ಸಿದ್ದರಾಮಯ್ಯ, 
ಮಹೇಶ ಜೋಷಿ,

ಮಂಡ್ಯ ಸಾಹಿತ್ಯ ಸಮ್ಮೇಳನಕ್ಕಾಗಿ ರೂ 30 ಕೋಟಿ ವೆಚ್ಚದ

ಬಗ್ಗೆ ಲೋಕಾ ತನಿಖೆಗೆ ಕಸಾಪ ಒತ್ತಾಯ ಸಮರ್ಥನೀಯ


ಸತ್ಯವನ್ನು ಹೊರಗೆಡಹುವ ಸರ್ಕಾರ ಗೌರವ ಗಳಿಸುತ್ತದೆ. ಸತ್ಯವನ್ನು ಮುಚ್ಚಿಹಾಕುವುದು ಅಪನಂಬಿಕೆಯನ್ನು ಹೆಚ್ಚಿಸುತ್ತದೆ.

.............


ಇರೋ ವಿಚಾರ * ಬಿವಿಸೀ

 
ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಿದ್ದರಾಮಯ್ಯ ಸರ್ಕಾರದ ನಡುವೆ ಉದ್ಭವಿಸಿರುವ ವಿವಾದಗಳು ಕೊನೆಯಾಗುವಂತೆ ಕಾಣುತ್ತಿಲ್ಲ. ಭಿನ್ನಾಭಿಪ್ರಾಯದ ರೂಪದಲ್ಲಿ ಆರಂಭವಾದ ಸಂಘರ್ಷವು ಈಗ ಸಂಸ್ಥೆಯ ಸ್ವಾಯತ್ತತೆ ಮತ್ತು ಶತಮಾನದಷ್ಟು ಹಳೆಯದಾದ ಸಾಹಿತ್ಯ ಸಂಸ್ಥೆಯ ಘನತೆಯ ಪ್ರಶ್ನೆಯಾಗಿ, ಪೂರ್ಣ ಪ್ರಮಾಣದ ಸಂಘರ್ಷದ ಕೇಂದ್ರವಾಗಿದೆ. ಇದರ ಮೂಲ ಇರುವುದು ಸಂಸ್ಥೆಯ ಯಜಮಾನಿಕೆಯ ವಿಚಾರದಲ್ಲಿ. ಕನ್ನಡದ ಧ್ವನಿಯನ್ನು ಮತ್ತು ಸಾಹಿತ್ಯಿಕ ಅಸ್ಮಿತೆಯನ್ನು ನಿಜವಾಗಲೂ ಪ್ರತಿನಿಧಿಸುವವರು ಯಾರು ಎಂಬ ಪ್ರಶ್ನೆ ಜಟಿಲವಾಗಿದೆ.


ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಒಂದು ನಿರ್ಣಾಯಕ ಘಟ್ಟವಾಗಿದೆ. ಪಾರಂಪರಿಕವಾಗಿ ಈ ರೀತಿಯ ಸಮ್ಮೇಳನಗಳನ್ನು ಪರಿಷತ್ತು ಆಯೋಜಿಸುತ್ತದೆ. ಆದರೆ ಈ ಬಾರಿ ರಾಜ್ಯ ಸರ್ಕಾರವೇ ಇಡೀ ಸಮ್ಮೇಳನದ ಜವಾಬ್ದಾರಿ ವಹಿಸಿಕೊಂಡಿದ್ದು, ಪರಿಷತ್ತಿನ ಹೆಸರಿನಲ್ಲೇ ನಡೆದರೂ ಸಹ ಚುನಾಯಿತ ಅಧ್ಯಕ್ಷ ಮಹೇಶ್ ಜೋಷಿ ಅವರನ್ನು ಒಳಗೊಳ್ಳದೆ ನಡೆಸಲಾಯಿತು. ಜೋಷಿ ಅವರನ್ನು ಹೊರಗಿಡುವ ನಿರ್ಧಾರ ಉದ್ದೇಶಪೂರ್ವಕವಾಗಿದ್ದು, ಸಂಸ್ಥೆಯ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನವಾಗಿತ್ತು. ಹೀಗೆ ಮಾಡುವುದರ ಮೂಲಕ ಸರ್ಕಾರವು ಪರಿಷತ್ತಿನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿರುವುದೇ ಅಲ್ಲದೆ, ಈ ಸಾಂಸ್ಕøತಿಕ ಚಟುವಟಿಕೆಯನ್ನು ರಾಜಕೀಕರಣಗೊಳಿಸಿತ್ತು. ವಾಸ್ತವವಾಗಿ ಇದು ರಾಜಕೀಯ, ಪಕ್ಷದ ಹಿತಾಸಕ್ತಿಗಳನ್ನು ದಾಟಿ ನಡೆಯಬೇಕಿತ್ತು.

