ದಾಂತಿಕ ನಿಲುವುಗಳಾಗುವುದಿಲ್ಲ. ಇದು ಪ್ರಭುತ್ವದ ಕರ್ತವ್ಯವಾಗಿರುತ್ತದೆ. ಸೆಕ್ಯುಲರಿಸಂ ಮತ್ತು ಸಹಾನುಭೂತಿಯ ನೆಪದಲ್ಲಿ ಆಡಳಿತದ ದುರವಸ್ಥೆಯನ್ನು ಸಹಿಸಲಾಗುವುದಿಲ್ಲ.
ಭಾರತ ನಿರಾಕರಣೆಯನ್ನು ಬಿಟ್ಟು ಸ್ಪಷ್ಟ ನಿಲುವಿಗೆ ಬದ್ಧವಾಗಬೇಕಿದೆ. ವಲಸಿಗ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಪಾರದರ್ಶಕತೆಯಿಂದ ಕಾನೂನು ಪ್ರಕ್ರಿಯೆಯನ್ನು ಪಾಲಿಸಬೇಕು ಅಥವಾ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗಬೇಕು. ಕೈ ತಪ್ಪಿಹೋಗಿರುವ, ನಿಯಂತ್ರಣದ ಗಡಿ ದಾಟಿರುವ ವ್ಯವಸ್ಥೆಯ ದುಷ್ಪರಿಣಾಮಗಳನ್ನು ಎದುರಿಸಬೇಕು. ಮತದಾರರ ತೀವ್ರ ತಪಾಸಣೆ (ಎಸ್ಐಆರ್) ಒಂದು ದಾರಿ ಎನಿಸಿದರೂ ಪ್ರತಿಪಕ್ಷಗಳ ವಿರೋಧದಿಂದಾಗಿ ಇದೂ ಹಳ್ಳ ಹಿಡಿಯುವ ಸಾಧ್ಯತೆ ಇದೆ.
Comments
Post a Comment