ಸಾರ್ವಜನಿಕ ಆಸ್ತಿಯ ಅವಿವೇಕದ ಬಳಕೆ: ಮಠಗಳಿಗೆ ಸರ್ಕಾರದ ಕಳವಳಕಾರಿ ಭೂದಾನ

 ಖುಲ್ಲಂಖುಲ್ಲಾ * ಬಿವಿಸೀ

32 ಧಾರ್ಮಿಕ ಮಠಗಳಿಗೆ ಬೃಹತ್ ಪ್ರಮಾಣದ ಸಾರ್ವಜನಿಕ ಭೂಮಿಯನ್ನು ಮಂಜೂರು ಮಾಡುವ ಕರ್ನಾಟಕ ಸರ್ಕಾರದ ನಿರ್ಧಾರವು ಕೇವಲ ರಾಜಕೀಯ ಓಲೈಕೆಯ ವಿಷಯವಲ್ಲ; ಇದು ಸರ್ಕಾರದ ಅಧಿಕಾರದ ಉದ್ದೇಶ ಮತ್ತು ಮಿತಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿದೆ.

ಸಿದ್ದರಾಮಯ್ಯ ಸರ್ಕಾರವು ಈ ಕ್ರಮವನ್ನು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಿದೆ, ಅಂದರೆ ಈ ಫಲಾನುಭವಿ ಮಠಗಳು ಹಿಂದುಳಿದ ಮತ್ತು ಪರಿಶಿಷ್ಟ ಜಾತಿಯ ಸಮುದಾಯಗಳನ್ನು ಪ್ರತಿನಿಧಿಸುತ್ತವೆ ಎಂದು ವಾದಿಸುತ್ತಿದೆ. ಈ ತರ್ಕವು ಮೂಲಭೂತವಾಗಿ ದೋಷಪೂರಿತ. ಸಾಮಾಜಿಕ ನ್ಯಾಯ ಎನ್ನುವುದು ಜನರಿಗಾದ ವಂಚನೆಯನ್ನು ಹೋಗಲಾಡಿಸುವುದಕ್ಕಾಗಿ ಇರಬೇಕೇ ಹೊರತು, ಧಾರ್ಮಿಕ ಸಂಸ್ಥೆಗಳಿಗೆ ಹೆಚ್ಚುವರಿ ಆಸ್ತಿಗಳನ್ನು ಒದಗಿಸುವುದಕ್ಕಲ್ಲ. ಕರ್ನಾಟಕದಲ್ಲಿರುವ ಯಾವುದೇ ಮಠಗಳು ಸಂಪನ್ಮೂಲಗಳ ಕೊರತೆ ಇರುವ ಸಂಸ್ಥೆಗಳೇನಲ್ಲ. ಅವು ಸಾಮಾಜಿಕ ಅಧಿಕಾರವನ್ನು ಹೊಂದಿವೆ, ಸಮುದಾಯದಿಂದ ನಿರಂತರ ದೇಣಿಗೆಗಳನ್ನು ಪಡೆಯುತ್ತವೆ ಮತ್ತು ಗಣನೀಯ ಆಸ್ತಿ ಹಾಗೂ ರಾಜಕೀಯ ಪ್ರಭಾವವನ್ನು ಹೊಂದಿವೆ. ಇವು ಸರ್ಕಾರದ ಭೂದಾನಕ್ಕೆ ಅರ್ಹತೆಯಿರುವಂಥ ಸಂಸ್ಥೆಗಳು ಎಂದು ಪರಿಗಣಿಸುವುದು ನ್ಯಾಯ ಮತ್ತು ಸಮಾನತೆಯ ಪರಿಕಲ್ಪನೆಯನ್ನೇ ಅಣಕಿಸಿದಂತಾಗುತ್ತದೆ.

ಹಾಗೆಯೇ, ಹಿಂದಿನ ಬಿಜೆಪಿ ಸರ್ಕಾರವು ಮಾಡಿದ ಇದೇ ರೀತಿಯ ಭೂ ಮಂಜೂರಾತಿಗಳನ್ನು ಬೊಟ್ಟು ಮಾಡಿ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ತಪ್ಪನ್ನು ಪುನರಾವರ್ತಿಸುವ ಮೂಲಕ ಸಮರ್ಥಿಸಿಕೊಳ್ಳುವುದು ಸರಿಯಾಗುವುದಿಲ್ಲ. ವಾಸ್ತವವಾಗಿ, ಅಂತಹ ಪದ್ಧತಿಗಳ ಬಗ್ಗೆ ಕಾಂಗ್ರೆಸ್ ಈ ಹಿಂದೆ ಮಾಡಿದ್ದ ಟೀಕೆಗಳು, ಈಗ ಅವುಗಳಿಂದ ದೂರವಿರಲು ಪ್ರೇರೇಪಿಸಬೇಕಿತ್ತೇ ಹೊರತು, ಬೇರೆ ಸೈದ್ಧಾಂತಿಕ ಹೆಸರಿನಲ್ಲಿ ಅದೇ ತಪ್ಪನ್ನು ಮುಂದುವರಿಸುವುದಕ್ಕಲ್ಲ.