ಇದು ಕೇವಲ ಸಂಸ್ಥೆಯ ಹೆಮ್ಮೆಯ, ಗೌರವದ ವಿಷಯವಲ್ಲ. ಅಲ್ಲಿ ಹಣಕಾಸು ಮತ್ತು ನೈತಿಕ ಆಯಾಮಗಳೂ ಇರುವುದನ್ನು ಗಮನಿಸಬೇಕಿದೆ. ಸರ್ಕಾರವು ಮಂಡ್ಯ ಸಮ್ಮೇಳನಕ್ಕೆ 30 ಕೋಟಿ ರೂ ಖರ್ಚು ಮಾಡಿದೆ. ಇದರ ಕೇವಲ ಶೇಕಡಾ ಹತ್ತರಷ್ಟು ಹಣವನ್ನು ಮಾತ್ರ ಸಮ್ಮೇಳನವನ್ನು ಆಯೋಜಿಸುವುದಕ್ಕಾಗಿ ಖರ್ಚು ಮಾಡಲಾಗಿರುತ್ತದೆ, ಉಳಿದ ಹಣವನ್ನು ಸ್ಥಳೀಯ ರಾಜಕಾರಣಿಗಳು ಮತ್ತು ಸಚಿವ ಚೆಲುವರಾಯಸ್ವಾಮಿ ಅವರ ನಿಕಟವರ್ತಿಗಳಿಂದ ದುರುಪಯೋಗವಾಗಿದೆ ಎನ್ನಲಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ಪರಿಷತ್ತು ತನ್ನ ಲೆಕ್ಕ ಪತ್ರಗಳನ್ನು ಪರಿಶೀಲನೆಗೆ ಒದಗಿಸಲು ಸಿದ್ಧವಾಗಿದ್ದು, ಸರ್ಕಾರದ ಖರ್ಚು ವೆಚ್ಚಗಳೇ ಪಾರದರ್ಶಕತೆಯ ಕೊರತೆ ಎದುರಿಸುತ್ತಿದೆ. ರಾಜ್ಯ ಸರ್ಕಾರವು ಪರಿಷತ್ತಿನ ಒಳಗೆ ನಡೆಯುತ್ತಿರುವ ಅವ್ಯವಹಾರಗಳ ತನಿಖೆ ನಡೆಸಲು ಸಮಿತಿಯೊಂದನ್ನು ನೇಮಿಸಿದೆ; ಆದರೆ ತನ್ನದೇ ಖರ್ಚು ವೆಚ್ಚಗಳನ್ನು ಸಾರ್ವಜನಿಕವಾಗಿ ಮಂಡಿಸಲು ನಿರಾಕರಿಸುತ್ತಿದೆ. ಇದು ಸರ್ಕಾರದ ದ್ವಂದ್ವ ನೀತಿಯನ್ನು ತೋರಿಸುತ್ತದೆ. ಪಾರದರ್ಶಕತೆಯೇ ಮೂಲ ತತ್ವ ಆಗಿದ್ದಲ್ಲಿ, ಎರಡೂ ಬದಿಗಳಲ್ಲಿ ಅನ್ವಯಿಸಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಪರಿಷತ್ತಿನ ಲೋಕಾಯುಕ್ತ ತನಿಖೆಯ ಆಗ್ರಹವು ತರ್ಕಬದ್ಧವಾಗಿದ್ದು, ಸಾರ್ವಜನಿಕರ ಹಣಕ್ಕೆ ಉತ್ತರದಾಯಿತ್ವ ಇರಬೇಕಾಗುತ್ತದೆ. ಸರ್ಕಾರವು ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವಾಗ, 30 ಕೋಟಿ ರೂ ಬಳಕೆ ಮತ್ತು ದುರುಪಯೋಗವನ್ನು ನಿರ್ಲಕ್ಷಿಸಲಾಗುವುದಿಲ್ಲ. ಸತ್ಯಾಂಶ ಮತ್ತು ಪಾರದರ್ಶಕತೆಗಳು ಆಯ್ಕೆಯ ವಿಚಾರವಾಗುವುದಿಲ್ಲ, ಇದು ಸಾರ್ವಜನಿಕ ವಿಶ್ವಾಸದ ತಳಹದಿಯಾಗಿರುತ್ತದೆ.

ರಾಜ್ಯ ಸರ್ಕಾರವು ಪರಿಷತ್ತಿನ ಬೇಡಿಕೆಯನ್ನು ನಿರ್ಲಕ್ಷಿಸಿದರೆ, ಪರಿಷತ್ತು ನ್ಯಾಯಾಲಯದ ಮೆಟ್ಟಿಲೇರುವುದು ತಪ್ಪಾಗುವುದಿಲ್ಲ. ನ್ಯಾಯಾಂಗದ ಮದ್ಯಸ್ತಿಕೆಗಾಗಿ ಆಗ್ರಹಿಸುವುದು ಬಂಡಾಯದ ಲಕ್ಷಣ ಎನಿಸಿದರೂ ನ್ಯಾಯಯುತವಾಗಿದೆ, ಸರ್ಕಾರದ ನಡವಳಿಕೆಗೆ ಸೂಕ್ತ ಪ್ರಜಾಸತ್ತಾತ್ಮಕ ಪ್ರತಿಕ್ರಿಯೆಯಾಗಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಸಾಧಾರಣ ಸಂಸ್ಥೆಯಲ್ಲ. ಇದು ಕರ್ನಾಟಕದ ಸಾಹಿತ್ಯ ಪ್ರಜ್ಞೆಯ ಸಂಕೇತವಾಗಿದ್ದು, ಕನ್ನಡ ಬರಹಗಾರರ, ಓದುಗರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ಈ ಸಂಸ್ಥೆಯ ಸ್ವಾಯತ್ತತೆಯನ್ನು ಕಾಪಾಡುವುದು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವಷ್ಟೇ ಮುಖ್ಯವಾಗಿರುತ್ತದೆ.

ಅಂತಿಮವಾಗಿ, ಸರ್ಕಾರವು ಸಾಂಸ್ಕೃತಿಕ ಸಂಸ್ಥೆಗಳನ್ನು ದಮನಿಸುವುದು ಅಥವಾ ಅವುಗಳನ್ನು ದಾಟಿ ಕಾರ್ಯನಿರ್ವಹಿಸುವುದು ನೈತಿಕ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಂತಾಗುತ್ತದೆ. ರಾಜಕೀಯ ಅನುಕೂಲತೆಗಿಂತಲೂ ಸರ್ಕಾರ ಪಾರದರ್ಶಕತೆಯನ್ನು ಗೌರವಿಸುತ್ತದೆ ಎಂದು ನಿರೂಪಿಸಲು ಸಿದ್ದರಾಮಯ್ಯ ಆಡಳಿತಕ್ಕೆ ಇಲ್ಲಿ ಒಂದು ಅವಕಾಶ ಇದೆ. ಕನ್ನಡದ ಸಲುವಾಗಿ, ನ್ಯಾಯಪರತೆಗಾಗಿ, ತನ್ನದೇ ಆದ ವರ್ಚಸ್ಸು ಮತ್ತು ಗೌರವದ ದೃಷ್ಟಿಯಿಂದ ಸರ್ಕಾರವು ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ನಿಯೋಜಿಸಲಾದ ಹಣಕಾಸಿನ ಬಗ್ಗೆ ವಾಸ್ತವಾಂಶಗಳನ್ನು ಸಾರ್ವಜನಿಕರಿಗೆ ತಿಳಿಸಬೇಕಿದೆ.

ಸತ್ಯವನ್ನು ಹೊರಗೆಡಹುವ ಸರ್ಕಾರ ಗೌರವ ಗಳಿಸುತ್ತದೆ. ಸತ್ಯವನ್ನು ಮುಚ್ಚಿಹಾಕುವುದು ಅಪನಂಬಿಕೆಯನ್ನು ಹೆಚ್ಚಿಸುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again