ಇಂಥ ಭೂದಾನ ನಿರ್ಧಾರ ಬಿಂಬಿಸುವ ಅತ್ಯಂತ ಹಾನಿಕಾರಕ ಅಂಶವೆಂದರೆ ಅದು ನಿರ್ಮಿಸುವ `ಸಂಪ್ರದಾಯ'. ಕರ್ನಾಟಕದಲ್ಲಿ ವಿವಿಧ ಸಮುದಾಯಗಳ ನೂರಾರು ಮಠಗಳಿವೆ. ಒಮ್ಮೆ ಸರ್ಕಾರವು ಜಾತಿ ಅಥವಾ ಸಮುದಾಯದ ಆಧಾರದ ಮೇಲೆ ಭೂಮಿ ಹಂಚಲು ಆರಂಭಿಸಿದರೆ, ಮುಂದಿನ ದಿನಗಳಲ್ಲಿ ಇತರ ಮಠಗಳಿಂದ ಬರುವ ಬೇಡಿಕೆಗಳನ್ನು ತಿರಸ್ಕರಿಸಲು ಅದಕ್ಕೆ ಯಾವುದೇ ನೈತಿಕ ನೆಲೆ ಇರುವುದಿಲ್ಲ. ಇದರಿಂದಾಗಿ ಅತಿ ಅಮೂಲ್ಯವಾದ ಸಾರ್ವಜನಿಕ ಭೂಮಿಯು ನೈಜ ಸಾರ್ವಜನಿಕ ಅಗತ್ಯಗಳಿಗಾಗಿ ಬಳಕೆಯಾಗುವ ಬದಲಿಗೆ, ರಾಜಕೀಯ ಓಲೈಕೆಯ ಸ್ಪರ್ಧಾತ್ಮಕ ಸಾಧನವಾಗಿ ಬಳಸುವುದು ಅನಿವಾರ್ಯವಾಗುತ್ತದೆ.

ಸರ್ಕಾರಿ ಭೂಮಿಯನ್ನು ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ವಸತಿ ಯೋಜನೆಗಳು ಮತ್ತು ಮೂಲಸೌಕರ್ಯಗಳಂತಹ ಅಗತ್ಯ ಉದ್ದೇಶಗಳಿಗಾಗಿ ಕಾಯ್ದಿರಿಸಬೇಕು, ಇವು ಸಮಾಜದ ಪ್ರತಿಯೊಬ್ಬರಿಗೂ ಪ್ರಯೋಜನಕಾರಿಯಾಗುತ್ತವೆ. ಒಂದು ವೇಳೆ ಧಾರ್ಮಿಕ ಸಂಸ್ಥೆಗಳು ಶಾಲೆ ಅಥವಾ ಆಸ್ಪತ್ರೆಗಳನ್ನು ನಡೆಸಲು ಬಯಸಿದರೆ, ಅವು ಮಾರುಕಟ್ಟೆ ದರದಲ್ಲಿ ಪಾರದರ್ಶಕವಾಗಿ ಭೂಮಿಯನ್ನು ಖರೀದಿಸಲು ಅಥವಾ ಕಟ್ಟುನಿಟ್ಟಾದ ನಿಯಮಗಳ ಅಡಿಯಲ್ಲಿ ಸರ್ಕಾರದೊಂದಿಗೆ ಪಾಲುದಾರಿಕೆ ಹೊಂದಲು ಸಂಪೂರ್ಣ ಸಮರ್ಥವಾಗಿವೆ.

ವಿರೋಧ ಪಕ್ಷಗಳ ಮೌನವು ಈ ಅಧಿಕಾರದ ದುರುಪಯೋಗವನ್ನು ಪ್ರಶ್ನಿಸಲು ಇರುವ ಉಭಯಪಕ್ಷೀಯ ಹಿಂಜರಿಕೆಯನ್ನು ಎತ್ತಿ ತೋರಿಸುತ್ತದೆ. ಅದಕ್ಕಾಗಿಯೇ ಈ ವಿಷಯವು ಸಾರ್ವಜನಿಕ ವಲಯದಲ್ಲಿ ತೀವ್ರವಾದ ಚರ್ಚೆಗೆ ಒಳಗಾಗಬೇಕಿದೆ. ಇಲ್ಲದಿದ್ದರೆ, ಸಾಮಾಜಿಕ ನ್ಯಾಯ ಎನ್ನುವುದು ಅವಿವೇಕದ ಮತ್ತು ರಾಜಕೀಯ ಲಾಭದ ನಿರ್ಧಾರಗಳಿಗೆ ಬಳಸುವ ಅನುಕೂಲಕರ ಮುಸುಕಾಗಿ ಉಳಿಯುವ ಅಪಾಯವಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again